ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ತಿದ್ದುಪಡಿ ವಿಧೇಯಕ-2026 ವಿರೋಧಿಸಿ ಸೆ.5 ಮತ್ತು 6ರಂದು ಬೆಂಗಳೂರಿನ ಎಲ್ಲ ಉದ್ಯಾನವನಗಳಲ್ಲಿ ‘ಪಾರ್ಕ್ ಉಳಿಸಿ, ಬೆಂಗಳೂರು ರಕ್ಷಿಸಿ’ ಎಂಬ ಅಭಿಯಾನದ ಅಂಗವಾಗಿ ಪ್ರತಿಭಟನೆ ಮಾಡುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಹೇಳಿದ್ದಾರೆ.
-ಸಾರ್ವಜನಿಕರಿಂದ ಸಹಿ ಸಂಗ್ರಹ; ವಿರೋಧ ಪಕ್ಷದ ನಾಯಕ ಆರ್.ಅಶೋಕ್ । ಎಲ್ಲ ಶಾಸಕರು, ಮಾಜಿ ಶಾಸಕರಿಂದ ಎಲ್ಲ ಪಾರ್ಕ್ಗಳಲ್ಲಿ ಹೋರಾಟ
ಕನ್ನಡಪ್ರಭ ವಾರ್ತೆ ಬೆಂಗಳೂರುಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ತಿದ್ದುಪಡಿ ವಿಧೇಯಕ-2026 ವಿರೋಧಿಸಿ ಸೆ.5 ಮತ್ತು 6ರಂದು ಬೆಂಗಳೂರಿನ ಎಲ್ಲ ಉದ್ಯಾನವನಗಳಲ್ಲಿ ‘ಪಾರ್ಕ್ ಉಳಿಸಿ, ಬೆಂಗಳೂರು ರಕ್ಷಿಸಿ’ ಎಂಬ ಅಭಿಯಾನದ ಅಂಗವಾಗಿ ಪ್ರತಿಭಟನೆ ಮಾಡುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇದೇ ಶನಿವಾರ ಮತ್ತು ಭಾನುವಾರ ಎಲ್ಲ ಉದ್ಯಾನಗಳಲ್ಲಿ ಪ್ರತಿಭಟನೆ ಮಾಡುತ್ತೇವೆ. ನಾಗರಿಕರಿಂದ ಸಹಿ ಪಡೆದು ರಾಜ್ಯಪಾಲರಿಗೆ ತಲುಪಿಸುತ್ತೇವೆ. ಈ ಅಭಿಯಾನದಲ್ಲಿ ಬಿಜೆಪಿಯ ಎಲ್ಲ ಶಾಸಕರು, ಮಾಜಿ ಶಾಸಕರು, ಮುಖಂಡರು ಸೇರಿದಂತೆ ಎಲ್ಲರೂ ಪಾಲ್ಗೊಳ್ಳಲ್ಲಿದ್ದಾರೆ ಎಂದರು.ರಿಯಲ್ ಎಸ್ಟೇಟ್ ಮಾಫಿಯಾದ ತಾಳಕ್ಕೆ ತಕ್ಕಂತೆ ಕುಣಿಯುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉದ್ಯಾನವನಗಳ ಕಬಳಿಕೆಗೆ ಬಿಲ್ ಮೂಲಕ ಅವಕಾಶ ನೀಡಿದ್ದಾರೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಉದ್ಯಾನಗಳನ್ನು ರಕ್ಷಿಸಬೇಕು. ಈಗ ಶೇ.5 ಎಂದು ಹೇಳಿ ಮುಂದೆ ಅದನ್ನು ಶೇ.50ಕ್ಕೆ ಹೆಚ್ಚಿಸಬಹುದು. ನಾಡಪ್ರಭು ಕೆಂಪೇಗೌಡರು ಕೆರೆಗಳನ್ನು ಕಟ್ಟಿ ಗಾರ್ಡನ್ ಸಿಟಿ ಮಾಡಿದ್ದರು. ಈಗ ಇವರು ಉದ್ಯಾನಗಳನ್ನು ನಾಶ ಮಾಡಿದರೆ ದೆಹಲಿಯಂತೆ ವಾಯು ಮಾಲಿನ್ಯ ನಗರವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದೇ ಕಾಂಗ್ರೆಸ್ ಸರ್ಕಾರ 40 ವರ್ಷದ ಹಿಂದೆ ಪಾರ್ಕ್, ಕ್ರೀಡಾಂಗಣದಲ್ಲಿ ಅನ್ಯ ಉದ್ದೇಶಕ್ಕಾಗಿ ಬಳಸಬಹುದು ಎಂದು ಕಾನೂನು ತಂದಿತ್ತು. ನಂತರ ಹೋರಾಟ ನಡೆದು ಅದನ್ನು ವಾಪಸ್ ಪಡೆಯಲಾಯಿತು. ಈಗ ಮತ್ತೆ ಅದೇ ಕಾನೂನು ಬರುತ್ತಿದೆ. ಮುಖ್ಯಮಂತ್ರಿ ಅವರು ಈ ಮಸೂದೆಯನ್ನು ವಾಪಸ್ ಪಡೆಯುವುದಿಲ್ಲ, ಚರ್ಚೆಗೆ ಅವಕಾಶ ನೀಡುತ್ತೇವೆ ಎಂದು ಸರ್ಕಾರ ಹೇಳಿದ್ದಾರೆ. ಚರ್ಚೆ ಬೇಕಿಲ್ಲ, ಮಸೂದೆ ಹಿಂಪಡೆಯಬೇಕು ಎಂದು ಅಶೋಕ್ ಆಗ್ರಹಿಸಿದರು.ಸುರಂಗ ರಸ್ತೆ ಯೋಜನೆಯಲ್ಲಿ ಪಾರ್ಕಿಂಗ್ನ ಅಗತ್ಯವಿಲ್ಲ. ಮಾಲ್ ನಿರ್ಮಿಸಲು ಲಾಲ್ ಬಾಗ್ ಜಾಗವನ್ನು ಬಳಸಲು ನಿರ್ಧರಿಸಿದ್ದಾರೆ. ಯೋಜನೆ ಗುತ್ತಿಗೆ ಪಡೆದಿರುವ ಗೌತಮ್ ಅದಾನಿ ಅವರನ್ನು ಮನೆಗೆ ಕರೆಸಿ ತಿಂಡಿ ತಿನ್ನಿಸಿ ಕಳುಹಿಸಿದ್ದಾರೆ. ದೆಹಲಿಯಲ್ಲಿ ರಾಹುಲ್ ಗಾಂಧಿ ಅದೇ ಅದಾನಿಯನ್ನು ಟೀಕೆ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.