ಸಾರಾಂಶ
ಕನ್ನಡಪ್ರಭ ವಾರ್ತೆ ಸಾಗರ / ಹೊಸನಗರ
ಪ್ರಧಾನಿ ನರೇಂದ್ರ ಮೋದಿಯವರು ಒಬಿಸಿಗೆ ಸೇರಿದವರಲ್ಲ ಎಂದಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ, ಬಿಜೆಪಿ ಒಬಿಸಿ ಮೋರ್ಚಾ ವತಿಯಿಂದ ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ರಾಹುಲ್ ಗಾಂಧಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಜಿಲ್ಲಾ ಒಬಿಸಿ ಪ್ರಧಾನ ಕಾರ್ಯದರ್ಶಿ ರಾಜಶೇಖರ ಗಾಳಿಪುರ ಮಾತನಾಡಿ, ಜಗತ್ತು ಮೆಚ್ಚಿರುವ ಜನನಾಯಕ ನರೇಂದ್ರ ಮೋದಿಯವರ ಕಾರ್ಯಕ್ಷಮತೆ ಯನ್ನು ಸಹಿಸಲಾಗದ ರಾಹುಲ್ ಗಾಂಧಿ ಅವರು ದೇಶದ ಪ್ರಧಾನಿಗೆ ಪದೇಪದೆ ಅಗೌರವ ತರುವ ರೀತಿ ನಡೆದುಕೊಳ್ಳುತ್ತಿದ್ದಾರೆ. ಅವರು ಸಾರ್ವಜನಿಕವಾಗಿ ಪ್ರಧಾನಿ ಹುದ್ದೆಯಲ್ಲಿರುವವರ ಬಗ್ಗೆ ಜಾತಿ ನಿಂದನೆಯ ಮಾತನಾಡುವುದು ಅಕ್ಷಮ್ಯ ಎಂದು ಹೇಳಿದರು.
ಒಬಿಸಿ ಜಿಲ್ಲಾ ಪ್ರಭಾರಿ ಕೆ.ಎಸ್.ಪ್ರಶಾಂತ್ ಮಾತನಾಡಿ, ಕಾಂಗ್ರೆಸ್ ಪಕ್ಷವು ಜಾತಿಯನ್ನು ಆಧರಿಸಿ ಚುನಾವಣೆಯನ್ನು ಗೆಲ್ಲಬೇಕು ಎನ್ನುವ ದುರುದ್ದೇಶ ಹೊಂದಿರುವುದು ಇದರಿಂದ ಅರಿವಾಗುತ್ತಿದೆ. ಮತ್ತೊಮ್ಮೆ ಸೋಲುವ ಭೀತಿಯಿಂದ ಹತಾಶರಾಗಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರ ಜಾತಿ ಬಗ್ಗೆ ಮಾತನಾಡಿ, ತಮ್ಮ ಕೀಳುಮಟ್ಟದ ರಾಜಕೀಯ ತೋರಿಸಿಕೊಟ್ಟಿದ್ದಾರೆ. ಪ್ರಧಾನಿ ಹುದ್ದೆಗೆ ಅವಮಾನವೆಸಗಿರುವ ರಾಹುಲ್ ಗಾಂಧಿ ದೇಶವಾಸಿಗಳ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.ಬಿಜೆಪಿ ನಗರ ಅಧ್ಯಕ್ಷ ಕೆ.ಆರ್.ಗಣೇಶ ಪ್ರಸಾದ್, ಪ್ರಮುಖರಾದ ಶ್ರೀನಿವಾಸ್ ಮೇಸ್ತ್ರಿ, ಮಧುರಾ ಶಿವಾನಂದ್ ಮಾತನಾಡಿದರು. ಗ್ರಾಮಾಂತರ ಘಟಕದ ಅಧ್ಯಕ್ಷ ದೇವೇಂದ್ರಪ್ಪ, ಆನಂದ ಜನ್ನೆಹಕ್ಲು, ಅರುಣಕುಗ್ವೆ, ಮಂಜು ಪಾನಿಪುರಿ, ಸತೀಶ್, ಸವಿತಾ ವಾಸು, ಪ್ರೇಮಾ ಸಿಂಗ್, ಕೃಷ್ಣ ಶೇಟ್ ಮೊದಲಾದವರು ಭಾಗವಹಿಸಿದ್ದರು.
ರಾಹುಲ್ ಕ್ಷಮೆ ಯಾಚನೆಗೆ ಆಗ್ರಹಿಸಿ ಒಬಿಸಿ ಮೋರ್ಚಾ ಪ್ರತಿಭಟನೆಹೊಸನಗರ: ಹಿಂದುಳಿದ ವರ್ಗಕ್ಕೆ ಅವಹೇಳನ ಮಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಸಿಎಂ ಮೋರ್ಚಾ ಅಧ್ಯಕ್ಷ ಎಂ.ಎನ್.ಸುಧಾಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಇವರಿಗೆ ಮನವಿ ಸಲ್ಲಿಸಿದರು.
1994ರಲ್ಲಿ ಕಾಂಗ್ರೆಸ್ ಆಡಳಿತದ ರಾಜ್ಯ ಸರ್ಕಾರವೇ ತೇಲಿ ಅಥವಾ ಗಾಣಿಗ ಸಮಾಜವನ್ನು ಒಬಿಸಿ ಪಟ್ಟಿಗೆ ಸೇರಿಸಿದೆ. ನಂತರ 1999ರಲ್ಲಿ ಕೇಂದ್ರ ಸರ್ಕಾರವು ಒಬಿಸಿ ಪಟ್ಟಿಗೆ ಸೇರಿಸಿದೆ ಎಂದು ದಾಖಲೆ ನೀಡಿದರು.ಬಹಳ ಹಿಂದುಳಿದ ಸಮಾಜದಿಂದ ಹೋರಾಟದ ಮೂಲಕ ಪ್ರಧಾನ ಮಂತ್ರಿಯಾದ ಮೋದಿಯವರ ಸಮುದಾಯವನ್ನು ಅವಹೇಳನ ಮಾಡುವ ಮೂಲಕ ಎಲ್ಲಾ ಹಿಂದುಳಿದ ವರ್ಗಕ್ಕೆ ಮೋಸ ಮಾಡಿದ್ದಾರೆ ಎಂದರು.ಅಸಂಬದ್ಧ, ಅಪ್ರಬುದ್ಧ ಹೇಳಿಕೆಗೆಗಳನ್ನು ಹಲವು ವರ್ಷಗಳಿಂದ ನೀಡುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನ ಮಂತ್ರಿ ಹಾಗೂ ಒಬಿಸಿ ವರ್ಗವನ್ನು ಕ್ಷಮೆ ಯಾಚಿಸಬೇಕು ಇಲ್ಲವಾದರೆ ಉಗ್ರÀ ಹೋರಾಟ ಅನಿವಾರ್ಯ ಎಂದು ಅವರು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಬಿಜೆಪಿ ಒಬಿಸಿ ಮೋರ್ಚಾ ರೂಪಾ ಮಾಲತೇಶ್, ರಾಜಶೇಖರ್, ಪ್ರಶಾಂತ್, ರೇಖಾ ರವಿ, ಕಾಲಸಸಿ ಸತೀಶ್ ಮತ್ತಿತರರು ಇದ್ದರು.
ಹೊಸನಗರದಲ್ಲಿ ಹಿಂದುಳಿದ ವರ್ಗಕ್ಕೆ ಅವಹೇಳನ ಮಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಬಿಜೆಪಿಯ ಜಿಲ್ಲಾ ಬಿಸಿಎಂ ಮೋರ್ಚಾ ಅಧ್ಯಕ್ಷ ಎಂ.ಎನ್.ಸುಧಾಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಇವರಿಗೆ ಮನವಿ ಸಲ್ಲಿಸಿದರು.