ಪೊಲೀಸ್‌ ಅಧಿಕಾರಿಗಳ ಅಮಾನತು ಖಂಡಿಸಿ ಬಿಜೆಪಿ ಪ್ರತಿಭಟನೆ

| Published : Jun 07 2025, 12:18 AM IST / Updated: Jun 07 2025, 12:19 AM IST

ಪೊಲೀಸ್‌ ಅಧಿಕಾರಿಗಳ ಅಮಾನತು ಖಂಡಿಸಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

11 ಜನ ಸಾವಿಗೀಡಾಗಿರುವುದಕ್ಕೆ ರಾಜ್ಯ ಸರ್ಕಾರವೇ ಹೊಣೆ

ಹುಬ್ಬಳ್ಳಿ: ಆರ್‌ಸಿಬಿ ವಿಜಯಯಾತ್ರೆ ವೇಳೆ ನಡೆದ ದುರಂತದ ತಪ್ಪನ್ನು ಮರೆಮಾಚಲು ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪೂರ್ವ ಕ್ಷೇತ್ರದ ಕಾರ್ಯಕರ್ತರು ದಾಜಿಬಾನ್‌ ಪೇಟೆಯಲ್ಲಿನ ತುಳಜಾಭವಾನಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರೆ,ಸೆಂಟ್ರಲ್‌ ಕ್ಷೇತ್ರದ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು. ಎರಡು ಕಡೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಸರ್ಕಾರ ತನ್ನ ತಪ್ಪನ್ನು ಮರೆಮಾಚಲು ಅಧಿಕಾರಿಗಳನ್ನು ಅಮಾನತು ಮಾಡುತ್ತಿದೆ. ಇದು ಖಂಡನೀಯ ಎಂದು ಕಿಡಿಕಾರಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವು ಮೆಣಸಿನಕಾಯಿ ಮಾತನಾಡಿ, 11 ಜನ ಸಾವಿಗೀಡಾಗಿರುವುದಕ್ಕೆ ರಾಜ್ಯ ಸರ್ಕಾರವೇ ಹೊಣೆ. ಸರಿಯಾಗಿ ಬಂದೋಬಸ್ತ್‌ ಏರ್ಪಡಿಸುವ ಗೋಜಿಗೆ ಹೋಗದೇ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿರುವುದೇ ದುರಂತಕ್ಕೆ ಕಾರಣ. ಆದರೆ ಇದೀಗ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಕಿಡಿಕಾರಿದರು.

ಹು-ಧಾ ಪೂರ್ವ ಅಧ್ಯಕ್ಷ ಮಂಜುನಾಥ ಕಾಟಕರ, ರಾಜ್ಯ ಓಬಿಸಿ ಮೋರ್ಚಾ ಉಪಾಧ್ಯಕ್ಷ ಸತೀಶ ಶೇಜವಾಡಕರ, ಪ್ರಭು ನವಲಗುಂದಮಠ, ಅನೂಪ ಬಿಜವಾಡ, ಸಂತೋಷ ಅರಕೇರಿ, ಶಶಿಕಾಂತ ಬಿಜವಾಡ, ಹು-ಧಾ ಪೂರ್ವ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ ಕುಬಸದ, ಮಾಧ್ಯಮ ಸಂಚಾಲಕ ಲಕ್ಷ್ಮೀಕಾಂತ ಘೋಡಕೆ, ತೋಟಪ್ಪ ನೀಡಗೊಂದಿ, ರಾಜು ಜರ್ತಾರಘರ್, ವಿಜಯ ಗುಂಟ್ರಾಲ, ಪ್ರೀತಮ್ ಅರಕೇರಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.