ಸಾರಾಂಶ
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ, ಅಲ್ಪಸಂಖ್ಯಾತರ ಓಲೈಕೆ ನೀತಿ ಖಂಡಿಸಿ ಹಾಸನ, ಕಾರವಾರ, ಬಳ್ಳಾರಿ ಸೇರಿ ರಾಜ್ಯದ ಹಲವೆಡೆ ಮಂಗಳವಾರ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು.ಬಳ್ಳಾರಿಯ ಕನಕದಾಸ ವೃತ್ತದಲ್ಲಿ ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಇದೇ ವೇಳೆ, ಕಾರವಾರ ಸೇರಿ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದವು.
ಹಾಸನದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪಾಲ್ಗೊಂಡಿದ್ದರು. ಹಾಸನದ ಹಳೆ ತಹಸೀಲ್ದಾರ್ ಕಚೇರಿ ಬಳಿಯಿಂದ ಮಹಾವೀರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಬಳಿಕ, ಮಹಾವೀರ ವೃತ್ತದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದ ವಿಜಯೇಂದ್ರ, ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು. ಇಂತಹ ಜನ ವಿರೋಧಿ ಸರ್ಕಾರವನ್ನು ಎಂದೂ ನೋಡಿರಲಿಲ್ಲ.
ಹಿಂದುಗಳ, ಬಡವರ ವಿರೋಧಿ ಸರ್ಕಾರವನ್ನು ಕಿತ್ತೊಗೆಯಬೇಕು. ಆದರೆ, ಈ ಸರ್ಕಾರ ಬೀಳಿಸಲು ಯಾರೂ ಬೇಕಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕರೇ ಸಾಕು ಎಂದು ಭವಿಷ್ಯ ನುಡಿದರು.ಜನರ ಹಣ ಲೂಟಿ ಮಾಡಿ ಕಾಂಗ್ರೆಸ್ ಹೈಕಮಾಂಡ್ ಹೊಟ್ಟೆ ತುಂಬಿಸಲು ಇವರು ಮುಂದಾಗಿದ್ದಾರೆ. ನಾವು ಬಿಜೆಪಿಯವರು ಮುಸಲ್ಮಾನರ ವಿರೋಧಿಗಳಲ್ಲ. ಆದರೆ, ಬಿಜೆಪಿ ದೇಶದ್ರೋಹಿಗಳ ವಿರೋಧಿಗಳು. ಗುತ್ತಿಗೆಯಲ್ಲಿ ಮುಸಲ್ಮಾನರಿಗೆ ಶೇಕಡಾ 4ರಷ್ಟು ಮೀಸಲಾತಿ ಕೊಡ್ತಿರಾ!.
ಹಿಂದುಗಳಲ್ಲಿ ಯಾರೂ ಬಡವರು ಇಲ್ಲವಾ ಎಂದು ಪ್ರಶ್ನೆ ಮಾಡಿದರು. ಇಂತಹ ದರಿದ್ರ ಸರ್ಕಾರ ನೋಡಿಯೇ ಇಲ್ಲ ಎಂದು ಕಾಂಗ್ರೆಸ್ನ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಹೇಳ್ತಾರೆ. ಈ ಸರ್ಕಾರ ಅನುದಾನ ನೀಡುತ್ತಿಲ್ಲ, ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಅನ್ನಿಸುತ್ತಿದೆ ಎಂದು ಅವರ ಪಕ್ಷದ ಶಾಸಕ ರಾಜುಕಾಗೆ ಹೇಳ್ತಾರೆ ಎಂದರು.