ತೈಲ ಬೆಲೆ ಏರಿಕೆ ಖಂಡಿಸಿ ಚನ್ನರಾಯಪಟ್ಟಣದಲ್ಲಿ ಬಿಜೆಪಿ ಪ್ರತಿಭಟನೆ

| Published : Jun 23 2024, 02:12 AM IST

ತೈಲ ಬೆಲೆ ಏರಿಕೆ ಖಂಡಿಸಿ ಚನ್ನರಾಯಪಟ್ಟಣದಲ್ಲಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ವತಿಯಿಂದ ಚನ್ನರಾಯಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಕೆ.ಆರ್.ವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿ ಮುಖಂಡರು, ಕಾರ್ಯಕರ್ತರು ನೂರಾರು ಮಂದಿ ಭಾಗಿಯಾಗಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ತೊಲಗಲಿ ತೊಲಗಲಿ ಕಾಂಗ್ರೆಸ್ ಸರ್ಕಾರ ತೊಲಗಲಿ ಎಂಬ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಧರಣಿ । ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ । ಕಾಂಗ್ರೆಸ್‌ ಸರ್ಕಾರ ತೊಲಗಲಿ ಎಂದು ಘೋಷಣೆ ಕೂಗಿ ಆಕ್ರೋಶ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ರಾಜ್ಯದ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ನೆಮ್ಮದಿಯಿಂದ ಓಡಾಡಲು ಸಾಧ್ಯವಾಗದ ಪರಿಸ್ಥಿತಿಯಿದೆ. ಸರ್ಕಾರ ೫೩೬೦ ಎಕರೆ ಭೂಮಿಯ ಮಾರಾಟಕ್ಕೆ ಮುಂದಾಗಿದ್ದು, ಇದುವರೆಗಿನ ಯಾವ ಸರ್ಕಾರವೂ ಮಾಡದಿರುವ ದ್ರೋಹ ಮಾಡಲಾಗುತ್ತಿದೆ. ಹಿಂದುತ್ವದ ಮೇಲಿನ ದ್ವೇಷ ರಾಜಕಾರಣದಿಂದ ಈ ರೀತಿ ಮಾಡುತ್ತಿದೆ. ನಗರದ ಕೆ.ಆರ್.ವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿ ಮುಖಂಡರು, ಕಾರ್ಯಕರ್ತರು ನೂರಾರು ಮಂದಿ ಭಾಗಿಯಾಗಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ತೊಲಗಲಿ ತೊಲಗಲಿ ಕಾಂಗ್ರೆಸ್ ಸರ್ಕಾರ ತೊಲಗಲಿ ಎಂಬ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಜನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿದ್ದಾರೆ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂಶುಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದೆ. ಜನರನ್ನು ಅಗೌರವದಿಂದ ನೋಡುತ್ತಿದೆ. ಒಂದೆಡೆ ಅಭಿವೃದ್ಧಿ ನಿಂತು ಹೋಗಿದ್ದರೆ, ಇನ್ನೊಂದಡೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಭ್ರಷ್ಟಾಚಾರ ರಾಜ್ಯದಲ್ಲಿ ಮಿತಿ ಮೀರಿದೆ ಎಂದು ಕಿಡಿಕಾರಿದರು.

ಮುಖಂಡ ಹಡೇನಹಳ್ಳಿ ಲೊಕೇಶ್, ಧರಣೇಶ್ ಮಾತನಾಡಿ, ಕಳೆದ ಒಂದು ವರ್ಷದಿಂದ ತಿಂಗಳಿಗೆ ಒಂದೊಂದರಂತೆ ೯ ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿದೆ. ವಿದ್ಯುತ್ ದರವನ್ನು ಹೆಚ್ಚಿಸಿ ರೈತರ ಹೆಗಲಿಗೆ ಬರೆ ಎಳೆಯಲಾಗಿದೆ. ಗ್ಯಾರಂಟಿಗಾಗಿ ಪರಿಶಿಷ್ಟರ ೧೧ ಸಾವಿರ ಕೋಟಿ ರು. ಬಳಕೆ ಮಾಡಿ ದ್ರೋಹವೆಸಗಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ಕರಸೇವಕ ಬಂಧನ, ಸಕಾಲಕ್ಕೆ ಸಾಲ ನೀಡಿಲ್ಲ. ಆಸ್ತಿ ತೆರಿಗೆ ಹೆಚ್ಚಿಸಿದೆ. ಮಹಿಳೆಯರಿಗೆ ಉಚಿತ ಪಯಣ ಕಲ್ಪಿಸಿ ಇತ್ತ ಟಿಕೆಟ್ ದರ ಹೆಚ್ಚಿಸಿ ಗಂಡಸರಿಂದ ವಸೂಲಿ ಮಾಡಲಾಗುತ್ತಿದೆ. ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದರು.

ಇಂಧನದ ಬೆಲೆ ಏರಿಕೆಗೊಂಡರೆ ಕೇವಲ ಪೆಟ್ರೋಲ್ -ಡಿಸೇಲ್ ಬೆಲೆ ಏರಿಕೆಯಾಗಲ್ಲ, ತರಕಾರಿಗಳು, ಆಹಾರ ಪದಾರ್ಥಗಳು, ಹೋಟೆಲ್ ತಿಂಡಿ ತಿನಿಸುಗಳ ಬೆಲೆಯೂ ದುಪ್ಪಟ್ಟಾಗಲಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರಘುರಾಜೇಗೌಡ, ನಿಂಬೇಹಳ್ಳಿ ಗಿರೀಶ್, ವಕೀಲರಾದ ಕೇಶವಮೂರ್ತಿ, ಚಾಯಾಕೃಷ್ಣ, ಬಾಸ್ಕರಾಚಾರ್, ರೂಪೇಶ್ ಮತ್ತಿತರರು ಭಾಗವಹಿಸಿದ್ದರು.