ಸಿದ್ದರಾಮಯ್ಯರನ್ನು ಸದೆಬಡಿಯುವ ಬಿಜೆಪಿಯ ಕನಸು ನನಸಾಗದು:ರಾಜ್ಯಪಾಲರು ಬಿಜೆಪಿಯ ಕೈಗೊಂಬೆ - ಗೀತಾ ವಾಗ್ಳೆ

| Published : Aug 19 2024, 12:52 AM IST / Updated: Aug 19 2024, 10:03 AM IST

ಸಿದ್ದರಾಮಯ್ಯರನ್ನು ಸದೆಬಡಿಯುವ ಬಿಜೆಪಿಯ ಕನಸು ನನಸಾಗದು:ರಾಜ್ಯಪಾಲರು ಬಿಜೆಪಿಯ ಕೈಗೊಂಬೆ - ಗೀತಾ ವಾಗ್ಳೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಬಿಜೆಪಿಯ ಕೈಗೊಂಬೆಗಳಂತೆ ಕೆಲಸ ಮಾಡುತ್ತಿರುವುದು ಈ ದೇಶದ ದುರಂತ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಅವರು ಹೇಳಿದ್ದಾರೆ.

 ಉಡುಪಿ :  ಬಡವರ ಏಳಿಗೆಗಾಗಿ ಸದಾ ಶ್ರಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪ್ರಿಯತೆ, ಬಡವರಿಗೆ ಅವರ ಮೇಲಿರುವ ಪ್ರೀತಿ, ಸಿದ್ಧರಾಮಯ್ಯ ಅವರು ತಮ್ಮ ವಿರುದ್ಧ ನಡೆಯುತ್ತಿರುವ ಎಲ್ಲ ರೀತಿಯ ಪಿತೂರಿಗಳನ್ನು ನಿರ್ಭೀತರಾಗಿ ಎದುರಿಸುತ್ತಿರುವ ರೀತಿ ಇದೆಲ್ಲವನ್ನೂ ಸಹಿಸಲಾಗದೇ ಸಿದ್ದರಾಮಯ್ಯ ಅವರನ್ನು ಸದೆಬಡಿಯಲು ಬಿಜೆಪಿ ಹಾಕಿಕೊಂಡಿರುವ ಯೋಜನೆ ಎಂದಿಗೂ ನನಸಾಗುವುದಿಲ್ಲ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಅವರು ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆಯನ್ನು ಎಲ್ಲರೂ ಖಂಡಿಸಬೇಕಾಗಿದೆ. ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಬಿಜೆಪಿಯ ಕೈಗೊಂಬೆಗಳಂತೆ ಕೆಲಸ ಮಾಡುತ್ತಿರುವುದು ಈ ದೇಶದ ದುರಂತ. 

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಮೇಶ್ ಜಾರಕಿಹೊಳಿ, ಯಡಿಯೂರಪ್ಪ ಮುಂತಾದವರ ಮೇಲೆ ಅದೆಷ್ಟೋ ಆರೋಪಗಳಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದೇ ರಾಜ್ಯಪಾಲರು ಸಿದ್ಧರಾಮಯ್ಯ ಅವರ ವಿಷಯದಲ್ಲಿ ಯಾವುದೇ ರೀತಿಯ ಆರೋಪ ಸಾಬೀತಾಗಿರದಿದ್ದರೂ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು ಹೇಗೆ? ಮುಡಾ ಹಗರಣದಲ್ಲಿ ಬಿಜೆಪಿಯ ಪಾಲೆಷ್ಟು? ಭ್ರಷ್ಟಾಚಾರದಲ್ಲಿ ಸಿದ್ಧ ಹಸ್ತರೆನಿಸಿಕೊಂಡಿರುವ ಬಿಜೆಪಿಗರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರದ ದಿನಗಳಲ್ಲಿ ತಾವು ಬಹಳ ಶುದ್ಧ ಹಸ್ತರು ಎಂಬಂತೆ ಬಿಂಬಿಸತೊಡಗಿರುವುದು ಆಶ್ಚರ್ಯ ತರಿಸುತ್ತಿದೆ ಎಂದವರು

 ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಬಿಜೆಪಿಗರ ಈ ವರ್ತನೆ ನೋಡಿದರೆ ಅವರಿಗೆ ಯಾವುದೇ ಹಗರಣದ ಚಿಂತೆ ಇಲ್ಲ, ಅವರಿಗೆ ಬೇಕಾಗಿರುವುದು ಪ್ರಸ್ತುತ ಸರ್ಕಾರವನ್ನು ಬೀಳಿಸುವುದು, ಜೊತೆಗೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಉದ್ದೇಶದಿಂದ ಈಗ ರಾಜ್ಯಪಾಲರನ್ನು ದಾಳವಾಗಿ ಉಪಯೋಗಿಸುತಿದ್ದಾರೆ. ಆದರೆ ಇದು ಎಂದಿಗೂ ಸಾಧ್ಯವಾಗದು. ಸಿದ್ದರಾಮಯ್ಯ ಅವರೊಂದಿಗೆ ಕೋಟ್ಯಂತರ ಬಡ ಮತದಾರರರಿದ್ದಾರೆ. ಅವರ ಆಶೀರ್ವಾದವಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಲಕ್ಷಾಂತರ ಮತದಾರರನ್ನು ಅವರು ತಲುಪಿದ್ದಾರೆ. ಅವರ ಒಳ್ಳೆಯತನ ಎಂದಿಗೂ ಅವರನ್ನು ಬಿಡದು ಎಂದು ಗೀತಾ ವಾಗ್ಳೆ ಭರವಸೆ ವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲರ ಈ ಪಕ್ಷಪಾತಿ ಧೋರಣೆಯನ್ನು ನಾವೆಲ್ಲರೂ ಖಂಡಿಸುತ್ತೇವೆ ಇದು ಇಲ್ಲಿಗೇ ಕೊನೆಗೊಳ್ಳಬೇಕು. ಬಿಜೆಪಿಯ ಶಾಸಕರು ಮತ್ತು ಇತರ ನಾಯಕರು ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ಜೊತೆ ಕೈಜೋಡಿಸಬೇಕೇ ಹೊರತು ಸರ್ಕಾರವನ್ನು ಅಸ್ತಿರಗೊಳಿಸುವುದಲ್ಲ ಎಂದವರು ಹೇಳಿದ್ದಾರೆ.