ಕನ್ನಡಪ್ರಭ ವಾರ್ತೆ ಬೆಂಗಳೂರು:

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಮಹಾ ಸಂಪರ್ಕ ಅಭಿಯಾನ ಪ್ರಯುಕ್ತ ಶಾಸಕರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶನಿವಾರ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಮನೆ-ಮನೆಗೆ ಭೇಟಿ ನೀಡಿ ಎಸ್‍ಐಆರ್ ಮಹತ್ವ ಕುರಿತು ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿ, ಬಿಜೆಪಿಯಿಂದ ರಾಜ್ಯಾದ್ಯಂತ ಶನಿವಾರ ಮತ್ತು ಭಾನುವಾರ ಎಸ್‌ಐಆರ್‌ ಮಹಾ ಸಂಪರ್ಕ ಅಭಿಯಾನ ನಡೆಯುತ್ತಿದೆ. ಪ್ರಮುಖ ಕಾರ್ಯಕರ್ತನಿಗೆ ತಲಾ 20 ಮನೆಗಳಿಗೆ ತೆರಳುವ ಗುರಿ ನೀಡಿದ್ದೇವೆ. ಆ ಮನೆಯವರಿಗೆ ಗಣತಿ ನಮೂನೆ ಸಿಕ್ಕಿದೆಯೇ ಎಂದು ವಿಚಾರಿಸಲಾಗುತ್ತಿದೆ ಎಂದು ತಿಳಿಸಿದರು.

ಎಸ್‌ಐಆರ್‌ ಮಹಾ ಸಂಪರ್ಕ ಅಭಿಯಾನದ ಸಂಚಾಲಕ ಎಸ್‌.ದತ್ತಾತ್ರಿ ಮಾತನಾಡಿ, ಪ್ರತಿಯೊಬ್ಬ ಕಾರ್ಯಕರ್ತರು ದಿನಕ್ಕೆ 10 ಮನೆಯಂತೆ ಭೇಟಿ ಮಾಡುತ್ತಿದ್ದಾರೆ. ಮತದಾರರ ಜೊತೆ ಐದು-ಹತ್ತು ನಿಮಿಷ ಕಾಲ ಕಳೆದು ಕರಡು ಮತದಾರರ ಪಟ್ಟಿ ಬಳಿಕ ಏನೆಲ್ಲಾ ಪ್ರಕ್ರಿಯೆ ಇರಲಿದೆ ಎಂಬ ವಿವರ ನೀಡಲು ತಿಳಿಸಿದ್ದೇವೆ ಎಂದರು.

ನಮ್ಮ ಪಕ್ಷದ ಎಲ್ಲ ಪ್ರಮುಖರು, ಕಾರ್ಯಕರ್ತರಿಗೆ ಎಸ್‍ಐಆರ್ ಕುರಿತು ಕಳೆದ ಆರು ತಿಂಗಳಿಂದ ತರಬೇತಿ ಕೊಡಲಾಗಿದೆ. ಅಂತೆಯೇ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರನ್ನು ಪ್ರಭಾರಿಯಾಗಿ ನೇಮಿಸಿ, ಅವರು ಎಸ್‍ಐಆರ್ ಚಟುವಟಿಕೆ ನೋಡಿಕೊಳ್ಳಲು ತಿಳಿಸಿದ್ದೇವೆ ಎಂದು ಹೇಳಿದರು.


ಗಣತಿ ನಮೂನೆ ಭರ್ತಿ ಮಾಡಿ ಬಿಎಲ್‍ಒಗಳಿಗೆ ಕೊಡಬೇಕು. ಈ ಗಣತಿ ನಮೂನೆ ಭರ್ತಿ ಮಾಡುವ ಕುರಿತು ತರಬೇತಿ ನೀಡಿದ್ದೇವೆ. ಆದರೂ ಇದರ ವಿಚಾರದಲ್ಲಿ ಗೊಂದಲ ಹಾಗೂ ಆತಂಕವಿದೆ. ಮತದಾರರಿಗೆ ಮಾಹಿತಿ ಕೊಡುವ ಕೆಲಸ ನಾವು ಮಾಡುತ್ತಿದ್ದೇವೆ. ಎಲ್ಲ ಮನೆಗಳನ್ನು ತಲುಪುವ ಉದ್ದೇಶವಿದೆ ಎಂದು ತಿಳಿಸಿದರು.