ಬಿಜೆಪಿ ಪ್ರಾಯೋಜಿತ ಸಮೀಕ್ಷೆಗಳು ಸುಳ್ಳಾಗಿವೆ: ಎನ್.ರಮೇಶ್ ಆರೋಪ

| Published : Jun 06 2024, 12:31 AM IST

ಬಿಜೆಪಿ ಪ್ರಾಯೋಜಿತ ಸಮೀಕ್ಷೆಗಳು ಸುಳ್ಳಾಗಿವೆ: ಎನ್.ರಮೇಶ್ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ಪ್ರೆಸ್‌ಟ್ರಸ್ಟ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟ ಪೂರ್ವದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ಎನ್ನುವುದನ್ನು ಹೇಳಿದ್ದ ಬಿಜೆಪಿ ಪ್ರಾಯೋಜಿತ ಸಮೀಕ್ಷೆಗಳು ಸುಳ್ಳಾಗಿವೆ. ಜನರು ಬಿಜೆಪಿ ದ್ವೇಷದ ರಾಜಕಾರಣ ತಿರಸ್ಕರಿಸಿ ರಾಹುಲ್‍ಗಾಂಧಿ ಪ್ರೀತಿಗೆ ಬೆಲೆಕೊಟ್ಟು ಕಾಂಗ್ರೆಸ್‍ ಬೆಂಬಲಿಸಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದೇಶದ ಜನತೆ ಬಿಜೆಪಿ ತಾತ್ವಿಕವಾಗಿ ತಿರಸ್ಕರಿಸಿದ್ದಾರೆ. ಬಿಜೆಪಿಗೆ ಹಿನ್ನಡೆಯಾಗಿರುವುದು ಸ್ಪಷ್ಟವಾಗಿದೆ ಎಂದರು.

ರಾಹುಲ್‍ಗಾಂಧಿ ರವರು ಜೊಡೋಯಾತ್ರೆ ಮೂಲಕ ಸುಮಾರು 4800 ಕಿ.ಮೀ. ಪಾದಯಾತ್ರೆ ಮಾಡಿ ಜನರ ಪ್ರೀತಿ ಗಳಿಸಿದ್ದಾರೆ. ದೇಶದಲ್ಲಿ ಧರ್ಮ ಜಾತಿ, ದೇವರ ಹೆಸರಿನಲ್ಲಿ ನಡೆಯುತ್ತಿರುವ ರಾಜಕಾರಣ ವಿರೋಧಿಸಿ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆ ಜನತೆ ನೀಡಿದ ತೀರ್ಪಿಗೆ ತಲೆಬಾಗುತ್ತೇವೆ. ಪಕ್ಷದ ಮೇಲೆ ಅಭಿಮಾನವಿಟ್ಟು ಐದು ಲಕ್ಷಕ್ಕೂ ಹೆಚ್ಚು ಮತ ನೀಡಿದ ಮತದಾರರಿಗೆ ಅಭಿನಂದಿಸಿದರು. ಪಕ್ಷದ ಸೂಚನೆಯಂತೆ ಅಭ್ಯರ್ಥಿ ಗೆಲುವಿಗಾಗಿ ಆರಂಭದಿಂದಲೂ ಶ್ರಮಿಸಲಾಗಿತ್ತು. ಆದರೆ, ಮತದಾರರು ಈ ಬಾರಿಯೂ ಬಿಜೆಪಿ ಪರವಾಗಿ ಒಲವು ತೋರಿದ್ದಾರೆ ಎಂದು ತಿಳಿಸಿದರು.

ಶಿಕಾರಿಪುರದ ಕಾಂಗ್ರೆಸ್‌ ಮುಖಂಡ ನಾಗರಾಜ ಗೌಡ ಮಾತನಾಡಿ, ಜಿಲ್ಲೆಯಲ್ಲಿ ಗೀತಾ ಗೆಲುವಿಗೆ ಕಾರ್ಯಕರ್ತರು ಹೆಚ್ಚಿನ ಶ್ರಮ ಹಾಕಿದ್ದರು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಿಜೆಪಿ ಬೆಂಬಲಿಸಿದ್ದಾರೆ. ಆದರೆ, ಕಾಂಗ್ರೆಸ್‌ಗೆ 5 ಲಕ್ಷಕ್ಕೂ ಹೆಚ್ಚು ಮತಗಳು ಬಂದಿವೆ. ಇದು ಕಡಿಮೆ ಅಲ್ಲ. ಈ ಬಾರಿ ಗೀತಾ ಶಿವರಾಜ್ ಕುಮಾರ್ ಗೆಲ್ಲಿಸಬೇಕೆಂದೇ ಮತ ಹಾಕಿದ್ದಾರೆ. ಆದರೂ ಜಾತಿ ಅಭಿಮಾನದಿಂದ ಜನ ಹೊರ ಬಂದಿಲ್ಲ ಎನಿಸುತ್ತಿದೆ ಎಂದರು.

ಯಡಿಯೂರಪ್ಪನವರ ವಿರುದ್ಧ ಗೋಣಿ ಮಾಲತೇಶ್ ಹೆಚ್ಚಿನ ವೋಟ್ ಪಡೆದಿದ್ದರು. ಹೀಗಾಗಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅವರು ಗೆಲ್ಲುವ ನಿರೀಕ್ಷೆಯಲ್ಲಿ ಟಿಕೆಟ್ ನೀಡಲಾಗಿತ್ತು. ನನಗೆ ಟಿಕೆಟ್ ಕೈತಪ್ಪಿದ್ದರಿಂದಾಗಿ ಸ್ವತಂತ್ರ ಸ್ಪರ್ಧೆ ಮಾಡಬೇಕಾಯಿತು. ಈಗ ಕಾಂಗ್ರೆಸ್‍ನಲ್ಲಿಯೇ ಇದ್ದು ಪಕ್ಷ ಸಂಘಟನೆ ಕೆಲಸ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸಿ.ಎಸ್. ಚಂದ್ರಭೂಪಾಲ್, ಶಿ.ಜು.ಪಾಶ, ಜಿ.ಪದ್ಮನಾಭ್, ಎಸ್.ಎ.ಬಾಬು, ಮುನ್ನಾ, ಮೂರ್ತಿ, ಧೀರರಾಜ್ ಹೊನ್ನವಿಲೆ, ಆಸೀಸ್ ಮಸೂರ್, ಮೂರ್ತಿ ಮತ್ತಿತರರು ಇದ್ದರು.