ಸಾರಾಂಶ
ಟಿಕೆಟ್ ನೀಡದೇ ಹೋದರೂ ಸಹ ಬಿಜೆಪಿ ಪರವಾಗಿಯೇ ದುಡಿಯುವೆ ಎಂದು ಭರವಸೆ ನೀಡಿದ ನಿವೃತ್ತ ಪೊಲೀಸ್ ಅಧಿಕಾರಿ ಮಹೇಂದ್ರಕುಮಾರ
ಕನ್ನಡಪ್ರಭ ವಾರ್ತೆ ವಿಜಯಪುರ
ಕಳೆದ ಬಾರಿ ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ದೃಷ್ಟಿಯಿಂದ ಪೊಲೀಸ್ ಅಧಿಕಾರಿ ಹುದ್ದೆಗೆ ರಾಜಿನಾಮೆ ನೀಡಿದ್ದೆ. ಆದರೆ, ಕಾಣದ ಕೈಗಳ ಕುತಂತ್ರದಿಂದ ಕಳೆದ ಬಾರಿ ನಾಗಠಾಣ ಟಿಕೆಟ್ ಕೈ ತಪ್ಪಿತು. ಈ ಬಾರಿ ವಿಜಯಪುರ ಲೋಕಸಭೆ ಕ್ಷೇತ್ರದದಿಂದ ನನಗೆ ಟಿಕೆಟ್ ದೊರಕುವ ಖಾತ್ರಿವಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಮಹೇಂದ್ರಕುಮಾರ ನಾಯಕ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಅಧಿಕಾರಿಯಾಗುವ ಜೊತೆಗೆ ಸಮಾಜ ಸೇವೆಯನ್ನು ಮಾಡಿದ ಅನುಭವವಿದೆ. ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರಿದ್ದೇನೆ, ಯಾವ ಭರವಸೆ ಪಡೆದು ಪಕ್ಷ ಸೇರಿಲ್ಲ. ಒಂದು ಕ್ಷೇತ್ರಕ್ಕೆ ಅನೇಕ ಆಕಾಂಕ್ಷಿಗಳು ಇರುವುದು ಸಹಜ. ಟಿಕೆಟ್ ನೀಡದೇ ಹೋದರೂ ಸಹ ಬಿಜೆಪಿ ಪರವಾಗಿಯೇ ದುಡಿಯುವೆ ಎಂದರು.
ಕಳೆದ ಬಾರಿ ಗೋಪಾಲ ಕಾರಜೋಳ ಅಥವಾ ನನಗೆ ಟಿಕೆಟ್ ನೀಡಿದ್ದರೇ ನಾಗಠಾಣ ಬಿಜೆಪಿ ಪಾಲಾಗುತ್ತಿತ್ತು. ಹೊಸಮುಖಕ್ಕೆ ಟಿಕೆಟ್ ನೀಡಿದ ಪರಿಣಾಮ ಸೋಲು ಅನುಭವಿಸಬೇಕಾಯಿತು ಎಂದು ತಿಳಿಸಿದರು. ಟಿಕೆಟ್ ಕೊಡಿಸಿದ ಹೊಸ ವ್ಯಕ್ತಿಗೆ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಜವಾಬ್ದಾರಿ ತೆಗೆದುಕೊಂಡಿದ್ದರೋ ಅವರೇ ಮುಂದೆ ಬರಲಿಲ್ಲ. ಹೀಗಾಗಿ ಇದು ಸಹ ಸೋಲಿಗೆ ಕಾರಣವಾಯಿತು ಎಂದರು.ವಿಧಾನಸಭೆ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿರುವ ಈ ಹಿಂದೆ ಬಳ್ಳೊಳ್ಳಿ ಕ್ಷೇತ್ರ, ಈಗ ನಾಗಠಾಣಾ ಕ್ಷೇತ್ರದಲ್ಲಿ ಬಂಜಾರಾ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ. ಪರಿಶಿಷ್ಟ ಜಾತಿಗೆ ಮೀಸಲಾದ ಬಳಿಕ ಲೋಕಸಭೆ ಚುನಾವಣೆಯಲ್ಲಿ ನಮ್ಮ ಸಮಾಜಕ್ಕೆ ಬಿಜೆಪಿ ಅವಕಾಶ ನೀಡಿಲ್ಲ. ಈ ಬಾರಿ ಗೆಲ್ಲುವ ಕುದುರೆಯಾದ ನನ್ನ ಮೂಲಕ ಬಂಜಾರಾ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯದ ಅವಕಾಶ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.