ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳರಾಜ್ಯ ಸರ್ಕಾರದ ಜನವಿರೋಧಿ ನಿಲುವು ಖಂಡಿಸಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ 380 ಗ್ರಾಮ ಪಂಚಾಯಿತಿಗಳ ಮುಂದೆ 23ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ. ವಿಕಾಸ ಕಚೇರಿಯಲ್ಲಿ ಸೋಮವಾರ ನಡೆದ ‘ವಿಕಸಿತ ಭಾರತ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.ರಾಜ್ಯ ಸರ್ಕಾರ 9/11 ವಿನ್ಯಾಸ ನಕ್ಷೆ ಪ್ರಾಧಿಕಾರದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದು, ಅದರಿಂದ ದೊಡ್ಡ ಪ್ರಮಾಣದ ಕಟ್ಟಡ ಕಾಮಗಾರಿಗಳು ಸ್ಥಗಿತವಾಗಿವೆ. 2 ವರ್ಷ ಕಳೆದರೂ ಯಾವುದೇ ಆಶ್ರಯ ಮನೆಗಳು ನೀಡದಿರುವುದು ಭಾರೀ ತೊಂದರೆ ಆಗಿದ್ದು, ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿ ಕನಿಷ್ಠ 100 ಆಶ್ರಯ ಮನೆಗಳನ್ನು ನೀಡುವಂತೆ ಮತ್ತು ಅಕ್ರಮ ಅರ್ಜಿಗಳನ್ನು ತಿರಸ್ಕರಿಸಬಾರದು ಎಂದು ಸುನಿಲ್ ಕುಮಾರ್ ಆಗ್ರಹಿಸಿದರು. ಧರಣಿಯಲ್ಲಿ ಪ್ರತಿ ಪಂಚಾಯಿತಿ ಮುಂದೆ ಕನಿಷ್ಠ 100 ಮಂದಿ ಪಾಲ್ಗೊಳ್ಳಬೇಕು ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಮೋದಿ ಸರ್ಕಾರದ 11 ವರ್ಷಗಳ ಸಾಧನೆಗಳನ್ನು ಜನರಿಗೆ ತಿಳಿಸುವ ಕಾರ್ಯಾಚರಣೆಗಳು ದೇಶಾದ್ಯಾಂತ ನಡೆಯುತ್ತಿರುವುದು ಹಾಗೂ ಭಾರತೀಯ ಇತಿಹಾಸದ ಮೂರು ಕಾಲಘಟ್ಟಗಳ ಕುರಿತು ಅಧ್ಯಯನ ಮಾಡುವಾಗ ಹಲವು ಬದಲಾವಣೆಗಳು ಕಂಡುಬರುತ್ತವೆ ಎಂದು ಹೇಳಿದ್ದಾರೆ.ಬಿಜೆಪಿ ಹಿರಿಯ ಮುಖಂಡ ಎಂ. ಕೆ. ವಿಜಯ್ ಕುಮಾರ್ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರಕಾರದ ಜನ ವಿರೋಧಿ ನೀತಿಗಳನ್ನು ಹಾಗೂ ಬೆಲೆ ಏರಿಕೆಯಿಂದ ಜನರ ಮೇಲೆ ಭಾರ ಹೆಚ್ಚಾಗಿರುವುದನ್ನು ಟೀಕಿಸಿದರು. ಕೇಂದ್ರದ ಮೋದಿ ಸರ್ಕಾರ 11 ವರ್ಷಗಳಲ್ಲಿ ಭ್ರಷ್ಟಾಚಾರದ ಆರೋಪವಿಲ್ಲದೆ ಸ್ವಚ್ಛ ಆಡಳಿತ ನೀಡಿದೆ ಎಂದು ತಿಳಿಸಿದ್ದಾರೆ.ರಾಜ್ಯದಲ್ಲಿ ನಡೆದ ಹಗರಣಗಳು, ಸರಕಾರದ ಅನ್ಯಾಯ ಹಾಗೂ ಜನ ತೊಂದರೆಗಳ ಕುರಿತು ಧ್ವನಿ ಎತ್ತಬೇಕೆಂದು ಸುನಿಲ್ ಕುಮಾರ್ ಒತ್ತಾಯಿಸಿದರು.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ಜಿಲ್ಲಾ ವಕ್ತಾರ ಮುತ್ತುಪಾಡಿ ಸತೀಶ್ ಶೆಟ್ಟಿ, ಕಾರ್ಯಾಲಯ ಕಾರ್ಯದರ್ಶಿ ಜ್ಯೋತಿ ರಮೇಶ್, ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಹಾಗೂ ಹರೀಶ್ ನಾಯಕ್ ಇದ್ದರು.