ದೇವನಹಳ್ಳಿ: ದೇಶದಲ್ಲಿ ಕಾಂಗ್ರೆಸ್ ಕೇವಲ 3 ರಾಜ್ಯಗಳಲ್ಲಿ ಮಾತ್ರ ಉಳಿದಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಗಳು ಆಗುತ್ತಿಲ್ಲ, ೫ ಗ್ಯಾರಂಟಿಗಳನ್ನು ಸಹ ಸರಿಯಾಗಿ ನೀಡುತ್ತಿಲ್ಲ. ರಾಜ್ಯದ ಜನ ಬೇಸತ್ತು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ೧೫೦ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ತಾಲೂಕಿನ ಕುಂದಾಣ ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳ ನೇಮಕ ಹಾಗೂ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದಿವಾಳಿ ಎದ್ದಿದೆ. ದೇಶದಲ್ಲಿ ಕಾಂಗ್ರೆಸ್ ನಿರ್ಣಾಮವಾಗಲಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಸಿ ಶಕ್ತಿ ಪ್ರದರ್ಶನ ಮಾಡಿ ಚುನಾವಣೆ ಗೆಲ್ಲುತ್ತಿದ್ದರು. ಆದರೆ ಇವಿಎಂ ಬಂದ ನಂತರ ಅದಕ್ಕೆ ಕಡಿವಾಣ ಬಿದ್ದಿದೆ. ಕಾಂಗ್ರೆಸ್‌ ಮತ್ತೆ ಬ್ಯಾಲೆಟ್ ಪೇಪರ್ ಬಳಸಿ ಗುಂಡಾಗಿರಿ ಮಾಡಲು ಮುಂದಾಗಿದೆ. ಇವರು ಚುನಾವಣೆ ಮಾಡುತ್ತಾರೆಂಬ ನಂಬಿಕೆ ಇಲ್ಲದಂತಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಕಾರ್ಯಕರ್ತರು ಸಜ್ಜಾಗಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಥಳಿಯರಿಗೆ ಟಿಕೆಟ್ ನೀಡದೆ ಕೋಲಾರದಲ್ಲಿ ಸೋತವರನ್ನು ಇಲ್ಲಿ ಲೂಟಿ ಮಾಡಲು ಬಿಟ್ಟಿದ್ದಾರೆ. ಬಿಜೆಪಿ ದೇಶ ಸುಭದ್ರತೆಯ ಬಗ್ಗೆ ಚಿಂತೆ ಮಾಡುತ್ತದೆ. ನಾವು ಯಾರ ವಿರೋಧಿಗಳೂ ಅಲ್ಲ. ಸಂವಿಧಾನವನ್ನು ಎತ್ತಿ ಹಿಡಿಯುತ್ತಿದ್ದೇವೆ. ದೇಶದಲ್ಲಿ ಜನರು ಬಡವರಾಗಿದ್ದರೆ ಕಾಂಗ್ರೆಸ್ ಅಧಿಕಾರ ಮಾಡಲು ಸಾಧ್ಯ, ಬಿಜೆಪಿ ಅಧಿಕಾರಕ್ಕೆ ಬಂದನಂತರ ೨೫ ಕೋಟಿ ಜನ ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಎನ್.ಎಲ್.ಅಂಬರೀಶ್ ಗೌಡ ಮಾತನಾಡಿ ೭ ಮಹಾಶಕ್ತಿ ಕೇಂದ್ರಗಳಲ್ಲಿ ಬಿಎಲ್‌ಎಗಳ ಸಭೆ ಮುಗಿಸಿದ್ದೇವೆ. ಬಿಜೆಪಿ ಕಾರ್ಯಕರ್ತರ ಸ್ವತ್ತು, ದೇಶದಲ್ಲಿ ೧೪ ಕೋಟಿ ಸದಸ್ಯತ್ವ ಹೊಂದಿರುವ ಪಕ್ಷ, ಜಿಡಿಪಿಯಲ್ಲಿ ದೇಶ ೩ನೇ ಸ್ಥಾನದಲ್ಲಿದೆ. ಕಾರ್ಯಕರ್ತರ ಶಕ್ತಿಯಿಂದ ಪಕ್ಷ ಸದೃಢವಾಗಿ ನಡೆಯುತ್ತಿದೆ ಎಂದರು.

ಆವತಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಸ್.ಕೆ.ರವಿಕುಮಾರ್ ಮಾತನಾಡಿ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಕಾರ್ಯಕರ್ತರು ಸಜ್ಜಾಗಬೇಕು. ಬೂತ್ ಮಟ್ಟದಿಂದ ಪಕ್ಷ ಸಂಘಟಿಸಬೇಕು, ಕೇಂದ್ರದ ಯೋಜನೆಗಳನ್ನು ಪ್ರತಿ ಮನೆಗೆ ತಿಳಿಸಬೇಕು ಎಂದರು.

ಸಭೆಯಲ್ಲಿ ಮಾಜಿ ಶಾಸಕ ಜಿ.ಚಂದ್ರಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವಿಕುಮಾರ್, ಉಪಾಧ್ಯಕ್ಷ ಚನ್ನಕೇಶವ, ಎಸ್ಸಿ ಮೋರ್ಚ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬುಳ್ಳಳ್ಳಿ ರಾಜಪ್ಪ, ಮುಖಂಡರಾದ ಆರ್.ಕೆ.ನಂಜೇಗೌಡ, ದೇಸುನಾಗರಾಜ್, ತಾಲೂಕು ಉಪಾಧ್ಯಕ್ಷ ಮುನಿಕೃಷ್ಣ, ಎಸ್ಟಿ ಮೋರ್ಚ ಅಧ್ಯಕ್ಷ ನಾಗೇಶ್, ಸುಬ್ಬೇಗೌಡ, ಎಸ್ಸಿ ಮೋರ್ಚ ತಾಲೂಕು ಅಧ್ಯಕ್ಷ ಕದಿರಪ್ಪ, ಆನಂದ್‌ಕುಮಾರ್, ವಿಜಯ್‌ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ವಿಜಯ, ಭಾಗ್ಯ, ಮುನಿರಾಜು ಇತರರಿದ್ದರು.


೧೦ ದೇವನಹಳ್ಳಿ ಚಿತ್ರಸುದ್ದಿ: ೦೧

ದೇವನಹಳ್ಳಿ ತಾಲೂಕಿನ ಕುಂದಾಣ ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳ ನೇಮಕ ಹಾಗೂ ವಿಶೇಷ ಸಭೆಯನ್ನು ವಿಧಾನ ಪರಿಷತ್ ವಿರೋಧಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಉದ್ಘಾಟಿಸಿದರು.