ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ನಿಶ್ಚಿತಾರ್ಥಕ್ಕೆ ತೆರಳಿ ಗ್ರಾಮಕ್ಕೆ ವಾಪಸ್ ಆಗುತ್ತಿದ್ದಾಗ ಖಾಸಗಿ ಬಸ್ ಪಲ್ಟಿಯಾಗಿ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆ, ಚಾಮರಾಜನಗರ ಸಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳುಗಳನ್ನು ಬಿಜೆಪಿ ಯುವ ಮುಖಂಡ ನಿಶಾಂತ್ ಭೇಟಿಯಾಗಿ ಸಾಂತ್ವನ ತಿಳಿಸಿದರು.ಹನೂರು ತಾಲೂಕಿನ ಶಾಗ್ಯ ಗ್ರಾಮದ ಆದಿಜಾಂಬವ ಸಮುದಾಯದವರು ಕನಕಪುರ ಸಮೀಪದ ಹನಿಯೂರು ಗ್ರಾಮಕ್ಕೆ ನಿಶ್ಚಿತಾರ್ಥಕ್ಕೆ ತೆರಳಿ ವಾಪಸ್ ಗ್ರಾಮಕ್ಕೆ ಆಗಮಿಸುತ್ತಿದ್ದಾಗ ಖಾಸಗಿ ಬಸ್ ಪಲ್ಟಿಯಾಗಿ 70ಕ್ಕೂ ಹೆಚ್ಚು ಜನರು ಗಾಯಗೊಂಡು ಸ್ಥಳದಲ್ಲಿಯೇ ನಿರ್ವಾಹಕ ಮತಪಟ್ಟಿದ್ದರು. ಇವರನ್ನು ಖಾಸಗಿ ವಾಹನ ಹಾಗೂ ಆ್ಯಂಬುಲೆನ್ಸ್ ಮೂಲಕ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಹಿನ್ನೆಲೆ ಬಿಜೆಪಿ ಯುವ ಮುಖಂಡ ನಿಶಾಂತ್ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆಗೆ ದಾಖಲಾಗಿದ್ದ ಪ್ರತಿಯೊಬ್ಬ ಗಾಯಾಳುಗಳನ್ನು ಮಾತನಾಡಿಸಿ ಅವರಿಗೆ ಧೈರ್ಯ ತುಂಬಿ ವೈಯಕ್ತಿಕವಾಗಿ ಆರ್ಥಿಕ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಈ ವೇಳೆ ಗಾಯಾಳುಗಳ ಬಳಿ ತೆರಳಿ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದುಕೊಂಡಾಗ ಕಳೆದ 3 ದಿನಗಳಿಂದ ವೈದ್ಯಾಧಿಕಾರಿಗಳು ಉತ್ತಮವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಮಂಗಳವಾರವು ಸುಮಾರು 15ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದುಕೊಂಡು ವಾಪಸ್ ಗ್ರಾಮಗಳಿಗೆ ತೆರಳಿದ್ದಾರೆ ನಾವು ಸಹ ನಾಳೆ ಗುಣಮುಖರಾಗಿ ತೆರಳುತ್ತೇವೆ ಎಂದು ಮಾಹಿತಿ ನೀಡಿದರು.ಯುವ ಮುಖಂಡ ನಿಶಾಂತ್ ಮಾತನಾಡಿ, ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿ ವಾಪಸ್ ಬರುತ್ತಿರುವ ವೇಳೆ ಖಾಸಗಿ ಬಸ್ ಪಲ್ಟಿಯಾಗಿ 70ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ವಿಚಾರ ತಿಳಿದು ಮನಸ್ಸಿಗೆ ನೋವು ಉಂಟಾಯಿತು. ಕಾರ್ಯನಿಮಿತ್ತ ಬೇರೆಡೆ ಇದ್ದ ಕಾರಣ ಸಕಾಲಕ್ಕೆ ಬರಲು ಸಾಧ್ಯವಾಗಿರಲಿಲ್ಲ, ಇದೀಗ ನಿಮ್ಮನ್ನು ಭೇಟಿಯಾಗಲು ಬಂದಿದ್ದೇನೆ. ನಿಮಗೆ ಯಾವುದೇ ನೆರವು ಬೇಕಿದ್ದರೂ ನನ್ನನ್ನು ನೇರವಾಗಿ ಸಂಪರ್ಕಿಸಿ ನಿಮಗೆ ಎಲ್ಲ ರೀತಿಯ ನೆರವು ಕಲ್ಪಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ತಾಪಂ ಮಾಜಿ ಅಧ್ಯಕ್ಷ ಸುರೇಶ್, ಅಖಿಲ ಭಾರತ ವೀರಶೈವ ಮಹಾಸಭಾ ಕೊಳ್ಳೇಗಾಲ ಅಧ್ಯಕ್ಷ ತಿಮ್ಮರಾಜಿಪುರ ಪುಟ್ಟಣ್ಣ, ಮುಖಂಡರಾದ ಸರಗೂರು ಗ್ರಾಮದ ವಿನಯ್, ಜಯಕುಮಾರ್, ಅಪ್ಪು ಸ್ವಾಮಿ, ಪಾಳ್ಯ ಸೋಮಣ್ಣ, ಯುವ ಮುಖಂಡ ಚೇತನ್ ಹಾಜರಿದ್ದರು.