ಸಾರಾಂಶ
ನಮ್ಮನ್ನು ಕಾಡುವ ಹಲವಾರು ರೋಗ ರುಜಿನೆಗಳಿಗೆ ಯೋಗದ ಮೂಲಕ ಪರಿಹಾರ ನೀಡಿದ ಮಾಂತ್ರಿಕ ಶಕ್ತಿ
ಕನ್ನಡಪ್ರಭ ವಾರ್ತೆ ಮೈಸೂರು
ಯೋಗವನ್ನು ವಿಶ್ವಮಟ್ಟಕ್ಕೆ ಅಲ್ಲದೆ ಜನಸಾಮಾನ್ಯರಿಗೂ ತಲುಪಿಸಿದ ಶ್ರೇಷ್ಠ ಯೋಗ ಗುರು ಬಿ.ಕೆ.ಎಸ್ ಅಯ್ಯಂಗಾರ್ ಎಂದು ಅಂತಾರಾಷ್ಟ್ರೀಯ ಯೋಗ ಶಿಕ್ಷಕ ಭರತ್ ಶೆಟ್ಟಿ ತಿಳಿಸಿದರು.ನಗರದ ಗೋಕುಲಂನ ಯೋಗ ವಿತ್ ಶ್ರೀನಾಥದಲ್ಲಿ ಹಿಮಾಲಯ ಪ್ರತಿಷ್ಠಾನವು ಮಂಗಳವಾರ ಏರ್ಪಡಿಸಿದ್ದ ಬಿ.ಕೆ.ಎಸ್. ಅಯ್ಯಂಗಾರ್ ಸಂಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮನ್ನು ಕಾಡುವ ಹಲವಾರು ರೋಗ ರುಜಿನೆಗಳಿಗೆ ಯೋಗದ ಮೂಲಕ ಪರಿಹಾರ ನೀಡಿದ ಮಾಂತ್ರಿಕ ಶಕ್ತಿಯನ್ನು ಹೊಂದಿದ್ದ ಬಿ.ಕೆ.ಎಸ್. ಅಯ್ಯಂಗಾರ್ ಅವರ ಕಣ್ಣುಗಳನ್ನು ನೋಡಿದರೆ ಸಾಕು ಅವರ ಸಾಧನೆಯ ಗಾಢತೆಯನ್ನು ಗಮನಿಸಬಹುದಿತ್ತು ಎಂದರು.
ಕೃಷ್ಣಮಾಚಾರ್ಯರಲ್ಲಿ ಯೋಗವನ್ನು ಅಭ್ಯಸಿಸಿ, ಅದನ್ನು ತನ್ನದೇ ಆದ ವೈಜ್ಞಾನಿಕ ಮಾರ್ಗದಲ್ಲಿ ಹಲವಾರು ಆಯಾಮಗಳ ಮೂಲಕ ಯೋಗಾಸನಗಳನ್ನು ಮಾಡಬಹುದಾದ ಅಯ್ಯಂಗಾರ್ ಸ್ಟೈಲ್ ಎಂಬ ನವೀನ ಆವಿಷ್ಕಾರಕ್ಕೆ ಕಾರಣಕರ್ತರಾದರು. ಅವರು ಜೀವನದಲ್ಲಿ ಅಪಾರ ತಾಳ್ಮೆಯನ್ನು ರೂಢಿಸಿಕೊಂಡಿದ್ದರು ಎಂದ ಅವರು, ಪುಣೆಯಲ್ಲಿ ಬಿ.ಕೆ.ಎಸ್. ಅಯ್ಯಂಗಾರ್ ಅವರನ್ನು ಭೇಟಿಯಾಗಿ ಶಿಷ್ಯ ವೃತ್ತಿ ಪಡೆದ ತಮ್ಮ ಅನುಭವಗಳನ್ನು ಹಂಚಿಕೊಂಡರು.ಇದೇ ವೇಳೆ ಯೋಗ ಶಿಕ್ಷಕ ಬಿ. ಶ್ರೀನಾಥ ಅವರು ರಚಿಸಿರುವ ಯೋಗ ಭೀಷ್ಮ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಮೈಸೂರು ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯೋಗಕುಮಾರ್, ಪ್ಯಾರಿಸ್ ಯೋಗ ಶಿಕ್ಷಕ ವಾಂಡೆ ವಿಲ್ಲೆ ಥಾಮಸ್, ಹಿಮಾಲಯ ಪ್ರತಿಷ್ಠಾನದ ಅಧ್ಯಕ್ಷ ಎನ್. ಅನಂತ, ಸಂಚಾಲಕ ಎಂ.ವಿ. ನಾಗೇಂದ್ರಬಾಬು, ಮುಕ್ತಕ ಸಾಹಿತಿ ಮುತ್ತುಸ್ವಾಮಿ, ಹರ್ಷವರ್ಧನ, ವಿನಾಯಕ ಹೊನ್ನಾವರ ಇದ್ದರು.