ಸಾರಾಂಶ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರು ಗೆಲುವು ಸಾಧಿಸುವ ಮೂಲಕ 3ನೇ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ.
ದಾಂಡೇಲಿ:
ನನ್ನ ಮೇಲೆ ಪ್ರಕರಣ ದಾಖಲಿಸಿ, ನನ್ನನ್ನು ಮತ್ತೆ ಹೋರಾಟದ ಮುನ್ನೆಲೆಗೆ ಬರುವಂತೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೃತಜ್ಞತೆಗಳು ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.ಸಿದ್ದರಾಮಯನ್ಯವರಿಗೆ ಏಕವಚನದಲ್ಲಿ ಮಾತನಾಡಿದ್ದಾರೆಂದು ಸಂಸದರ ವಿರುದ್ಧ ರಾಜ್ಯದ ವಿವಿಧೆಡೆ ದಾಖಲಿಸಿರುವ ಪ್ರಕರಣಗಳ ಕುರಿತು ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಪಕ್ಷದ ಸಮಾಲೋಚೆನೆ ಸಭೆಯಲ್ಲಿ ಭಾಗವಹಿಸಿ ಮಾಧ್ಯಮಗಳಿಗೆ ಉತ್ತರಿಸಿದರು.ಅಯೋಧ್ಯೆಯ ರಾಮಮಂದಿರವನ್ನು ಯಾರೋ ಗುತ್ತಿಗೆದಾರರು ಕಟ್ಟಿದ್ದಲ್ಲ, ಅದು ಹಿಂದೂ ಸಮಾಜದ ಭಾವನೆಗಳಿಂದ ಮತ್ತು ಜಾಗೃತ ಹಿಂದೂ ಸಮಾಜ ಕಟ್ಟಿರುವಂತಹ ದೇವಸ್ಥಾನ. ಮಹ್ಮದ್ ಘಜ್ನಿಯಿಂದ ಶುರುವಾದ ದಂಡಯಾತ್ರೆ, ಅವರಿಂದ ಹಿಂದೂ ಧರ್ಮದವರ ಮೇಲೆ ನಡೆದ ಅತ್ಯಾಚಾರ, ಅನ್ಯಾಯ ಅನುಭವಿಸಿದ್ದ ಸಮಾಜ ಅದನ್ನೆಲ್ಲವನ್ನು ಮೀರಿ ಇಂದು ತಲೆ ಎತ್ತಿ ನಿಂತಿದೆ. ನಮ್ಮ ಹೋರಾಟಕ್ಕೆ ಇಂದು ಜಯ ಸಿಕ್ಕಿದ್ದು ಇದು ಮೊದಲ ಜಯವಾಗಿದೆ ಎಂದರು.ಹಿಂದೂ ಸಮಾಜ ಜಾತ್ಯತೀತತೆಯ ಒಡೆದ ತುತ್ತೂರಿಯ ಧ್ವನಿಯಲ್ಲ. ಇದು ಹಿಂದೂ ಸಮಾಜದ ಜಾಗ್ರತದ ರಣಕಹಳೆ ಎಂದ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರು ಗೆಲುವು ಸಾಧಿಸುವ ಮೂಲಕ 3ನೇ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಚುನಾವಣೆಯಲ್ಲಿ ಈ ಬಾರಿಯ ಗೆಲುವು ಮುಂದೆ ಯಾರೂ ಮುರಿಯದಂತಹ ದಾಖಲೆಯ ಗೆಲುವಾಗುತ್ತದೆ. ಬಿಜೆಪಿಗೆ ಆ ಶಕ್ತಿಯಿದೆ. ಬಿಜೆಪಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನರೇಂದ್ರ ಮೋದಿ ಭಾರತಕ್ಕೆ ಮಾತ್ರ ನಾಯಕರಲ್ಲ, ಅವರು ವಿಶ್ವ ನಾಯಕರು. ಸಿದ್ದರಾಮಯ್ಯ ಹಲವು ಬಾರಿ ಮೋದಿ ಅವರನ್ನು ಏಕವಚನದಲ್ಲಿ ಕರೆದಿದ್ದಾರೆ. ಇದನ್ನೆಲ್ಲ ನಾವು ಸಹಿಸಲ್ಲ ಎಂದು ಗುಡುಗಿದ ಹೆಗಡೆ, ಸಿದ್ದರಾಮಯ್ಯನವರೇ ಮೊದಲು ನೀವು ಸಭ್ಯತೆ, ಸಂಸ್ಕೃತಿ ಕಲಿಯಿರಿ, ದುರಹಂಕಾರ ಬಿಟ್ಟು ಬಿಡಿ ಎಂದು ತಿರುಗೇಟು ನೀಡಿದರು.ಶಾಸಕ, ಸಂಸದರು ಯಾರು ಬೇಕಾದರೂ ಆಗಬಹುದು. ಆದರೆ ಒಬ್ಬ ನಾಯಕನಾಗ ಬೇಕಾದರೆ ವಿವಾದಗಳನ್ನು ಮೈಮೇಲೆ ಹಾಕಿಕೊಂಡು ಎದೆಕೊಟ್ಟು ನಿಲ್ಲಬೇಕು. ಯಾರು ಏನೆ ಹೇಳಿದರು ಅದನ್ನು ಎದುರಿಸುವ ತಾಕತ್ತು ಬೇಕು. ಜನರು ನೀಡಿದಂತಹ ಮತಗಳು ನನಗೆ ಆ ತಾಕತ್ತು ಕೊಟ್ಟಿದೆ. ಮುಂದಿನ ಚುವಾವಣೆಯಲ್ಲಿ ಬಿಜೆಪಿ ಗೆಲ್ಲುತ್ತೆ, ಗಲ್ಲಿಸುತ್ತೇವೆ ಎಂದರು.ಈ ವೇಳೆ ಮಾಜಿ ಶಾಸಕ ಸುನೀಲ ಹೆಗಡೆ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಕಲಶಟ್ಟಿ, ಮಂಡಲ ಅಧ್ಯಕ್ಷ ಚಂದ್ರಕಾಂತ ಕ್ಷೀರಸಾಗರ, ಗುರು ಮಠಪತಿ, ಸುಧಾಕರ ರೆಡ್ಡಿ, ಅಶೋಕ ಪಾಟೀಲ, ಟಿ.ಎಸ್. ಬಾಲಮಣಿ, ಮಿಥುನ ನಾಯಕ, ನಗರಸಭೆಯ ಬಿಜೆಪಿ ಸದಸ್ಯರು, ಪಕ್ಷದ ಮುಖಂಡರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.