ಸವದಿ ಬೆಂಬಲಿಗರ ಮೇಲೆ ಆಪಾದನೆ ಸರಿಯಲ್ಲ

| Published : Jun 09 2024, 01:31 AM IST

ಸಾರಾಂಶ

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾಡಿರುವ ಆಪಾದನೆಗೆ ಶಾಸಕ ಲಕ್ಷ್ಮಣ ಸವದಿ ಬೆಂಬಲಿತ ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ಚಿಕ್ಕೋಡಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಥಣಿ ಮತಕ್ಷೇತ್ರದಿಂದ ಬಿಜೆಪಿಗೆ ಹೆಚ್ಚಿನ ಮತಗಳು ಬಂದಿರುವುದಕ್ಕೆ ಸಚಿವ ಸತೀಶ ಜಾರಕಿಹೊಳಿ ಅವರು ಯಾರದೋ ಚಾಡಿಕೋರರ ಮಾತು ಕೇಳಿ ಮೂಲ ಕಾಂಗ್ರೆಸ್ಸಿಗರು ಮತ್ತು ಬಿಜೆಪಿಯಿಂದ ಬಂದ ಕಾಂಗ್ರೆಸ್ಸಿಗರೆಂಬ ಭೇದ-ಭಾವ ಸೃಷ್ಟಿಸಿ ಶಾಸಕ ಲಕ್ಷ್ಮಣ ಸವದಿ ಬೆಂಬಲಿಗರ ಮೇಲೆ ಆಪಾದನೆ ಮಾಡುವುದು ಸರಿಯಲ್ಲ. ಸಚಿವರು ಮಾಡುತ್ತಿರುವ ಆಪಾದನೆ ಕೂಡಲೇ ಹಿಂಪಡೆಯಬೇಕು ಎಂದು ಕಾಂಗ್ರೆಸ್ ಮುಖಂಡ ಶಿವು ಗುಡ್ಡಾಪುರ ಒತ್ತಾಯಿಸಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಥಣಿ ಮತಕ್ಷೇತ್ರದಲ್ಲಿ ಹೊಸಬರು, ಹಳಬರೆಂಬ ಭೇದ-ಭಾವವಿಲ್ಲದೇ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಪ್ರಚಾರ ನಡೆಸುತ್ತಿದ್ದರೂ ಸಚಿವರು ತಮ್ಮ ಕ್ಷೇತ್ರದ ಜನರನ್ನು ಮತ್ತು ಸಕ್ಕರೆ ಕಾರ್ಖಾನೆಯ ಸಿಬ್ಬಂದಿ ಕರೆತಂದು ಪ್ರಚಾರ ನಡೆಸಿದ್ದಾರೆ. ಹೀಗಾಗಿ ಸ್ಥಳೀಯ ಕೆಲವು ಕಾರ್ಯಕರ್ತರು ನಾವು ಮಾಡುವ ಕೆಲಸದಲ್ಲಿ ಇವರಿಗೆ ವಿಶ್ವಾಸ ಇಲ್ಲ. ಹೀಗಾಗಿ ಮೌನವಹಿಸಿದ್ದು ಇಂತಹ ಅನೇಕ ಕಾರಣಗಳಿಂದಲೂ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಉಂಟಾಗಿರಬಹುದು ಎಂದು ತಿಳಿಸಿದರು.

ಲಿಂಗಾಯತರು ಪ್ರಾಬಲ್ಯವಿರುವ ಅಥಣಿ ಕ್ಷೇತ್ರದಲ್ಲಿ ಲಿಂಗಾಯತ ಸಮಾಜದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಮತ್ತು ಚುನಾವಣಾ ಪೂರ್ವದಲ್ಲಿ ಜಿಲ್ಲಾಮಟ್ಟದ ಹಾಲುಮತದ ಸಮಾವೇಶದಲ್ಲಿ ಹಾಲುಮತದ ಸಮಾಜಕ್ಕೆ ಟಿಕೆಟ್ ಕೊಡಿಸುವುದಾಗಿ ಹೇಳಿ ಟಿಕೆಟ್ ತಪ್ಪಿಸಿದ್ದರಿಂದ ಹಿನ್ನಡೆ ಉಂಟಾಗಿದೆಯೇ ಹೊರತು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಪರವಾಗಿ ಪ್ರಚಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ಶಾಸಕ ಲಕ್ಷ್ಮಣ ಸವದಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮತಕ್ಷೇತ್ರದಲ್ಲಿ ಬಂದು ಪ್ರಚಾರ ಮಾಡಿರುವುದು ಇಲ್ಲಿನ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಮುಜುಗರ ಉಂಟಾಗಿದೆ. ಸಚಿವರಿಗೆ ಯಾರೋ ತಪ್ಪು ಕಲ್ಪನೆ ನೀಡಿದ್ದಾರೆ. ಸಚಿವರು ಸತ್ಯಾಸತ್ಯತೆ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಅನೇಕ ಬಾರಿ ಹೇಳಿದರೂ ಲಿಂಗಾಯತರನ್ನು ನಿರ್ಲಕ್ಷಿಸಿದರು. ಆದರೂ ಲಿಂಗಾಯತರು ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದರು. ಚಿಕ್ಕೋಡಿ ಲೋಕಸಭಾ ಕ್ಷೇತ್ರವನ್ನು ಹಾಲುಮತ ಸಮಾಜಕ್ಕೆ ಬಿಟ್ಟುಕೊಡುವುದಾಗಿ ಸಚಿವ ಸತೀಶ ಜಾರಕಿಹೊಳಿ ಘೋಷಿಸಿದ್ದರು. ಆದರೆ, ಕೊನೆ ಸಮಯದಲ್ಲಿ ತಮ್ಮ ಮಗಳಿಗೆ ಟಿಕೆಟ್ ಗಿಟ್ಟಿಸಿಕೊಂಡರು. ಇದರಿಂದ ಕ್ಷೇತ್ರದಲ್ಲಿ ನಾವು ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಹಾಲು ಮತದವರು ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ದೂರಿದರು.

ತೆಲಸಂಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮೋಘ ಖೊಬ್ರಿ ಮಾತನಾಡಿ, ಚುನಾವಣೆ ನಿರ್ವಹಿಸಲು ಸತೀಶ ಜಾರಕಿಹೊಳಿ ಮಾಲಿಕತ್ವದ ಕಾರ್ಖಾನೆಯ ಸಿಬ್ಬಂದಿಯರನ್ನು ಎಲ್ಲ ಬೂತ್‌ಗಳಲ್ಲಿ ನೇಮಕ ಮಾಡಿದ್ದರು ಎಂದು ದೂರಿದರು.ಕಾಂಗ್ರೆಸ್ ಮುಖಂಡ ಶಿವಾನಂದ ದಿವಾನಮಳ ಮತ್ತು ಅನಂತ ಬಸರಿಕೋಡಿ ಮಾತನಾಡಿ, ಲಕ್ಷ್ಮಣ ಸವದಿ ಬಹಿರಂಗವಾಗಿ ಬಿಜೆಪಿ ಪರವಾಗಿ ನಿಂತಿದ್ದರೇ ಅಥಣಿ ಮತ್ತು ಕಾಗವಾಡ ಕ್ಷೇತ್ರಗಳಲ್ಲಿ ಕನಿಷ್ಠ 50 ರಿಂದ 80 ಸಾವಿರದಷ್ಟು ಹೆಚ್ಚುವರಿ ಮತಗಳು ಬಿಜೆಪಿಗೆ ಬರುತ್ತಿದ್ದವು. ಅಥಣಿ ಮತಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವುದಕ್ಕೆ ಹೊಸ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಆಪಾದನೆ ಮಾಡುವುದು ಸರಿಯಲ್ಲ ಎಂದರು.

ಪುರಸಭೆ ಸದಸ್ಯ ಸಂತೋಷ ಸಾವಡಕರ, ನ್ಯಾಯವಾದಿ ಡಿ.ಬಿ.ಠಕ್ಕಣ್ಣವರ, ರಾಮನಗೌಡ ಪಾಟೀಲ್ ಶಿವನೂರ, ಶಿದರಾಯ ಯಲ್ಲಡಗಿ, ಆಸೀಫ್ ತಾಂಬೋಳಿ, ಸಿ.ಎಸ್.ನೇಮಗೌಡ ಮಾತನಾಡಿದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಮಲ್ಲೇಶ ಹುದ್ದಾರ, ದಿಲೀಪ ಲೋಣಾರೆ, ರಾಜಶೇಖರ ಗುಡೋಡಗಿ, ಕಲ್ಲೇಶ ಮಡ್ಡಿ, ಧುರೀಣರಾದ ಹಣಮಂತ ಕಾಲವೆ, ನರಸು ಬಡಕಂಬಿ, ಶ್ರೀಶೈಲ ನಾಯಿಕ, ಪ್ರದೀಪ ನಂದಗಾಂವ, ಬಸವರಾಜ ಮರನೂರ, ಮಹಾಂತೇಶ ಠಕ್ಕಣ್ಣವರ, ಜಡೆಪ್ಪ ಕುಂಬಾರ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

------------

ಕೋಟ್‌....

ಚುನಾವಣೆಯಲ್ಲಿ ಮೂಲ ಮತ್ತು ಬಿಜೆಪಿಯಿಂದ ವಲಸೆ ಬಂದವರೆನ್ನುವ ಭೇದ-ಭಾವ ಇಲ್ಲದೇ ಎಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ. ಆದರೆ, ಸಚಿವರ ಆಪಾದನೆ ಕಾಂಗ್ರೆಸ್ ಕಾರ್ಯಕರ್ತರಿಗೆ ಬೇಸರವನ್ನುಂಟು ಮಾಡಿದೆ.

-ಶಿವು ಗುಡ್ಡಾಪುರ, ಕಾಂಗ್ರೆಸ್ ಮುಖಂಡರು.

----

ಜಿಲ್ಲೆಯಲ್ಲಿ ಅಷ್ಟೇ ಅಲ್ಲ ರಾಜ್ಯಮಟ್ಟದಲ್ಲಿ ದೊಡ್ಡ ನಾಯಕರಾಗಿರುವ ಜಾರಕಿಹೊಳಿಯವರು ಮತ್ತು ಸವದಿ ಅವರ ಎಲ್ಲ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಪಕ್ಷ ಸಂಘಟನೆ ಮಾಡಿದಾಗ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟಲು ಸಹಕಾರಿಯಾಗುತ್ತದೆ.

-ಅಮೋಘ ಖೊಬ್ರಿ, ತೆಲಸಂಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ.----

ಅಥಣಿ ಮತಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವುದಕ್ಕೆ ಸಚಿವರು ಹೊಸ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಅಪಾದನೆ ಮಾಡುವುದು ಸರಿಯಲ್ಲ. ಗೋಕಾಕ ಮತ್ತು ಅರಬಾವಿ ಮತಕ್ಷೇತ್ರಗಳಲ್ಲಿ ತಮ್ಮ ಪ್ರಾಬಲ್ಯವೇನು? ಅಲ್ಲಿ ಏಕೆ ಬಿಜೆಪಿಗೆ ಹೆಚ್ಚಿನ ಮತಗಳು ಬಂದವು. ಕಾಂಗ್ರೆಸ್ ಪಕ್ಷದ ಸಚಿವರೆ ಇರುವ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವುದು ಏಕೆ? ಸಚಿವರೆ ಉತ್ತರಿಸಲಿ.

-ಶಿವಾನಂದ ದಿವಾನಮಳ, ಕಾಂಗ್ರೆಸ್ ಮುಖಂಡರು ಅಥಣಿ.