ಹಗರಿಬೊಮ್ಮನಹಳ್ಳಿ: ಕುಮಾರಸ್ವಾಮಿ ಪೂರ್ಣ ಪ್ರಮಾಣದ ಬಹುಮತವಿಲ್ಲದಿದ್ದರೂ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಅವಧಿಯುದ್ದಕ್ಕೂ ರೈತರ ಸಾಲಮನ್ನಾ ಸಹಿತ ಅನೇಕ ರೈತ, ಜನಪರ ಕಾರ್ಯಕ್ರಮಗಳ ಮೂಲಕ ಸಮಾಜದ ಎಲ್ಲ ವರ್ಗದ ಜನರ ಹಿತವನ್ನು ಕಾದಿದ್ದಾರೆ. ಮತ್ತೆ ೨೦೨೮ರಲ್ಲಿ ಕುಮಾರಸ್ವಾಮಿ ಅವರನ್ನು ಆಶೀರ್ವದಿಸಲು ರಾಜ್ಯದ ಜನತೆ ಕಾದಿದ್ದಾರೆ ಎಂದು ಶಾಸಕ ನೇಮರಾಜ್ ನಾಯ್ಕ ಅಭಿಪ್ರಾಯಪಟ್ಟರು.

ತಾಲೂಕಿನ ಮೆಟ್ರಿ ಗ್ರಾಮದಲ್ಲಿ ಇತ್ತೀಚೆಗೆ ಸಿಡಿಲಿನಿಂದ ಅಸುನೀಗಿರುವ ರೈತ ಗಿರನಳ್ಳಿ ನಾಗಪ್ಪ ಅವರ ಪತ್ನಿ ನಿಂಗಮ್ಮ ಅವರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ₹೫ ಲಕ್ಷ ಪರಿಹಾರದ ಆದೇಶ ಪತ್ರ ವಿತರಿಸಿ ಬಳಿಕ ಕನ್ನಡಪ್ರಭದೊಂದಿಗೆ ಮಾತನಾಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಭರದಲ್ಲಿ ರಾಜ್ಯ ಸರ್ಕಾರ ರೈತರ ಸಂಕಷ್ಟಗಳಿಗೆ ಕಿವಿಗೊಡುತ್ತಿಲ್ಲ. ಕ್ಷೇತ್ರದ ೧೭ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಪೂರಕ ಅನುದಾನ ಒದಗಿಸದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಪಾಲಿಗೆ ಒಂದು ಶಾಪವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಉಪ್ಪಾರಗಟ್ಟಿ ಗ್ರಾಮಕ್ಕೆ ತೆರಳಿ ಗ್ರಾಮದಲ್ಲಿ ಸಿಡಿಲಿಗೆ ಬಲಿಯಾಗಿದ್ದ ೩೬ ಕುರಿಗಳ ಕುರಿಗಾರರಾಗಿದ್ದ ಬಿ.ಅಜ್ಜಪ್ಪ ಮತ್ತು ಸುರೇಶ್ ಅವರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ₹೧.೪೪ ಲಕ್ಷ ಪರಿಹಾರದ ಆದೇಶ ಪತ್ರ ವಿತರಿಸಿದರು.

ಈ ವೇಳೆ ಮಾತನಾಡಿದ ನೇಮರಾಜ ನಾಯ್ಕ, ಕುರಿಗಳ ಸಂರಕ್ಷಣೆಗೆ ಕುರಿಗಾರರು ಮುತುವರ್ಜಿ ವಹಿಸಬೇಕು. ಕುರಿಗಳು ಚಲಿಸುವ ನಿಧಿಯಾಗಿದ್ದು, ಮಳೆಗಾಲದ ಸಮಯದಲ್ಲಿ ಮೇಯಲು ತೆರಳಿದಾಗ ಕುರಿಗಳನ್ನು ಸಿಡಿಲಿನಿಂದ ರಕ್ಷಿಸಲು ಮುನ್ನಚ್ಚರಿಕೆ ವಹಿಸುವ ಮೂಲಕ ಕುರಿಗಳನ್ನು ಪ್ರಾಕೃತಿಕ ವಿಕೋಪಗಳಿಂದ ರಕ್ಷಿಸಬೇಕು ಎಂದು ಸಲಹೆ ನೀಡಿದರು.


ಉಪ ತಹಸೀಲ್ದಾರ್ ಶಿವಕುಮಾರಗೌಡ, ಪಶು ವೈದ್ಯಾಧಿಕಾರಿ ಡಾ.ಪಿ.ಸೂರಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಪಿಲ್ಲೋಬನಹಳ್ಳಿ ಬೆಳ್ಳಿಯಪ್ಪ, ದಸಮಾಪುರ ಚಂದ್ರಪ್ಪ ಇದ್ದರು.