ರಕ್ತದಾನದಿಂದ ವ್ಯಕ್ತಿಯ ಬದುಕಿಗೆ ಚೈತನ್ಯ: ಡಾ. ಮಹೇಶ ಪಾಟೀಲ

| Published : Jun 17 2024, 01:32 AM IST

ಸಾರಾಂಶ

ಧಾರವಾಡದ ಶಿವಕೃಪಾ ಟ್ರಸ್ಟ್ ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಭಾನುವಾರ ನಗರದ ಆದರ್ಶ ಬಾಲಿಕಿಯರ ಪ್ರೌಢಶಾಲೆಯ ಸಭಾಭವನದಲ್ಲಿ ರಕ್ತದಾನ ಶಿಬಿರ ಆಯೋಜಿಸಿತ್ತು.

ಧಾರವಾಡ: ಇಲ್ಲಿಯ ಶಿವಕೃಪಾ ಟ್ರಸ್ಟ್ ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಭಾನುವಾರ ನಗರದ ಆದರ್ಶ ಬಾಲಿಕಿಯರ ಪ್ರೌಢಶಾಲೆಯ ಸಭಾಭವನದಲ್ಲಿ ರಕ್ತದಾನ ಶಿಬಿರ ಆಯೋಜಿಸಿತ್ತು.

ಶಿಬಿರ ಉದ್ಘಾಟಿಸಿದ ವೈದ್ಯ ಡಾ. ಮಹೇಶ ಪಾಟೀಲ, ಆಯಾ ಕಾಲಘಟಕ್ಕೆ ಒಂದು ದಾನಗಳು ಶ್ರೇಷ್ಠವಾದರೆ, ಒಂದು ಜೀವ ಉಳಿಸಲು ರಕ್ತದಾನವೇ ಶ್ರೇಷ್ಠ. ಹೀಗಾಗಿ ಸರ್ವರು ಕಾಲಕಾಲಕ್ಕೆ ರಕ್ತದಾನ ಮಾಡಬೇಕು. ಇದರಿಂದ ಯಾವುದೇ ಜೀವವು ನಷ್ಟವಾಗಲ್ಲ. ಇದರಿಂದ ರಕ್ತದಾನಿಗೂ ಬದುಕಿಗೆ ಚೈತನ್ಯ ಬರಲಿದೆ. ಯಾವುದೇ ದೌರ್ಬಲ್ಯವೂ ತರುವುದಿಲ್ಲ. ಅದು ಸ್ವತಃ ಅನೇಕ ರೋಗಗಳಿಗೂ ಪರಿಹಾರವಾಗಲಿದೆ ಎಂದರು.

ರಕ್ತದಲ್ಲಿ ಬಿಳಿ ರಕ್ತಕಣ, ಪ್ಲಾಸ್ಮಾ ಹೀಗೆ ವಿಂಗಡಿಸಲಿದೆ. ಕೇವಲ ಒಬ್ಬ ವ್ಯಕ್ತಿ ಮಾಡುವ ರಕ್ತದಾನ, ಹಲವು ರೋಗಿಗಳಿಗೆ ಅನುಕೂಲ ಆಗಲಿದೆ. ಹೀಗಾಗಿ ವರ್ಷಕ್ಕೆ ಎರಡ್ಮೂರು ಸಲ ರಕ್ತದಾನ ಮಾಡಬೇಕು ಎಂದು ಹೇಳಿದರು.ರಕ್ತಹೀನತೆ, ವಿವಿಧ ಕಾಯಿಲೆಗಳಿಂದ ಬಳಲುವರು, ಅಪಘಾತದ ತುರ್ತು ಸಂದರ್ಭಗಳಿಗೆ ರಕ್ತದ ಅಗತ್ಯವಿದೆ. ಹೀಗಾಗಿ ಪರೋಪಕಾರ ಉದ್ದೇಶವುಳ್ಳ ಇಂತಹ ರಕ್ತದಾನ ಶಿಬಿರ ಹೆಚ್ಚೆಚ್ಚು ನಡೆಯಬೇಕು ಎಂದರು.

ಶಿಬಿರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಹಾಗೂ ಹಲವು ಯುವಕರು ರಕ್ತದಾನ ಮಾಡಿದರು. ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ನಡೆದ ಶಿಬಿರದಲ್ಲಿ ಒಟ್ಟು 25 ಯುನಿಟ್ ರಕ್ತ ಸಂಗ್ರಹ ಮಾಡಲಾಯಿತು. ಶಿವಕೃಪಾ ಟ್ರಸ್ಟ್ ಅಧ್ಯಕ್ಷ ಅಮರನಾಥ ಟಿಕಾರೆ, ರಾಷ್ಟ್ರೋತ್ಥಾನ ರಕ್ತದಾನ ಕೇಂದ್ರದ ಟ್ರಸ್ಟಿ ದತ್ತಮೂರ್ತಿ ಕುಲಕರ್ಣಿ, ವೆಂಕಟೇಶ ಕರಿಕಲ್ಲ, ಆರ್.ಎಂ. ಕುಲಕರ್ಣಿ, ರವಿ ಕಾಮತ್ ಪಾಲ್ಗೊಂಡಿದ್ದರು.