ಕನ್ನಡಪ್ರಭ ವಾರ್ತೆ ಮೈಸೂರು
ಇಂದು ಅನ್ನದಾನ ಶ್ರೇಷ್ಠದಾನ ಮಹಾದಾನ ಎನ್ನುತ್ತಾರೆ, ಅದು ನಿಜವೂ ಹೌದು. ನಮ್ಮ ಹೃದಯ ಒಂದು ಹನಿ ರಕ್ತ ಪಡೆದು ಅದನ್ನು ಶುದ್ಧೀಕರಿಸಿ ನಮ್ಮ ಎಲ್ಲಾ ಅಂಗಗಳಿಗೂ ಹಂಚಿಕೆ ಮಾಡುತ್ತದೆ. ಅಂತಹ ರಕ್ತವನ್ನು ಹೊರಗಿನಿಂದ ನೀಡುವ ರಕ್ತದಾನಿಗಳು ನಿಜವಾದ ಹೃದಯವಂತರಾಗಿದ್ದಾರೆ ಎಂದು ಚಂದ್ರವನ ಆಶ್ರಮ ಮತ್ತು ಬೇಬಿ ಮಠದ ಶ್ರೀತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ತಿಳಿಸಿದರು.ನಗರದ ಜೆ.ಕೆ.ಮೈದಾನದಲ್ಲಿರುವ ಎಂಎಂಸಿ ಸಭಾಂಗಣದಲ್ಲಿ ಲಯನ್ಸ್ ಬ್ಲಡ್ ಸೆಂಟ್ ಜೀವಧಾರ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್, ಬ್ಲಡ್ ಆನ್ ಕಾಲ್ ಕ್ಲಬ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ರಕ್ತದಾನಿಗಳ ಹಬ್ಬದಲ್ಲಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದರು.
ಒಂದು ಜೀವ ಜೀವಂತವಾಗಿ ಇರಲು ರಕ್ತ ಅಷ್ಟೇ ಮುಖ್ಯವಾಗುತ್ತದೆ. ಅನ್ನದಾಸೋಹಿಗಳಿಗೆ ದಾಸೋಹ ದಿನ ಎಂದು ಮಾಡುತ್ತಿದ್ದೀರಿ, ಹಾಗೆಯೇ ರಕ್ತ ನೀಡುವವರಿಗೆ ರಕ್ತದಾನಿಗಳ ದಿನ ಆಚರಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಬೇಕಿದೆ ಎಂದರು.ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಅಗತ್ಯವಾಗಿವೆ. ಅನೇಕ ಬಾರಿ ರಕ್ತದಾನ ಮಾಡಿರುವ ನಿಮ್ಮಂತಹವರನ್ನು ಸನ್ಮಾನಿಸಿ ನಿಮ್ಮನ್ನು ಮತ್ತಷ್ಟು ಪ್ರೇರೆಪಿಸುವ ಕಾರ್ಯ ಶ್ಲಾಘನಿಯ. ನಿಮ್ಮೆಲ್ಲರ ಕಾರ್ಯ ಹೀಗೆ ಮುಂದುವರೆಯಲಿ ಎಂದು ಆಶಿಸಿದರು.
ನೂರಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ 100 ಹೆಚ್ಚು ಮಂದಿಯೂ ಸೇರಿದಂತೆ 250 ರಕ್ತದಾನಿಗಳನ್ನು ಗೌರವಿಸಲಾಯಿತು.
ಡಿಸಿಪಿ ಕೆ.ಎಸ್. ಸುಂದರ್ ರಾಜ್, ಕಿರುತೆರೆ ನಟಿ ಮೀನಾಕ್ಷಿ, 310 ಬಾರಿ ರಕ್ತದಾನ ಮಾಡಿದ ವಿ. ಭೂಪೇಂದ್ರನ್, 275 ಬಾರಿ ರಕ್ತದಾನ ಮಾಡಿದ ಎಸ್. ಭಾಸ್ಕರ್ ರಾವ್, ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್, ಲಯನ್ಸ್ ಬ್ಲಡ್ ಸೆಂಟರ್ ಜೀವಾಧಾರ ಸಂಸ್ಥಾಪಕ ಟ್ರಸ್ಟಿ ಮನೋಜ್ ಕುಮಾರ್, ಮ್ಯಾನೇಜಿಂಗ್ ಟ್ರಸ್ಟಿ ಎಸ್.ಇ. ಗಿರೀಶ್, ಎಕಿಕ್ಯೂಟಿವ್ ಟ್ರಸ್ಟಿ ಸಿ.ಜೆ. ಮುತ್ತಣ್ಣ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಬ್ಲಡ್ ಆನ್ ಕಾಲ್ ಕ್ಲಬ್ ಸಂಸ್ಥಾಪಕ ದೇವೇಂದ್ರ ಕುಮಾರ್, ಆನಂದ್ ಮಂದೂತ್ ಮೊದಲಾದವರು ಇದ್ದರು.