ಕನ್ನಡಪ್ರಭ ವಾರ್ತೆ ಮಂಡ್ಯ
ಜೀವ ಉಳಿಸುವುದಕ್ಕೆ ರಕ್ತಕ್ಕೆ ರಕ್ತವೇ ಮೂಲ. ರಕ್ತಕ್ಕೆ ಪರ್ಯಾಯ ವಸ್ತುವನ್ನು ಇದುವರೆಗೂ ಸೃಷ್ಟಿಸಲಾಗಿಲ್ಲ. ಹಾಗಾಗಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ಅಪಾಯಕ್ಕೆ ಸಿಲುಕಿದವರ ಜೀವರಕ್ಷಕರಾಗಬೇಕು ಎಂದು ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಹೇಳಿದರು.ಪಿಇಟಿ ಸಂಸ್ಥೆಯಡಿ ಪಿಇಎಸ್ ವಿಜ್ಞಾನ ಕಲಾ ಮತ್ತು ವಾಣಿಜ್ಯ ಕಾಲೇಜಿನ ಯೂತ್ ರೆಡ್ ಕ್ರಾಸ್, ಮಂಡ್ಯ ಮೆಡಿಕಲ್ ಕಾಲೇಜ್ ರಕ್ತ ನಿಧಿ ಕೇಂದ್ರದ ಸಹಕಾರದೊಂದಿಗೆ ಎನ್ಎಸ್ಎಸ್ ಘಟಕ, ಎನ್ಸಿಸಿ ಘಟಕ, ರೋವರ್ಸ್ ಘಟಕದ ಐಕ್ಯೂ ಎಸಿ ಹಾಗೂ ಕ್ರೀಡಾ ಘಟಕದಿಂದ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ರಕ್ತದಾನದ ಬಗೆಗಿನ ಮೂಢನಂಬಿಕೆಯನ್ನು ದೂರವಿಡಬೇಕು. ರಕ್ತದಾನದಿಂದ ಆರೋಗ್ಯ ಉತ್ತಮಗೊಳ್ಳುತ್ತದೆ. ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗಲು ಸಹಕಾರಿಯಾಗಿದೆ. ವರ್ಷದಲ್ಲಿ ಎರಡು ಬಾರಿ ರಕ್ತದಾನ ಮಾಡುವುದಕ್ಕೆ ಅವಕಾಶವಿರುವುದರಿಂದ ಯುವಸಮೂಹ ರಕ್ತದಾನ ಮಾಡಿ ಜೀವ ಉಳಿಸುವ ಕೆಲಸ ಮಾಡಬೇಕು ಎಂದರು.ರಕ್ತದಾನದಿಂದ ರಕ್ತದ ಒತ್ತಡ ಸೇರಿದಂತೆ ಅನೇಕ ಕಾಯಿಲೆಗಳನ್ನು ದೂರವಿಡಬಹುದು. ರಾಷ್ಟ್ರ ಮತ್ತು ರಾಜ್ಯದಲ್ಲಿ ಅಗತ್ಯವಿರುವ ಬೇಡಿಕೆಗೆ ತಕ್ಕಷ್ಟು ರಕ್ತ ದೊರಕುತ್ತಿಲ್ಲ. ಇದರಿಂದ ನಿರೀಕ್ಷಿತ ಮಟ್ಟದಲ್ಲಿ ಜೀವಗಳನ್ನು ಉಳಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೊಸ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೃಷ್ಟಿಯಾಗಬೇಕು. ಯುವಜನಾಂಗ ರಕ್ತದಾನ ಮಾಡುವುದಕ್ಕೆ ವಿಶೇಷ ಆಸಕ್ತಿ ತೋರಬೇಕು. ಯಾರೂ ರಕ್ತದಾನ ಮಾಡುವುದಕ್ಕೆ ಹಿಂಜರಿಯಬಾರದು. ರಕ್ತದಾನ ಒಂದು ಶ್ರೇಷ್ಠವಾದ ದಾನವಾಗಿದ್ದು, ರಕ್ತ ಕೊಟ್ಟು ಅಮೂಲ್ಯ ಜೀವ ಉಳಿಸುವಂತೆ ಮನವಿ ಮಾಡಿದರು.
ಕಾಲೇಜಿನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು 175 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ಆನಂದ್ ಅವರು ಪ್ರಮಾಣಪತ್ರ ನೀಡಿದರು.
ಇದೇ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ.ನೀಲಕಂಠ ಉಪ ಪ್ರಾಂಶುಪಾಲರಾದ ಡಾ. ಎಸ್.ಕೆ.ವೀರೇಶ್, ಡಾ.ಶಿವಕುಮಾರ್, ಡೇವಿಡ್ ಪ್ರತಿಭಾಂಜಲಿ, ಜೋಗಿ ಗೌಡ, ಡಾ.ರಮೇಶ್, ಸಂತೋಷ್, ಡಾ.ಗಿರೀಶ್, ಡಾ. ಪರಮೇಶ್ವರಿ ಇನ್ನಿತರ ಅಧ್ಯಾಪಕರುಹಾಜರಿದ್ದರು.