ಸಮಾಜದಲ್ಲಿ ಎಲ್ಲ ದಾನಗಳನ್ನು ಮೀರಿದ್ದು ರಕ್ತದಾನ. ಇಂದಿನ ವೇಗದ ಜೀವನದಲ್ಲಿ ಅಪಘಾತಗಳು, ಶಸ್ತ್ರಚಿಕಿತ್ಸೆ, ರಕ್ತ ಹೀನತೆ ಹಾಗೂ ಹೆರಿಗೆಯಂತಹ ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ದೊರೆಯುವ ರಕ್ತವೇ ನಿಜವಾದ ಸಂಜೀವಿನಿಯಾಗಿದೆ.
ಕನ್ನಡಪ್ರಭ ವಾರ್ತೆ ಅಂಕೋಲಾ
ಸಮಾಜದಲ್ಲಿ ಎಲ್ಲ ದಾನಗಳನ್ನು ಮೀರಿದ್ದು ರಕ್ತದಾನ. ಇಂದಿನ ವೇಗದ ಜೀವನದಲ್ಲಿ ಅಪಘಾತಗಳು, ಶಸ್ತ್ರಚಿಕಿತ್ಸೆ, ರಕ್ತ ಹೀನತೆ ಹಾಗೂ ಹೆರಿಗೆಯಂತಹ ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ದೊರೆಯುವ ರಕ್ತವೇ ನಿಜವಾದ ಸಂಜೀವಿನಿಯಾಗಿದೆ ಎಂದು ಲಯನ್ಸ್ ಕ್ಲಬ್ನ ರಕ್ತದಾನ ವಿಭಾಗದ ಎಂ.ಜೆ.ಎಫ್ ಗುರುರಾಜ ಹೊನ್ನಾವರ ಹೇಳಿದರು.ಕೆ.ಎಲ್.ಇ ಸಂಸ್ಥೆ ಅಂಕೋಲಾ ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿ ಹಾಗೂ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಕಾರವಾರದ ಆಶ್ರಯದಲ್ಲಿ ಕೆ.ಎಲ್.ಇ ಸಮೂಹ ಸಂಸ್ಥೆಗಳು ಅಂಕೋಲಾದಲ್ಲಿ ಡಾ. ಪ್ರಭಾಕರ ಕೋರೆಯವರ 79 ನೇ ಜನ್ಮದಿನದ ದಿನಾಚರಣೆಯ ನಿಮಿತ್ತ ಆಯೋಜಿಸಲಾದ ಹತ್ತನೇ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಾರವಾರ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಸುಪ್ರಿಯಾ ಸಾವಂತ ಮಾತನಾಡಿ, ವೈದ್ಯಕೀಯ ವಿಜ್ಞಾನದ ಪ್ರಕಾರ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವುದರಿಂದ ಆತನ ಆರೋಗ್ಯ ವೃದ್ಧಿಯಾಗುತ್ತದೆ. ಅಲ್ಲದೆ ದೇಹದಲ್ಲಿ ಹೊಸ ರಕ್ತ ಕಣಗಳು ಉತ್ಪತ್ತಿಯಾಗಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ ಎಂದರು.ಅಂಕೋಲಾ ಲಯನ್ಸ್ ಕ್ಲಬ್ ಕರಾವಳಿಯ ಅಧ್ಯಕ್ಷ ಜಿ.ಆರ್. ತಾಂಡೇಲ ಮಾತನಾಡಿ, ಜಾತಿ, ಧರ್ಮ, ಭಾಷೆಗಳ ಗಡಿಯನ್ನು ಮೀರಿದ್ದು ರಕ್ತದಾನ. ಒಬ್ಬರ ದೇಹದಲ್ಲಿ ಹರಿಯುವ ರಕ್ತ ಇನ್ನೊಬ್ಬರ ದೇಹದಲ್ಲಿ ಜೀವಂತವಾಗಿ ಉಳಿಯುತ್ತದೆ ಎನ್ನುವುದು ಮಾನವೀಯತೆಯ ಪವಾಡ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ಥಳೀಯ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ. ಮಿನಲ್ ನಾರ್ವೆಕರ ಮಾತನಾಡಿದರು.ಈ ಸಂದರ್ಭ ದಂತ ವೈದ್ಯ ಡಾ. ಕರುಣಾಕರ ನಾಯ್ಕ ಅವರನ್ನು ಗೌರವಿಸಲಾಯಿತು. ನಿವೃತ್ತ ಗ್ರಂಥಪಾಲಕ ಮಹಾಂತೇಶ ರೇವಡಿಯವರು ಪರಿಚಯಿಸಿದರು. ಶೇಷಗಿರಿ ಪಿಕಳೆ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿನಾಯಕ ಜಿ ಹೆಗಡೆಯವರು ಸ್ವಾಗತಿಸಿ 17 ನೇ ಬಾರಿ ರಕ್ತದಾನ ಮಾಡಿದರು. ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಗಂಗಾಧರ ಇಸರಣ್ಣನವರ ವಂದಿಸಿದರು. ಉಪನ್ಯಾಸಕ ಮಂಜುನಾಥ ಇಟಗಿ ನಿರೂಪಿಸಿದರು. ರಕ್ತದಾನ ಶಿಬಿರದಲ್ಲಿ ಒಟ್ಟು 21 ಜನ ರಕ್ತದಾನ ಮಾಡಿದರು. ಲಯನ್ಸ್ ಹಿರಿಯ ಸದಸ್ಯ ದುರ್ಗಾನಂದ ದೇಸಾಯಿ ಉಪಸ್ಥಿತರಿದ್ದರು.