ಮುಖ್ಯಮಂತ್ರಿ ಭಾಗಿ ಆಗಿದ್ದ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಹಾಡಿನ ಎರಡೇ ಚರಣ ಹಾಡಿದ ವಿಚಾರವಾಗಿ ಗೊಂದಲ ಉಂಟಾಗಿ, ಸಭೆ ಕೆಲಕಾಲ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು. ಶಾಸಕ ಎಸ್‌.ಎನ್‌.ಚನ್ನಬಸಪ್ಪ ಅವರು ವಂದೇ ಮಾತರಂ ಹಾಡನ್ನು ಪೂರ್ಣವಾಗಿ ಹಾಡಲು ಅವಕಾಶ ನೀಡದಿರುವುದಕ್ಕೆ ಆಕ್ಷೇಪಿಸಿದರು.

ತೀರ್ಥಹಳ್ಳಿ : ಮುಖ್ಯಮಂತ್ರಿ ಭಾಗಿ ಆಗಿದ್ದ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಹಾಡಿನ ಎರಡೇ ಚರಣ ಹಾಡಿದ ವಿಚಾರವಾಗಿ ಗೊಂದಲ ಉಂಟಾಗಿ, ಸಭೆ ಕೆಲಕಾಲ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು.

ಪೂರ್ಣವಾಗಿ ಹಾಡಲು ಅವಕಾಶ ನೀಡದಿರುವುದಕ್ಕೆ ಆಕ್ಷೇಪ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಅನಂತಮೂರ್ತಿ ಪ್ರೌಢಶಾಲೆ ಮೈದಾನದಲ್ಲಿ ಶನಿವಾರ ಕಸ್ತೂರಿರಂಗನ್ ವರದಿ ಕುರಿತು ರೈತರೊಂದಿಗೆ ಚರ್ಚಿಸಲು ಆಯೋಜಿಸಿದ್ದ ಕಾರ್ಯಕ್ರಮದ ಆರಂಭದಲ್ಲೇ ವೇದಿಕೆಯಲ್ಲೇ ಮೈಕ್ ಮುಂದೆ ಬಂದ ಬಿಜೆಪಿ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಅವರು ವಂದೇ ಮಾತರಂ ಹಾಡನ್ನು ಪೂರ್ಣವಾಗಿ ಹಾಡಲು ಅವಕಾಶ ನೀಡದಿರುವುದಕ್ಕೆ ಆಕ್ಷೇಪಿಸಿದರು.

ಆಗ ಗೊಂದಲದ ವಾತಾವರಣ ನಿರ್ಮಾಣವಾಯಿತು. ಇದರ ನಡುವೆಯೇ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್.ಸಿ.ಯೋಗೀಶ್ ಅವರು ವೇದಿಕೆಗೆ ಆಗಮಿಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪರವಾಗಿ ಘೋಷಣೆ ಕೂಗಿದರು. ಕಾಂಗ್ರೆಸ್‌ನ 2ನೇ ಹಂತದ ನಾಯಕರು ಚನ್ನಬಸಪ್ಪ ಜೊತೆ ವಾಗ್ಯುದ್ಧ ನಡೆಸಿದರು. ಶಾಸಕ ಚನ್ನಬಸಪ್ಪ ಅವರನ್ನು ಮುತ್ತಿಗೆ ಹಾಕಿ ಅವರ ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿದರು.

ಅಸಮಾಧಾನದಿಂದಲೇ ಚನ್ನಬಸಪ್ಪನವರು ವೇದಿಕೆಗೆ ಹಿಂದಿರುಗಿದರು

ಇದರಿಂದಾಗಿ ಅಸಮಾಧಾನದಿಂದಲೇ ಚನ್ನಬಸಪ್ಪನವರು ವೇದಿಕೆಗೆ ಹಿಂದಿರುಗಿದರು. ಬಳಿಕ ಸಿಎಂ ಅವರು ತಮ್ಮ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿ, ಚನ್ನಬಸಪ್ಪನವರು ಯಾಕೆ ಈ ವಿಷಯವನ್ನು ಕೆಣಕಿದ್ದಾರೋ ಗೊತ್ತಿಲ್ಲ. ಕೇಂದ್ರ ಸರ್ಕಾರ ಕೈಗೊಂಡಿರುವ ಈ ನಿರ್ಧಾರಕ್ಕೆ ನಮ್ಮದೇ ಆದ ಅಭಿಪ್ರಾಯವಿದೆ. ಶಾಸಕರ ಅಭಿಪ್ರಾಯಕ್ಕೆ ಇಲ್ಲಿನ ಜನ ಉತ್ತರ ಕೊಟ್ಟಿದ್ದಾರೆ. ನಾನೇನೂ ಹೇಳುವುದಿಲ್ಲ. ಇಲ್ಲಿ ಪ್ರತಿಭಟನೆ ಮಾಡುವವರು ಹೊರಗೆ ಹೋಗಬಹುದು ಎಂದರು.