ವಿದ್ಯಾರ್ಥಿಯು ಗುರುಗಳ ಬಳಿ ಭರತನಾಟ್ಯ ಕಲಿತ ನಂತರ ಸಾರ್ವಜನಿಕ ವೇದಿಕೆಯಲ್ಲಿ ಮೊದಲ ಬಾರಿ ಪೂರ್ಣ ಪ್ರಮಾಣದ ನೃತ್ಯ ಪ್ರದರ್ಶಿಸುವ ಮೂಲಕ ರಂಗ ಪ್ರವೇಶ ಮಾಡುತ್ತಾರೆ. ಆದರೆ ಈ ರಂಗಪ್ರವೇಶವು ನೃತ್ಯಪಟುವಿನ ಪೋಷಕರಿಗೆ ಹೊರೆಯಾಗಬಾರದು ಎಂದು ಸಹಚೇತನ ನಾಟ್ಯಾಲಯದ ಗೌರವಾಧ್ಯಕ್ಷ, ಶಾಸಕ ಎಸ್.ಎನ್. ಚನ್ನಬಸಪ್ಪ ಆಶಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಿದ್ಯಾರ್ಥಿಯು ಗುರುಗಳ ಬಳಿ ಭರತನಾಟ್ಯ ಕಲಿತ ನಂತರ ಸಾರ್ವಜನಿಕ ವೇದಿಕೆಯಲ್ಲಿ ಮೊದಲ ಬಾರಿ ಪೂರ್ಣ ಪ್ರಮಾಣದ ನೃತ್ಯ ಪ್ರದರ್ಶಿಸುವ ಮೂಲಕ ರಂಗ ಪ್ರವೇಶ ಮಾಡುತ್ತಾರೆ. ಆದರೆ ಈ ರಂಗಪ್ರವೇಶವು ನೃತ್ಯಪಟುವಿನ ಪೋಷಕರಿಗೆ ಹೊರೆಯಾಗಬಾರದು ಎಂದು ಸಹಚೇತನ ನಾಟ್ಯಾಲಯದ ಗೌರವಾಧ್ಯಕ್ಷ, ಶಾಸಕ ಎಸ್.ಎನ್. ಚನ್ನಬಸಪ್ಪ ಆಶಿಸಿದರು.

ಸಹಚೇತನ ನಾಟ್ಯಾಲಯದ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ನಾಟ್ಯಾರಾಧನಾ-15 ಎಂಬ ರಾಷ್ಟ್ರೀಯ ನೃತ್ಯ ಮಹೋತ್ಸವದ ಶನಿವಾರ ಸಮಾರೋಪದಲ್ಲಿ ಅವರು ಮಾತನಾಡಿ, ಭರತನಾಟ್ಯ ಕೇವಲ ಶ್ರೀಮಂತರಿಗಷ್ಟೇ ಅಲ್ಲ ಎಂಬ ಭಾವನೆಯನ್ನು ಹೋಗಲಾಡಿಸಲು ನೃತ್ಯ ಗುರು, ವಿದುಷಿ ಸಹನಾ ಚೇತನ್ ಅವರು ಸ್ಲಂಗಳಲ್ಲಿರುವ ಸಾಮಾನ್ಯ ಮಕ್ಕಳಲ್ಲಿಯೂ ಭರತನಾಟ್ಯದ ಅಭಿರುಚಿ ಮೂಡಿಸಿ, ಕಲೆಯನ್ನು ಕಲಿಸಿ ಅವರು ರಂಗಪ್ರವೇಶ ಮಾಡುವ ಹಂತದವರೆಗೂ ಮಾರ್ಗದರ್ಶನ ಮಾಡುತ್ತಿದ್ದಾರೆ. ಈ ಮೂಲಕ ಎಲ್ಲಾ ಸ್ತರಗಳಲ್ಲಿಯೂ ಕಲೆ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಬೇಂದ್ರೆಯವರ ಜೀವನ ಹಾಗೂ ಕೃತಿಗಳ ಆಧಾರಿತ ವಿಶೇಷ ನೃತ್ಯರೂಪಕವನ್ನು ಪ್ರದರ್ಶಿಸಿದ ಬೆಂಗಳೂರಿನ ಪ್ರತಿಭಾ ರಾಮಸ್ವಾಮಿ ಹಾಗೂ ಜನನಿ ಮುರುಳಿ ಮತ್ತು ಕಥಕ್ ನೃತ್ಯ ಪ್ರದರ್ಶಿಸಿದ ಕೋಲ್ಕತ್ತಾದ ಪ್ರಿಯಾಂಕ ಸಹ ಮತ್ತು ತಂಡದವರನ್ನು ಸನ್ಮಾನಿಸಲಾಯಿತು.

ನೃತ್ಯಗುರು, ವಿದುಷಿ ಸಹನಾ ಚೇತನ್, ಚೇತನ್, ಡಾ. ನಾಗಮಣಿ, ವಿನಯ್ ಶಿವಮೊಗ್ಗ, ಆನಂದರಾಮ್, ಡಾ. ಮೈತ್ರೇಯಿ ಉಪಸ್ಥಿತರಿದ್ದರು.

----------

ಪೊಟೋ: 06ಎಸ್‌ಎಂಜಿಕೆಪಿ06