ಸಾರಾಂಶ
ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾದ ಬಾಗಲಕೋಟೆ ನಗರ, ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ಇಲ್ಲಿನ ವ್ಯಾಪಾರ-ವಹಿವಾಟಿಗೆ ಅನುಕೂಲ ಕಲ್ಪಿಸುವ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ.
ಬಾಗಲಕೋಟೆ : ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾದ ಬಾಗಲಕೋಟೆ ನಗರ, ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ಇಲ್ಲಿನ ವ್ಯಾಪಾರ-ವಹಿವಾಟಿಗೆ ಅನುಕೂಲ ಕಲ್ಪಿಸುವ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಬಾಗಲಕೋಟೆ ಸುತ್ತಲಿನ ಹಿನ್ನೀರಿನಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಿ, ಆ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸಮಗ್ರ ಯೋಜನಾ ವರದಿ ಸಿದ್ಧಪಡಿಸಬೇಕು ಎಂದು ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ. ಮೇಟಿ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕ ಮೋಹನರಾಜ್ ಅವರಿಗೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಿ, ಬರಲಿರುವ ಬಜೆಟ್ ನಲ್ಲಿ ಅನುದಾನ ಮೀಸಲಿರಿಸಲು ಪ್ರಸ್ತಾವನೆ ಸಿದ್ಧಪಡಿಸಬೇಕು ಎಂದು ಮನವಿ ಮಾಡಿದರು.
ವ್ಯಾಪಕವಾಗಿ ಹರಡಿಕೊಂಡಿರುವ ಹಿನ್ನೀರು ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶವಿದೆ. ಬಾಗಲಕೋಟೆಯ ಹಳೆಯ ಮುರನಾಳ ಬಳಿ ಹಿನ್ನೀರು ವ್ಯಾಪ್ತಿಯಿಂದ ನವನಗರ ಯೂನಿಟ್-2 ಮತ್ತು 3 ಸುತ್ತುವರಿದು, ಅಲ್ಲಿಂದ ಮಹಾರುದ್ರಪ್ಪನ ಹಳ್ಳದ ಬಳಿ ಪುನಃ ಹಿನ್ನೀರು ವ್ಯಾಪ್ತಿಗೆ ಸೇರಿಸುವಂತೆ ಸುಮಾರು 30 ಮೀಟರ್ ವ್ಯಾಪ್ತಿಯ ಕಾಲುವೆ ನಿರ್ಮಿಸಬೇಕು. ಆ ಮೂಲಕ ಬೋಟಿಂಗ್ ವ್ಯವಸ್ಥೆ ಮೂಲಕ ಇಡೀ ನಗರ ಪ್ರದಕ್ಷಿಣೆ ಹಾಕುವಂತಾಗಬೇಕು. ಇದರಿಂದ ಕಾಲುವೆ ಎರಡೂ ಬದಿಗೆ ಸ್ಥಳೀಯ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸುವ ಜೊತೆಗೆ ಪ್ರವಾಸಿ ತಾಣವಾಗಿ ನಿರ್ಮಿಸಲು ಅವಕಾಶವಿದೆ. ಈ ಕುರಿತು ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ, ಜಲಸಂಪನ್ಮೂಲ ಇಲಾಖೆ ಮೂಲಕ ಬಜೆಟ್ ನಲ್ಲಿ ಮಂಜೂರಾತಿ ಮಾಡಲು ಪ್ರಯತ್ನಿಸಬೇಕು ಎಂದು ಕೋರಿದರು.
ಬಾಗಲಕೋಟೆ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ವಿವಿಧ ನೀರಾವರಿ ಯೋಜನೆಗಳಿಗೆ ಅನುದಾನ ನೀಡಬೇಕು. ಕೆಲ ಯೋಜನೆಗಳಿಗೆ ಮಂಜೂರಾತಿ ಕೊಟ್ಟರೂ, ಅನುದಾನ ಕೊಟ್ಟಿಲ್ಲ. ಹೀಗಾಗಿ ಕಾಮಗಾರಿ ನಡೆದಿಲ್ಲ. ಕೂಡಲೇ ನನ್ನ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮಂಜೂರಾದ ನೀರಾವರಿ ಯೋಜನೆಗಳಿಗೆ ಅಗತ್ಯ ಅನುದಾನ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಕೆಬಿಜೆಎನ್ಎಲ್ ನಲ್ಲಿ ಕೈಗೊಂಡ ನಿರ್ಣಯದಂತೆ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿದ್ದ ಕಾರ್ಪಸ್ ಫಂಡ್ ಅನ್ನು ನಿಗಮಕ್ಕೆ ಪಡೆಯಲಾಗಿದೆ. ಈ ಕಾರ್ಪಸ್ ಫಂಡ್ ನಲ್ಲಿ ನವನಗರ ಯೂನಿಟ್-1 ಮತ್ತು 2ರ ನಿರ್ವಹಣೆ ಮಾಡಲಾಗುತ್ತಿತ್ತು. ಆ ಹಣ ನಿಗಮಕ್ಕೆ ಪಡೆದ ಹಿನ್ನೆಲೆ ನವನಗರಗಳ ನಿರ್ವಹಣೆಗೆ ಸಮಸ್ಯೆ ಆಗುತ್ತಿದೆ. ಈಗಾಗಲೇ ₹0384 ಕೋಟಿಯಲ್ಲಿ ₹100 ಕೋಟಿಯನ್ನಷ್ಟೇ ಮರಳಿ ನೀಡಿದ್ದು, ಇನ್ನೂ ಬಾಕಿ ಇರುವ ₹284 ಕೋಟಿ ಕಾರ್ಪಸ್ ಫಂಡ್ ಕೂಡಲೇ ಮರಳಿ ಕೊಡಬೇಕು ಎಂದು ಮನವಿ ಮಾಡಿದರು.
ನವನಗರ ಯೂನಿಟ್-3ರಲ್ಲಿ ಸುಮಾರು 200 ಎಕರೆ ಭೂಮಿಯಲ್ಲಿ ಸಮಗ್ರ ಮಾರುಕಟ್ಟೆ ನಿರ್ಮಿಸಿ, ಹಳೆಯ ಬಾಗಲಕೋಟೆ, ವಿದ್ಯಾಗಿರಿ ಹಾಗೂ ನವನಗರ ವಿವಿಧೆಡೆ ಹರಿದು-ಹಂಚಿ ಹೋಗಿರುವ ಎಲ್ಲ ವ್ಯಾಪಾರ-ವಹಿವಾಟು ಒಂದೆಡೆ ನಡೆಸಲು ಅನುಕೂಲವಾಗುತ್ತದೆ. ಈ ಕುರಿತು ಬಿಟಿಡಿಎ ಸಭೆಯಲ್ಲೂ ಚರ್ಚೆಸಲಾಗಿದೆ. ಇದಕ್ಕಾಗಿ ₹2 ಸಾವಿರ ಕೋಟಿಯನ್ನು ಬಜೆಟ್ ನಲ್ಲಿ ಕಾಯ್ದಿರಿಸಬೇಕು ಎಂದು ಒತ್ತಾಯಿಸಿದರು.ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಬಿವೃದ್ಧಿ ಕಾಮಗಾರಿಗಳು, ನಗರದಲ್ಲಿ ಮುಳುಗಡೆಯಾದ ಸಂಘ-ಸಂಸ್ಥೆಗಳ ಮತ್ತು ದೇವಸ್ಥಾನ, ಮಂದಿರ ನಿರ್ಮಾಣ ಕಾರ್ಯಕ್ಕೆ ಜಾಗೆ ಮಂಜೂರು ಇನ್ನಿತರ ಜ್ವಲಂತ ಸಮಸ್ಯೆಗಳು ಮತ್ತು ನೀರಾವರಿ ಯೋಜನೆಗೆ-ಪುನರ್ವಸತಿ ಕಾಮಗಾರಿಗಳಿಗೆ ಬಜೆಟ್ ನಲ್ಲಿ ಅನುದಾನ ಕಾಯ್ದಿರಿಸುವಂತೆ ಆಗ್ರಹಿಸಿದರು.
ಬಿಟಿಡಿಎ ಮುಖ್ಯ ಅಭಿಯಂತರ ಬಸವರಾಜ ಡಿ, ಕೆಬಿಜೆಎನ್ಎಲ್ ಹಣಕಾಸು ವ್ಯವಸ್ಥಾಪಕ ಲಕ್ಷಿಕಾಂತ, ಕಾಂಗ್ರೆಸ್ನ ಯುವ ಮುಖಂಡ ಹೊಳಬಸು ಶೆಟ್ಟರ ಇತರರು ಇದ್ದರು.