ಯುವಜನತೆ ಮಾದಕ ವ್ಯಸನಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು

ಹುಬ್ಬಳ್ಳಿ: ಬ್ಯಾಂಕ್ ಆಫ್ ಇಂಡಿಯಾದ 121ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಹು-ಧಾ ವಲಯದಿಂದ ತೋಳನಕೆರೆ ಲೇಕ್ ಸರ್ಕಲ್‌ನಲ್ಲಿ ಆಯೋಜಿಸಿದ್ದ "ಬಿಒಐ 5ಕೆ ಹುಬ್ಬಳ್ಳಿ ವಾಕ್‌ಥಾನ್ 2026 " ಕಾರ್ಯಕ್ರಮದಲ್ಲಿ ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುವ ಮೂಲಕ ಯಶಸ್ವಿಯಾಗಿ ನೆರವೇರಿತು.

‘ಬಲಿಷ್ಠ ರಾಷ್ಟ್ರ ಮತ್ತು ಆರೋಗ್ಯಕರ ಸಮಾಜಕ್ಕಾಗಿ ಒಟ್ಟಾಗಿ ನಡೆಯೋಣ’ ಎಂಬ ಸಂದೇಶದೊಂದಿಗೆ ನಡೆದ ವಾಕ್‌ಥಾನ್‌ನಲ್ಲಿ ‘ನಶಾ ಮುಕ್ತ ಭಾರತ’ ಹಾಗೂ ‘ಪ್ರಾಮಾಣಿಕತೆಯಿಂದ ಸಮೃದ್ಧಿಯತ್ತ’ ಎಂಬ ಸಾಮಾಜಿಕ ಸಂದೇಶಗಳನ್ನು ಸಾರಲಾಯಿತು.

ವಾಕ್‌ಥಾನ್‌ಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಮಾತನಾಡಿ, ಯುವಜನತೆ ಮಾದಕ ವ್ಯಸನಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು ಹಾಗೂ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಪ್ರಾಮಾಣಿಕತೆ, ನೈತಿಕ ಮೌಲ್ಯಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.

ಶಾಸಕ ಎಂ.ಆರ್. ಪಾಟೀಲ, ಸಹಾಯಕ ಕಾರ್ಮಿಕ ಆಯುಕ್ತ ಮಂಜುನಾಥನ್, ಬ್ಯಾಂಕ್ ಆಫ್ ಇಂಡಿಯಾ ಹು-ಧಾ ವಲಯದ ವಲಯ ಮುಖ್ಯಸ್ಥ ತಾರಿಣಿ ಚರಣ್ ಸಾಹು, ಉಪ ವಲಯ ಮುಖ್ಯಸ್ಥ ಅಭಿನವ್ ಪಾಂಡೆ, ಬ್ಯಾಂಕ್ ಸಿಬ್ಬಂದಿ, ಗ್ರಾಹಕರು, ನಿವೃತ್ತ ಸಿಬ್ಬಂದಿ, ಪಾಲುದಾರರು ಹಾಗೂ ಸಾರ್ವಜನಿಕರು ವಾಕ್‌ಥಾನ್‌ನಲ್ಲಿ ಭಾಗವಹಿಸಿದರು. ವಿಜೇತರು ಹಾಗೂ ಆಯ್ದ ಗ್ರಾಹಕರಿಗೆ ಬಹುಮಾನ ನೀಡಿ ಗೌರವಿಸಲಾಯಿತು.