ಚಿಂತಾಮಣಿ: ಅಪರಿಚಿತ ಬೊಲೋರೋ ವಾಹನ ಚಾಲಕನ ಅಜಾಗರೂಕತೆ ಹಾಗೂ ಅತಿವೇಗದಿಂದ ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಅವರು ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಬಟ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಲ್ಲಗುಟ್ಲಹಳ್ಳಿ ಬಳಿ ನಡೆದಿದೆ.
ಅಪಘಾತದಲ್ಲಿ ಗಾಯಗೊಂಡವರನ್ನು ತಾಲೂಕಿನ ಇರಗಂಪಲ್ಲಿ ಗ್ರಾಮದ ನಿವಾಸಿ ವೆಂಕಟೇಶ್ (41) ವರ್ಷ ಎಂದು ಗುರುತಿಸಿದ್ದು, ಇವರ ತಲೆಗೆ ತೀವ್ರರೀತಿಯ ಪೆಟ್ಟು ಬಿದ್ದಿದ್ದು ಬಲಕಾಲಿಗೆ ಕೂಡ ಗಂಭೀರ ಪೆಟ್ಟು ಬಿದ್ದು ಬಲಕಾಲು ಮುರಿದಿದೆ. ಇವರ ಸ್ಥಿತಿ ಚಿಂತಾಜನಕವಾಗಿ ಕೋಲಾರದ ಆರ್, ಎಲ್ ಜಾಲಪ್ಪ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಜೊತೆಗಿದ್ದು ದ್ವಿಚಕ್ರ ವಾಹನ ಸವಾರಿ ಮಾಡುತ್ತಿದ್ದ ತಾಲೂಕಿನ ಬುಜಂಗರಾಯನಕೋಟೆ ಗ್ರಾಮದ ವಾಸಿ ನರಸಿಂಹಪ್ಪ (58) ವರ್ಷ ಅಪಘಾತದಲ್ಲಿ ಬಲಗೈ ಬೆರಳುಗಳನ್ನು ಕಳೆದುಕೊಂಡಿದ್ದಾರೆ. ಇವರಿಗೂ ಗಂಭೀರ ಸ್ವರೂಪದ ಗಾಯಗಳಾಗಿ ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನರಸಿಂಹಪ್ಪ ಹಾಗೂ ವೆಂಕಟೇಶ್ ಸುತ್ತಮುತ್ತಲ ಸಂತೆಗಳಲ್ಲಿ ಒಂದು ವರ್ಷದಿಂದ ಕುರಿಗಳ ವ್ಯಾಪಾರ ಮಾಡುತ್ತಿದ್ದು ತಮ್ಮ ದ್ವಿಚಕ್ರವಾಹನದಲ್ಲಿ ಗ್ರಾಮಕ್ಕೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಬಟ್ಲಹಳ್ಳಿ ಕಡೆಯಿಂದ ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಅಪರಿಚಿತ ಬೊಲೋರೋ ವಾಹನವೊಂದು ದ್ವಿಚಕ್ರವಾಹನಕ್ಕೆ ಅಪಘಾತ ಮಾಡಿ ಪರಾರಿಯಾಗಿದ್ದಾನೆ.ಸ್ಥಳಕ್ಕೆ ಬಟ್ಲಹಳ್ಳಿ ಪೊಲೀಸರು ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಗಾಯಾಳು ನರಸಿಂಹಪ್ಪ ನೀಡಿದ ಹೇಳಿಕೆಯ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡು ಅಪಘಾತ ನಡೆಸಿದ ಬೊಲೋರೋ ವಾಹನಕ್ಕೆ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.
