ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಸಂಪತ್ತು, ಕೀರ್ತಿ ಹಾಗೂ ಜ್ಞಾನ ಈ ಮೂರನ್ನೂ ನೀಡಬಲ್ಲ ಶಕ್ತಿ ಪುಸ್ತಕಗಳು ಹೊಂದಿವೆ
ಕನಕಗಿರಿ: ಪುಸ್ತಕ ನಮ್ಮಲ್ಲಿನ ಲವಲವಿಕೆ ಜತೆಗೆ ಜೀವನೋತ್ಸಾಹ ತುಂಬುವ ಕೆಲಸ ಮಾಡುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸಂಚಾಲಕ ಹಾಗೂ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ಹೇಳಿದರು. ಪಟ್ಟಣದ ಶ್ರೀಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅಧ್ಯಯನ ವಿಭಾಗ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ನನ್ನ ಮೆಚ್ಚಿನ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಸಂಪತ್ತು, ಕೀರ್ತಿ ಹಾಗೂ ಜ್ಞಾನ ಈ ಮೂರನ್ನೂ ನೀಡಬಲ್ಲ ಶಕ್ತಿ ಪುಸ್ತಕಗಳು ಹೊಂದಿವೆ. ಹಾಗಾಗಿ ಮಕ್ಕಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಪ್ರಸ್ತುತ ಕಾರ್ಯಕ್ರಮ ಪುಸ್ತಕ ಪ್ರಾಧಿಕಾರ ಹಮ್ಮಿಕೊಂಡಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಜರಂಗಬಲಿ ಮಾತನಾಡಿ, ಸೋಲನ್ನು ಸವಾಲಾಗಿ ಸ್ವೀಕರಿಸುವ ಮನಸ್ಥಿತಿ ನಮ್ಮನ್ನು ಯಶಸ್ವಿ ವ್ಯಕ್ತಿಯನ್ನಾಗಿಸುತ್ತದೆ. ವಿದ್ಯಾರ್ಥಿಗಳಾದವರಿಗೆ ಇಂದಿನ ಓದೇ ಮುಂದಿನ ಭವಿಷ್ಯ.ಜೀವ ಮತ್ತು ಜೀವನ ಎರಡೂ ಇರುವ ಪುಸ್ತಕಗಳ ಬಗ್ಗೆ ಎಲ್ಲರೂ ಪ್ರೀತಿ ಹಾಗೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಾಹಿತಿ ವಿರುಪಣ್ಣ ಢಣಾಪುರ, ತಾವರಗೇರಾ ಸಪ್ರದ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ವೆಂಕಟೇಶ, ಪ್ರಾಧ್ಯಾಪಕ ಲಲಿತಾ ಕಿನ್ನಾಳ್, ನಿಂಗಪ್ಪ ಕಂಬಳಿ, ಸರ್ವಮಂಗಳಮ್ಮ, ಅಮರೇಶ್ ವೆಂಕಟಾಪುರ, ರಕ್ಷಿತ್ ಎ, ನಫೀಸಾಬಾನು, ಸಂಗಮೇಶ್, ರಾಜ್ಯಶಾಸ್ತ್ರ ಉಪನ್ಯಾಸಕರು ಹಾಗೂ ಅತಿಥಿ ಉಪನ್ಯಾಸಕರ ಸಂಘದ ತಾಲೂಕಾಧ್ಯಕ್ಷ ಡಾ.ಗೋಪಾಲರೆಡ್ಡಿ ಮಾದಿನಾಳ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.