ಕನ್ನಡಪ್ರಭ ವಾರ್ತೆ ಬೇತಮಂಗಲಹಲವು ದಶಕದಿಂದ ಸಮರ್ಪಕ ವಿದ್ಯುತ್ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದ ಈ ಭಾಗದ ರೈತರು ಹಾಗೂ ಸಾರ್ವಜನಿಕರಿಗೆ ಶಾಸಕಿ ಎಂ. ರೂಪಕಲಾ ಸಿಹಿ ಸುದ್ದಿ ನೀಡಿದ್ದಾರೆ. ಶ್ರೀನಿವಾಸಸಂದ್ರ ಗ್ರಾಪಂ ವ್ಯಾಪ್ತಿಯ ಮೇಲುಪಲ್ಲಿಯಲ್ಲಿ ಸುಮಾರು ೧೨ ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹೊಸ ವಿದ್ಯುತ್ ಉಪ ವಿಭಾಗ ಕೇಂದ್ರದ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.ಶಾಸಕಿ ರೂಪಕಲಾ ಮಾತನಾಡಿ, ಆಂಧ್ರ ಗಡಿಗೆ ಹೊಂದಿಕೊಂಡಿರುವ ಈ ಭಾಗದಲ್ಲಿ ಪೂರ್ವರ ಕಾಲದಿಂದಲೂ ಸಮರ್ಪಕ ವೋಲ್ಟೇಜ್ ಸಮಸ್ಯೆ ಇತ್ತು. ಇದರಿಂದ ಬೋರ್ವೆಲ್ಗಳಲ್ಲಿ ನೀರು ಎತ್ತಲಾಗದೆ ಬೆಳೆಗಳು ಒಣಗುತ್ತಿರುವುದನ್ನು ಕಂಡು ಮನಸ್ಸಿಗೆ ನೋವಾಗಿತ್ತು. ಈ ಸಮಸ್ಯೆಯನ್ನು ತಕ್ಷಣ ಸಚಿವ ಜಾರ್ಜ್ ಅವರ ಗಮನಕ್ಕೆ ತಂದಾಗ, ಕೆಪಿಟಿಸಿಎಲ್ ಮೂಲಕ ಅನುದಾನ ಬಿಡುಗಡೆ ಮಾಡಿಸಿದರು ಎಂದು ತಿಳಿಸಿದರು.ಸುಮಾರು ೧.೨೦ ಎಕರೆ ಪ್ರದೇಶದಲ್ಲಿ ೧೨ ಲಕ್ಷ ರು. ವೆಚ್ಚದ ಕಾಮಗಾರಿಯಾಗಿದೆ, ಈ ಕೇಂದ್ರದಿಂದ ಸುಮಾರು ೪೦ಕ್ಕೂ ಅಧಿಕ ಗ್ರಾಮಗಳ ರೈತರಿಗೆ ನೇರ ಪ್ರಯೋಜನವಾಗಲಿದೆ. ಈ ಹಿಂದೆ ೧೦ ಕಿ.ಮೀ ದೂರದ ಕ್ಯಾಸಂಬಳ್ಳಿಯಿಂದ ವಿದ್ಯುತ್ ಪಡೆಯಬೇಕಿತ್ತು. ಈಗ ಸ್ಥಳೀಯವಾಗಿಯೇ ಕೇಂದ್ರ ಸ್ಥಾಪನೆಯಾಗುತ್ತಿದೆ. ಈಗಾಗಲೇ ಕಾಂಪೌಂಡ್ ಗೋಡೆ ಪೂರ್ಣಗೊಂಡಿದ್ದು, ಮುಂದಿನ ೬ ತಿಂಗಳೊಳಗೆ ಸಬ್ ಸ್ಟೇಷನ್ ಲೋಕಾರ್ಪಣೆಗೊಳ್ಳಲಿದೆ. ದೂರದ ಕೇಂದ್ರಗಳಿಂದ ವಿದ್ಯುತ್ ಪಡೆಯುವಾಗ ಉಂಟಾಗುತ್ತಿದ್ದ ವೋಲ್ಟೇಜ್ ಏರಿಳಿತಗಳು ಇನ್ನು ಮುಂದೆ ಇರುವುದಿಲ್ಲ. ತಾಂತ್ರಿಕ ದೋಷಗಳಿಂದ ಪದೇ ಪದೇ ಉಂಟಾಗುತ್ತಿದ್ದ ವಿದ್ಯುತ್ ಕಡಿತಕ್ಕೆ ಬ್ರೇಕ್ ಬೀಳಲಿದೆ ಎಂದು ಅವರು ಭರವಸೆ ನೀಡಿದರು.
ಕೆಜಿಎಫ್ ಭಾಗದಲ್ಲಿ ಬೆಳೆಯುತ್ತಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಬೇಕಾದ ವಿದ್ಯುತ್ ಒತ್ತಡವನ್ನು ತಡೆದುಕೊಳ್ಳಲು ಈ ಕೇಂದ್ರ ಸಹಕಾರಿ, ಇದು ಪರೋಕ್ಷವಾಗಿ ಹೊಸ ಉದ್ಯೋಗ ಸೃಷ್ಟಿಗೆ ನಾಂದಿಯಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.ಉಪ ವಿದ್ಯುತ್ ಕೇಂದ್ರದಿಂದ ಸಂಪರ್ಕ ಕಲ್ಪಿಸುವ ವಿದ್ಯುತ್ ಟವರ್ ನಿರ್ಮಾಣ ಕಾಮಗಾರಿ ಕೈಗೊಳ್ಳಲು ರೈತರ ಜಮೀನುಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದ್ದು ಸಂಪೂರ್ಣ ಕಾಮಗಾರಿ ಆದಷ್ಟು ಶೀಘ್ರವಾಗಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ವಿದ್ಯುತ್ ಇಲಾಖೆಯ ಇಇ ಸತೀಶ್, ಲತಾ, ಎಇ ಮುನಿಯಪ್ಪ, ಗುತ್ತಿಗೆದಾರ ಶ್ರೀನಿವಾಸ್, ಮೋಸಸ್, ಪಿಡಿಒ ಏಜಾಜ್ ಪಾಷಾ, ಕಾರ್ಯದರ್ಶಿ ವಿಜಯ್ ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷೆ ಗೀತಾಕಲಾ ವೆಂಕಟೇಶ್, ಉಪಾಧ್ಯಕ್ಷೆ ಭಾರತಿ ಷಣ್ಮುಗಂ, ಎಸ್.ವಿ.ಜಿ ಸುಬ್ರಮಣಿ, ಗ್ರಾಪಂ ಮಾಜಿ ಸದಸ್ಯರಾದ ವಸಂತ್ ರೆಡ್ಡಿ, ಮಾಧವಿ, ಸ್ಕೂಲ್ ವೆಂಕಟೇಶಪ್ಪ, ಎನ್ಟಿಆರ್ ಶ್ರೀನಿವಾಸ್ ರೆಡ್ಡಿ, ರಾಮಪ್ಪ, ಮಣಿ, ಭಾಸ್ಕರ್, ದೇವರಾಜ್ ರೆಡ್ಡಿ , ವಕೀಲ ಪದ್ಮನಾಭ ರೆಡ್ಡಿ ಇದ್ದರು.--
೧೩ಬಿಟಿಎಂ-೩ ಬೇತಮಂಗಲ ಸಮೀಪದ ಶ್ರೀನಿವಾಸಸಂದ್ರ ಗ್ರಾಪಂ ವ್ಯಾಪ್ತಿಯ ಮೇಲುಪಲ್ಲಿಯಲ್ಲಿ ಶಾಸಕಿ ಎಂ. ರೂಪಕಲಾ ಅವರು ವಿದ್ಯುತ್ ಉಪ ವಿಭಾಗ ಕೇಂದ್ರ ಕಾಮಗಾರಿಗೆ ಚಾಲನೆ ನೀಡಿದರು.