ಬಿಡದಿಯ ಬಾಷ್ ಇಂಟರ್ ನ್ಯಾಷನಲ್ ಕಂಪನಿಯ ಸಿಎಸ್ಆರ್ ಅನುದಾನದಲ್ಲಿ ಬಾಷ್ ಕಂಪನಿಯಿಂದ ಸರ್ಕಾರಿ ಶಾಲೆಗೆ 1.68 ಕೋಟಿ ಅನುದಾನ
ಕನ್ನಡಪ್ರಭ ವಾರ್ತೆ, ತುಮಕೂರು
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯು ನೂರು ವರ್ಷ ಪೂರೈಸಿದ್ದು ಶತಮಾನೋತ್ಸವ ಕಾರ್ಯಕ್ರಮಕ್ಕೆ ಬಿಡದಿಯ ಬಾಷ್ ಇಂಟರ್ ನ್ಯಾಷನಲ್ ಕಂಪನಿಯ ಸಿಎಸ್ಆರ್ ಅನುದಾನದಲ್ಲಿ ಸುಸಜ್ಜಿತ ಶಾಲಾ ಕೊಠಡಿಗಳನ್ನು ಹಾಗೂ ಶೌಚಾಲಯ, ರಕ್ಷಣಾ ಗೋಡೆ, ಕಂಪ್ಯೂಟರ್ ಲ್ಯಾಬ್ ಗ್ರಂಥಾಲಯ ನಿರ್ಮಾಣ ಮಾಡಿಕೊಡುವುದಾಗಿ ಹಾಗೂ ಶತಮಾನೋತ್ಸವ ಕಾರ್ಯಕ್ರಮವನ್ನು ಸಾರ್ಥಕ ದಿನವನ್ನಾಗಿಸುವೆ ಎಂದು ಶಾಸಕ ತುಮಕೂರು ಗ್ರಾಮಾಂತರ ಬಿಜೆಪಿ ಬಿ ಸುರೇಶ್ ಗೌಡ ಹೇಳಿದರು.ಹೆಬ್ಬೂರು ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಶಾಲಾ ಕೊಠಡಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು 1.68 ಕೋಟಿ ರೂಪಾಯಿ ಬಿಡುಗಡೆ ಮಾಡಿರುವ ಬಾಷ್ ಕಂಪನಿಯ ಸಿಎಸ್ಆರ್ ಮುಖ್ಯಸ್ಥ ಸಕಿನ ಬೇಕರ್, ಸುದರ್ಶನ್ ಮತ್ತು ಪುಂಡಲೀಕ ಕಾಮತ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ನಾಗವಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ಮಾಡಿದ ಹಣ ವಾಪಸ್ ಹೋಗಿತ್ತು. ಮತ್ತೆ ಆ ಬಗ್ಗೆ ಸದನದಲ್ಲಿ ಮಾತನಾಡಿ ಹೋರಾಟ ಮಾಡಿ ನಾಗವಲ್ಲಿ ಶಾಲೆಗೆ 1.48 ಕೋಟಿ ಬಿಡುಗಡೆ ಮಾಡಿಸಿದೆ. ಸರ್ಕಾರದಲ್ಲಿ ಅಷ್ಟು ಕಷ್ಟ ಇದೆ ಎಂದು ಸುರೇಶಗೌಡ ಹೇಳಿದರು.ಬಾಷ್ ಕಂಪನಿಯ ಸಿಎಸ್ಆರ್ ಮುಖ್ಯಸ್ಥ ಸಕಿನ ಬೇಕ ರ್ ಮಾತನಾಡಿ ಸರ್ಕಾರಿ ಶಾಲೆಗಳ ನಿರ್ಮಾಣ ನಮ್ಮ ಸಂಸ್ಥೆಯ ಧ್ಯೇಯ ಮತ್ತು ಉದ್ದೇಶಗಳಲ್ಲಿ ಒಂದಾಗಿದೆ. ಈ ಹಿನ್ನೆಲೆಯಲ್ಲಿ ಹೆಬ್ಬೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಕೊಠಡಿಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ನೀಡುವುದಾಗಿ ಅವರು ಆಶ್ವಾಸನೆ ನೀಡಿದರು.
ಕಾರ್ಯಕ್ರಮದಲ್ಲಿ ಬಾಬು, ಶಿವಕುಮಾರ್ ಚೈತ್ರ, ಪ್ರದೀಪ್, ಸಿದ್ದೇಗೌಡ, ಚಿಕ್ಕಸ್ವಾಮಿ, ವೆಂಕಟೇಶ್, ಜಾವಿರ್, ಅನುಗೌಡ್ರು, ಕೇಶವಮೂರ್ತಿ, ಮಂಜುಳಾ, ತೇಜಸ್, ಅಕ್ಕಮ್ಮ, ಮಾಸ್ತಿಗೌಡ್ರು, ಮೋಹನಕುಮಾರ್, ಗೂಳೂರು ಶಿವಕುಮಾರ್, ಡಾ. ಶಿವಕುಮಾರ್ ,ನರಸಿಂಹ ಮೂರ್ತಿ, ರಾಜಶೇಖರ್, ಶಂಕರಣ್ಣ, ಪ್ರಭಾಕರ್, ತಾರಾದೇವಿ ಸೇರಿದಂತೆ ಪೋಷಕರು ಮಕ್ಕಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.