ಸಾರಾಂಶ
ತೀರ್ಥಹಳ್ಳಿ ಪಟ್ಟಣದ ಬಂಟರ ಭವನದಲ್ಲಿ ಶನಿವಾರ ಸಮಾರಂಭದಲ್ಲಿ ನೆಂಪೆ ದೇವರಾಜ್ ಬರೆದ ಕಾಳಿಂಗ ಕಥನ ಪುಸ್ತಕವನ್ನು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಎಲ್.ಎನ್. ಮುಕುಂದರಾಜ್ ಲೋಕಾರ್ಪಣೆಗೊಳಿಸಿದರು.
ಕನ್ನಡಪ್ರಭವಾರ್ತೆ ತೀರ್ಥಹಳ್ಳಿ
12ನೇ ಶತಮಾನದಲ್ಲಿ ಬಸವಣ್ಣನವರು ಸಾರಿದ ಲಿಂಗಾಯಿತ ಧರ್ಮ ಹಾಗೂ ಯುಗದ ಕವಿ ಕುವೆಂಪುರವರ ವಿಶ್ವಮಾನವ ಧರ್ಮ ಈ ಎರಡು ಧರ್ಮಗಳು ಜನ ಹೇಗೆ ಬದುಕಬೇಕು ಎಂಬುದನ್ನು ತೋರಿಸಿವೆ. ನನ್ನ ದೃಷ್ಟಿಯಲ್ಲಿ ಬಸವಣ್ಣ ಮತ್ತು ಕುವೆಂಪು ಪ್ರವಾದಿಗಳಾಗಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಎಲ್.ಎನ್.ಮುಕುಂದರಾಜ್ ಹೇಳಿದರು.ಪಟ್ಟಣದ ಬಂಟರ ಭವನದಲ್ಲಿ ಶನಿವಾರ ಸಂಜೆ ನಡೆದ ಸಮಾರಂಭದಲ್ಲಿ ಲೇಖಕ ನೆಂಪೆ ದೇವರಾಜ್ ಬರೆದ ಕಾಳಿಂಗ ಕಥನ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ, ಮಾರ್ಗಸೂಚಿಯಾಗಿವೆ ಮಾನವೀಯ ನೆಲೆಯಲ್ಲಿ ಮನುಷ್ಯ ಹೇಗೆ ಬದುಕಬೇಕು ಎಂಬುದಕ್ಕೆ ಬಸವಣ್ಣ ಮತ್ತು ಕುವೆಂಪುರವರ ಆಶಯಗಳು ಇಂದಿಗೂ ಪ್ರಸ್ಥುತವಾಗಿವೆ. ಇಂದಿನ ಜಾತಿ ಧರ್ಮ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಈ ದಾರ್ಶನಿಕರ ಆಶಯಗಳಲ್ಲಿ ಪರಿಹಾರವಿದೆ ಎಂದು ಹೇಳಿದರು.
ಮಲೆನಾಡಿನಿಂದ ಬಂದ ಕುವೆಂಪು, ಅನಂತಮೂರ್ತಿ, ತೇಜಸ್ವಿ ಸೇರಿದಂತೆ ಈ ಭಾಗದ ಲೇಖಕರು ತಮ್ಮ ಅನುಭವದ ಹಿನ್ನೆಲೆಯಲ್ಲಿ ಪ್ರಕೃತಿ ಪರಿಸರದ ಸೊಬಗಿ ನೊಂದಿಗೆ ಮಲೆನಾಡಿನ ಜನಜೀವನ ಸಂಸ್ಕೃತಿಯನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಅಂತೆಯೇ ಲೇಖಕ ನೆಂಪೆ ದೇವರಾಜ್ ಕಾಳಿಂಗ ಕಥನದಲ್ಲಿ ಮಲೆನಾಡಿನ ಬದುಕು, ಪಶುಪಕ್ಷಿಗಳು, ಕುಶಲಕರ್ಮಿಗಳು, ಭಕ್ಷ್ಯಭೋಜನ ಮಂಕಿಪಾರ್ಕ್ ಮುಂತಾದ ವಿಚಾರಗಳು ಓದುಗರ ಮನ ಮುಟ್ಟುವಂತಿವೆ ಎಂದರು.ಕೃತಿಯ ಕುರಿತು ಪ್ರಾಧ್ಯಾಪಕ ಡಾ.ಜಯಶಂಕರ್ ಹಲಗೂರ್ ಮಾತನಾಡಿದರು. ಕೃತಿಯ ಲೇಖಕ ನೆಂಪೆ ದೇವರಾಜ್, ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ಸಾಹಿತಿ ಡಾ. ಕಲೀಂ ಉಲ್ಲಾ, ಕಡಿದಾಳು ದಯಾನಂದ್, ಚಿತ್ರ ನಿರ್ದೆಶಕ ಕೋಡ್ಲು ರಾಮಕೃಷ್ಣ,ಲೇಖಕ ಕರ್ಕಿ ಶಿವಾನಂದ್, ಮಮತಾ ಸಾಯಿನಾಥ್ ವೇದಿಕೆಯಲ್ಲಿದ್ದರು. ತಾಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.