ಸಾರಾಂಶ
ಹಾವೇರಿ ನಗರದಲ್ಲಿ ಗುರುವಾರ ಬೆಳಗಿನ ಜಾವ ಸುರಿದ ಧಾರಾಕಾರ ಮಳೆಗೆ ರಸ್ತೆಗಳೆಲ್ಲ ಹೊಳೆಯಂತೆ ಹರಿದಿವೆ. ಈ ವೇಳೆ ರಸ್ತೆ ಕಾಣದೇ ಚರಂಡಿಗೆ ಬಿದ್ದು ಬಾಲಕನೋರ್ವ ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ಸಂಭವಿಸಿದೆ.
ಹಾವೇರಿ: ನಗರದಲ್ಲಿ ಗುರುವಾರ ಬೆಳಗಿನ ಜಾವ ಸುರಿದ ಧಾರಾಕಾರ ಮಳೆಗೆ ರಸ್ತೆಗಳೆಲ್ಲ ಹೊಳೆಯಂತೆ ಹರಿದಿವೆ. ಈ ವೇಳೆ ರಸ್ತೆ ಕಾಣದೇ ಚರಂಡಿಗೆ ಬಿದ್ದು ಬಾಲಕನೋರ್ವ ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ಸಂಭವಿಸಿದೆ.
ಇಲ್ಲಿನ ಶಿವಾಜಿ ನಗರದ ನಿವಾಸಿ ನಿವೇದನ್ ಬಸವರಾಜ ಗುಡಿಗೇರ (೧೨) ಮೃತಪಟ್ಟಿರುವ ದುರ್ದೈವಿ. ಬೆಳಗ್ಗೆ ತನ್ನ ಸಹಪಾಠಿಗಳೊಂದಿಗೆ ಶಿವಾಜಿ ನಗರದ ಬಳಿ ಹಳೆ ಪಿಬಿ ರಸ್ತೆಯ ಪಕ್ಕದಲ್ಲಿ ಆಟ ಆಡುತ್ತಿದ್ದರು. ಈ ವೇಳೆ ತೆರೆದ ಕಾಲುವೆ ದಾಟಲು ಮುಂದಾದಾಗ ಬಾಲಕ ಕಾಲುಜಾರಿ ಚರಂಡಿಯಲ್ಲಿ ಬಿದ್ದಿದ್ದಾನೆ. ವಿಷಯ ತಿಳಿದ ತಕ್ಷಣ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಬಾಲಕನನ್ನು ಹುಡುಕಲು ಎರಡು ತಾಸು ಕಾರ್ಯಾಚರಣೆ ನಡೆಸಿದರು. ರಸ್ತೆಯಲ್ಲಿ ನೀರು ತುಂಬಿ ಚರಂಡಿಯಲ್ಲಿ ರಭಸವಾಗಿ ನೀರು ಹರಿಯುತ್ತಿದ್ದರಿಂದ ತಕ್ಷಣ ನೀರುಪಾಲಾದ ಬಾಲಕ ಪತ್ತೆಯಾಗಲಿಲ್ಲ. ಘಟನಾ ಸ್ಥಳದಿಂದ ಸುಮಾರು ೩೦ ಮೀಟರ್ ದೂರದಲ್ಲಿ ಚರಂಡಿಯಲ್ಲಿ ಬಾಲಕ ಪತ್ತೆಯಾಗಿದ್ದಾನೆ. ತಕ್ಷಣ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಿದರೂ ಆ ವೇಳೆಗಾಗಲೇ ಬಾಲಕ ಮೃತಪಟ್ಟಿದ್ದ.ಇಬ್ಬರು ಅಧಿಕಾರಿಗಳ ಅಮಾನತು: ವಿಷಯ ತಿಳಿದ ತಕ್ಷಣ ಕುಟುಂಬಸ್ಥರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಚರಂಡಿ ಮೇಲೆ ಕಲ್ಲು ಮುಚ್ಚದೇ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕ ರಮೇಶ ಮುಂಜೋಜಿ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಆದೇಶಿಸಿದ್ದಾರೆ.