ಸಾರಾಂಶ
ರಾಣಿಬೆನ್ನೂರು:ಶಂಕಿತ ಡೆಂಘೀ ಜ್ವರಕ್ಕೆ ಬಾಲಕನೊಬ್ಬ ಮೃತಪಟ್ಟ ಘಟನೆ ಸೋಮವಾರ ತಾಲೂಕಿನ ಚಳಗೇರಿ ಗ್ರಾಮದಲ್ಲಿ ಸಂಭವಿಸಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕ ಉಂಟು ಮಾಡಿದೆ.ಗ್ರಾಮದ ಧನು ಅಡಿವೆಪ್ಪ ಹೊನ್ನಕ್ಕಳವರ (14) ಮೃತ ಬಾಲಕ.ಕಳೆದ ಒಂದು ವಾರದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮರಣ ಹೊಂದಿದ್ದಾನೆ. ಘಟನೆ ಹಿನ್ನೆಲೆಯಲ್ಲಿ ಗ್ರಾಮಕ್ಕೆ ತಾಲೂಕು ಆರೋಗ್ಯ ಅಧಿಕಾರಿ ಪ್ರಭಾರ ಆರೋಗ್ಯಾಧಿಕಾರಿ ಡಾ. ವಿನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕರು ತಾವು ವಾಸಿಸುವ ಪ್ರದೇಶ ಸುತ್ತಮುತ್ತಲೂ ನೀರು ನಿಲ್ಲದಂತೆ ಕಾಳಜಿ ವಹಿಸಬೇಕು. ಸೊಳ್ಳೆಗಳು ಉತ್ಪಾದನೆಗೆ ಅವಕಾಶವಾಗದಂತೆ ನೋಡಿಕೊಳ್ಳಬೇಕು ಎಂದು ಗ್ರಾಮಸ್ಥರಿಗೆ ಸಲಹೆ ನೀಡಿದರು. ಗ್ರಾಮಸ್ಥರಿಗೆ ತಲೆ ಸುತ್ತುವಿಕೆ, ಕೆಮ್ಮು, ಜ್ವರ ಹಾಗೂ ವಾಂತಿ-ಭೇದಿ ಲಕ್ಷಣಗಳು ಕಂಡುಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚಿಸಿದರು.
ನಂಜುರೋಗದಿಂದ ಅರಳೇಶ್ವರ ವ್ಯಕ್ತಿ ಸಾವುಹಾವೇರಿ: ಖಾಸಗಿ ವಾಹಿನಿಯೊಂದರಲ್ಲಿ ಸೋಮವಾರ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅರಳೇಶ್ವರ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಇಲಿ ಜ್ವರದಿಂದ ಮೃತ ಪಟ್ಟಿದಾನೆಂದು ಪ್ರಸಾರವಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮೃತ ವ್ಯಕ್ತಿಯ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದು, ತೀವ್ರತರವಾದ ನಂಜುರೋಗ (ಸೆಪ್ಟೀಸಿಮಿಯಾ)ದಿಂದ ಮರಣ ಹೊಂದಿರುವುದಾಗಿ ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.ಜಿಲ್ಲಾ ಸರ್ವೇಕ್ಷಾಣಾಧಿಕಾರಿಗಳು ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ಈ ಮೃತ ಪಟ್ಟಿರುವ ವ್ಯಕ್ತಿಯ ಮನೆಗೆ ಭೇಟಿ ನೀಡಿ, ಮರಣ ಸಂಭವಿಸಿರುವ ಕುರಿತಂತೆ ಮಾಹಿತಿಯನ್ನು ಪಡೆದು ಸಲ್ಲಿಸಿರುವ ವರದಿ ಪ್ರಕಾರ, ಮರಣ ಹೊಂದಿದ ವ್ಯಕ್ತಿಯು ಸುಮಾರು 2 ವರ್ಷಗಳಿಂದ ಮಧುಮೇಹದಿಂದ ಬಳಲುತಿದ್ದು, ಮದ್ಯಪಾನ ಸೇವನೆ ಮಾಡುತ್ತಿದ್ದರಿಂದ ತೀವ್ರತರವಾದ ಕಿಡ್ನಿ ಕಾಯಿಲೆ, ಲಿವರ್ ಸಮಸ್ಯೆ, ಅನ್ನನಾಳದಲ್ಲಿ ರಕ್ತ ಸೋರುವಿಕೆ ಮತ್ತು ಬಲಗಾಲಿನ ಗ್ಯಾಂಗ್ರೀನ್ ಹುಣ್ಣಿನಿಂದ ಬಳಲುತ್ತಿದ್ದ ಕಾರಣ ಜೂ. 28ರಂದು ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾಗ, ಆಸ್ಪತ್ರೆಯ ವೈದ್ಯರು ಈ ವ್ಯಕ್ತಿಗೆ ತೀವ್ರತರವಾದ ಕಾಯಿಲೆ ಇರುವುದರಿಂದ ರೋಗಿ ಉಳಿಯುವ ಸಾಧ್ಯತೆ ಕಡಿಮೆ ಎಂದು ಸಂಬಂಧಿಕರಿಗೆ ತಿಳಿಸಿದ ಹಿನ್ನೆಲೆಯಲ್ಲಿ, ಮೃತ ವ್ಯಕ್ತಿಯ ಸಂಬಂಧಿಕರು ಮನೆಗೆ ಕರೆದುಕೊಂಡು ಬಂದಿರುತ್ತಾರೆ.
ಜು. 6ರಂದು ತೀವ್ರತರವಾದ ಸೆಪ್ಟೀಸಿಮಿಯಾ (ನಂಜುರೋಗ) ದಿಂದ ಮನೆಯಲ್ಲಿ ಮರಣ ಹೊಂದಿರುತ್ತಾರೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿರುತ್ತದೆ. ಈ ಮೃತ ವ್ಯಕ್ತಿಯು ಚಿಕಿತ್ಸೆ ಪಡೆದಿರುವ ಎಲ್ಲ ದಾಖಲಾತಿಗಳನ್ನು ಆಸ್ಪತ್ರೆಯಿಂದ ಪಡೆದುಕೊಂಡು ಡೆತ್ಅಡಿಟ್ ಮಾಡಿಸಿ ಮರಣದ ಕಾರಣವನ್ನು ನಿರ್ಧರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.