ಕುಂದಗೋಳ:

ಅಪರಿಚಿತರು ಚುಚ್ಚುಮದ್ದು ನೀಡಿದ್ದರಿಂದ ಅಸ್ವಸ್ಥನಾಗಿದ್ದ ಬಾಲಕನನ್ನು ಹುಬ್ಬಳ್ಳಿ ಕೆಎಂಸಿಆರ್‌ಐನಲ್ಲಿ ದಾಖಲಿಸಲಾಗಿದ್ದು, ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ. ಈ ನಡುವೆ ಪಾಲಕರು ಈ ವರೆಗೂ ದೂರು ನೀಡಿಲ್ಲ. ಆದರೆ, ಪೊಲೀಸರೇ ಸುಮೋಟೋ ತನಿಖೆ ಚುರುಕುಗೊಳಿಸಿದ್ದಾರೆ.

ಏನಾಗಿತ್ತು?

ತಾಲೂಕಿನ ನೆಲಗುಡ್ಡ ಗ್ರಾಮದಲ್ಲಿ ಮನೆಯಲ್ಲಿ ಒಬ್ಬನೇ ಇದ್ದ ಬಾಲಕನಿಗೆ ಅಪರಿಚಿತರು ಏಕಾಏಕಿ ಒಳಗೆ ನುಗ್ಗಿ ಯಾವುದೋ ಇಂಜೆಕ್ಷನ್ ಚುಚ್ಚಿ ಅಲ್ಲಿಂದ ಪರಾರಿಯಾಗಿದ್ದಾರೆ. ಇದರಿಂದ ಆತ ಕೆಲಕಾಲ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದನಂತೆ. ಆ ಬಳಿಕ ಪಾಲಕರು ಆತನನ್ನು ತಾಲೂಕಾಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಹುಬ್ಬಳ್ಳಿ ಕೆಎಂಸಿಆರ್‌ಐಗೆ ಸ್ಥಳಾಂತರಿಸಲಾಗಿತ್ತು. ಬಾಲಕನ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಂಡಿದ್ದಾನೆ. ಆತನ ರಕ್ತದ ಪರೀಕ್ಷೆಗೆ ಕಳುಹಿಸಲಾಗಿದೆ. ಆದರೆ, ಯಾವ ಇಂಜೆಕ್ಷನ್‌ ಚುಚ್ಚಿದ್ದಾರೆ ಎಂಬುದು ತಿಳಿದು ಬಂದಿಲ್ಲವೆಂದು ಕೆಎಂಸಿಆರ್‌ಐನ ನಿರ್ದೇಶಕ ಡಾ. ಈಶ್ವರ ಹೊಸಮನಿ ತಿಳಿಸಿದ್ದಾರೆ.

ದೂರು ಕೊಟ್ಟಿಲ್ಲ:


ಬಾಲಕನ ಪಾಲಕರು ಈ ಕುರಿತು ದೂರು ನೀಡಿಲ್ಲ. ಆದರೆ, ದೂರು ನೀಡುವಂತೆ ಪೊಲೀಸರು ತಿಳಿಸಿದ್ದಾರೆ. ಜತೆಗೆ ದೂರು ನೀಡದೇ ಹೋದರೆ ಪೊಲೀಸರೇ ಸುಮೋಟೋ ದೂರು ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಸುತ್ತಮುತ್ತಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದ್ದು ಈ ವರೆಗೂ ಆರೋಪಿ ಪತ್ತೆಯಾಗಿಲ್ಲ. ದೂರು ಕೊಟ್ಟರೆ ತನಿಖೆಗೆ ಇನ್ನಷ್ಟು ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗುಂಜನ್‌ ಆರ್ಯ ತಿಳಿಸಿದ್ದಾರೆ.

ಈ ನಡುವೆ ಬಾಲಕನ ಆರೋಗ್ಯ ಸ್ಥಿರವಾಗಿದೆ. ಆದರೆ, ಚುಚ್ಚುಮದ್ದು ನೀಡಿರುವ ಗುರುತು ಕಂಡು ಬಂದಿಲ್ಲ. ಆದರೂ ಪರಿಶೀಲಿಸಲಾಗುತ್ತಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯಾಧಿಕಾರಿ ಡಾ. ಎಸ್‌.ಎಂ. ಹೊನಕೇರಿ ತಿಳಿಸಿದ್ದಾರೆ.

ಆತಂಕ:

ಈ ನಡುವೆ ಗ್ರಾಮದಲ್ಲಿ ಮನೆಯಲ್ಲಿ ಒಬ್ಬನೇ ಇದ್ದ ಬಾಲಕನಿಗೆ ಚುಚ್ಚು ಮದ್ದು ನೀಡಿ ಪರಾರಿಯಾಗಿರುವ ಪ್ರಕರಣ ಜಿಲ್ಲೆಯಲ್ಲಿ ಆತಂಕವನ್ನುಂಟು ಮಾಡಿದೆ. ಹೀಗೆ ಬಂದವರು ಯಾರು? ಯಾಕೆ ಬಾಲಕನಿಗೆ ಚುಚ್ಚುಮದ್ದು ನೀಡಿದ್ದಾರೆ. ಏನಿದರ ಉದ್ದೇಶ? ಯಾವ ಬಗೆಯ ಚುಚ್ಚುಮದ್ದು ನೀಡಿದ್ದಾರೆ ಎಂಬುದೆಲ್ಲವೂ ಪೊಲೀಸ್‌ ತನಿಖೆ ಬಳಿಕವೇ ಹೊರಬರಲಿದೆ.