ಕುಡಿಯುವ ನೀರಿನ ವಿಷಯದಲ್ಲಿ ಸರ್ಕಾರ ರಾಜಕೀಯ ನಿಲ್ಲಿಸಬೇಕು. ನಮ್ಮ ಹಕ್ಕಿನ ನೀರಿಗಾಗಿ ರೈತರೆಲ್ಲರೂ ಒಂದಾಗಿ, ಮಹದಾಯಿ ಯೋಜನೆ ಜಾರಿ ಆಗುವ ವರೆಗೂ ಹೋರಾಟ ನಿಲ್ಲಿಸಬಾರದು.

ನವಲಗುಂದ:

ಕುಡಿಯುವ ನೀರಿನ ವಿಷಯದಲ್ಲಿ ಸರ್ಕಾರ ರಾಜಕೀಯ ನಿಲ್ಲಿಸಬೇಕು. ನಮ್ಮ ಹಕ್ಕಿನ ನೀರಿಗಾಗಿ ರೈತರೆಲ್ಲರೂ ಒಂದಾಗಿ, ಮಹದಾಯಿ ಯೋಜನೆ ಜಾರಿ ಆಗುವ ವರೆಗೂ ಹೋರಾಟ ನಿಲ್ಲಿಸಬಾರದು. ಈ ವಿಷಯವಾಗಿ ಮುಂದಿನ ವಿಧಾನಸಭೆ ಚುನಾವಣೆಯನ್ನೂ ಬಹಿಷ್ಕರಿಸಬೇಕು ಎಂದು ಪಂಚಗ್ರಹ ಹಿರೇಮಠದ ನೂತನ ಪೀಠಾಧಿಪತಿ ಇಮ್ಮಡಿ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ಮಂಗಳವಾರ ಪಟ್ಟಣದಲ್ಲಿ ಜರುಗಿದ 46ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಪಕ್ಷಾತೀತ ರೈತ ಹೋರಾಟ ಸಮಿತಿ ರೈತ ಭವನದ ಪಕ್ಕದಲ್ಲಿರುವ ಹುತಾತ್ಮ ರೈತ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ನಾಲ್ಕು ಜಿಲ್ಲೆಗಳ 13 ತಾಲೂಕುಗಳ ಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆಯು ಕುಡಿಯುವ ನೀರಿನ ಮಹತ್ವದ ಯೋಜನೆಯಾಗಿದ್ದು ಈ ಭಾಗದ ರೈತರು ಕಳೆದ 3 ದಶಕಗಳಿಂದ ನಿರಂತರ ಹೋರಾಟ ಮಾಡುತ್ತಿದ್ದಾರೆ ಎಂದರು.

ರೈತ ಮುಖಂಡ ಲೋಕನಾಥ ಹೆಬಸೂರ ಎಲ್ಲರೂ ಒಟ್ಟಾಗಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕಿದೆ ಎಂದರು. ಈ ವೇಳೆ ರೈತ ಮುಖಂಡರಾದ ಮಹೇಶ ಹಳ್ಳದ, ಬಾಬು ಹಳ್ಳದ, ಸುರೇಶ ಮೇಟಿ, ದೇವೇಂದ್ರಪ್ಪ ಹಳ್ಳದ, ಬಸಪ್ಪ ಮೇಟಿ, ಅಡಿವೆಪ್ಪ ಶಿರಸಂಗಿ, ಮರಿತೆಮ್ಮೆಪ್ಪ ಹಳ್ಳದ, ಪ್ರಕಾಶ ಕಲಬಾರ, ಹನಮಂತಪ್ಪ ಕಲಿರಂಗಣ್ಣವರ ಸೇರಿದಂತೆ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

ಕೇಶ ಮುಂಡನ!

ಕಳೆದ ಮೂರು ವರ್ಷದಿಂದ ರಕ್ತದಿಂದ ಪತ್ರ ಬರೆದು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತಿದ್ದ ಯುವ ರೈತ ಮೈಲಾರಪ್ಪ ಕಮತರ ಈ ಸಲ ಕೇಂದ್ರ ಸರ್ಕಾರದ ನೀತಿ ಖಂಡಿಸಿ ಕೇಶ ಮುಂಡನ ಮಾಡಿಸಿಕೊಂಡು ಆಕ್ರೋಶ ವ್ಯಕ್ತಪಡಿಸಿದರು.