ಉಡುಪಿ: ನಮ್ಮ ಸಂಸ್ಕೃತಿಯಲ್ಲಿ ವಾಯುದೇವರ ಉಪಾಸನೆಗೆ ಪರಮೋಚ್ಚ ಸ್ಥಾನವಿದೆ, ಯಾಕೆಂದರೆ ಜಗತ್ತಿನ ಸಕಲ ಜೀವರಾಶಿಗಳ ಉಸಿರಾಟಕ್ಕೆ ಪ್ರಾಣವಾಯು ಎಷ್ಟು ಅನಿವಾರ್ಯವೋ, ನಮ್ಮ ಆಧ್ಯಾತ್ಮಿಕ ಬದುಕಿನ ಉನ್ನತಿಗೆ ವಾಯುದೇವರ ಅಥವಾ ಮುಖ್ಯಪ್ರಾಣನ ಅನುಗ್ರಹ ಅಷ್ಟೇ ಮುಖ್ಯ. ಇಂದ್ರಾಳಿಯ ಈ ಪವಿತ್ರ ಕ್ಷೇತ್ರದಲ್ಲಿ ಹನುಮಂತನ ಪುನಃ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ನಡೆಯುತ್ತಿರುವುದು ಇಡೀ ನಾಡಿಗೆ ಮಂಗಳಕರ ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟಿದ್ದಾರೆ.ಭಾನುವಾರ ಇಲ್ಲಿನ ಇಂದ್ರಾಳಿ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಅವರು ಆಶೀರ್ವಚನ ನೀಡಿದರು.ಹನುಮಂತ ಕೇವಲ ಶಕ್ತಿಯ ಸಂಕೇತವಲ್ಲ, ಅವನು ಬುದ್ಧಿವಂತರಲ್ಲಿ ಅಗ್ರಗಣ್ಯ. ರಾಮನ ಸೇವೆಯೇ ತನ್ನ ಜೀವನದ ಪರಮ ಗುರಿ ಎಂದು ನಂಬಿದ ಹನುಮಂತನ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಅತ್ಯಂತ ಅಗತ್ಯವಾಗಿವೆ. ಅಹಂಕಾರವಿಲ್ಲದ ಶಕ್ತಿ ಸಮಾಜಕ್ಕೆ ಹಿತಕಾರಿ ಎಂಬುವುದನ್ನು ಹನುಮಂತನ ಜೀವನ ನಮಗೆ ಕಲಿಸುತ್ತದೆ ಎಂದು ಶ್ರೀಗಳು ಪ್ರತಿಪಾದಿಸಿದರು.

ವಿಶೇಷವಾಗಿ ಈ ಭಾಗದ ಭಕ್ತಾದಿಗಳು ಅತ್ಯಂತ ಶ್ರದ್ಧೆ ಮತ್ತು ಸಂಘಟಿತ ಪ್ರಯತ್ನದ ಮೂಲಕ ಸುಂದರ ಶಿಲಾಮಯ ಗುಡಿಯನ್ನು ನಿರ್ಮಿಸಿರುವುದು ದೈವದ ಮೇಲಿನ ಅವರ ಅಚಲ ಭಕ್ತಿಗೆ ಸಾಕ್ಷಿಯಾಗಿದೆ. ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಧಾರ್ಮಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಇಂತಹ ಪುಣ್ಯ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭೂಪತಿ ಶೆಟ್ಟಿ, ಇಂದ್ರಾಣಿ ಪಂಚದುರ್ಗಾಪರಮೇಶ್ವರಿ ದೇವಳ ಆಡಳಿತ ಸಮಿತಿ ಅಧ್ಯಕ್ಷ ಕುಶಲ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ರತ್ನಾಕರ್ ಇಂದ್ರಾಳಿ, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಯುಪಿಸಿಎಲ್ ಅಧ್ಯಕ್ಷ ಕಿಶೋರ್ ಆಳ್ವ, ಉದ್ಯಮಿಗಳಾದ ಅಜಯ್ ಪಿ. ಶೆಟ್ಟಿ, ದಿವಾಕರ ಶೆಟ್ಟಿ, ಕೆ.ಎಂ. ಶೆಟ್ಟಿ, ಕುತ್ಯಾರು ನವೀನ ಶೆಟ್ಟಿ, ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯ, ದಾನಿಗಳಾದ ಜಯಕರ ಶೆಟ್ಟಿ ಬುಡ್ನಾರು, ಶೇಖರ ಶೆಟ್ಟಿ ಬುಡ್ನಾರು, ನಾಗೇಶ ಹೆಗ್ಡೆ, ವಿಜಯ ಜತ್ತನ್, ರತ್ನಾಕರ ಶೆಟ್ಟಿ, ಸಾಧು ಶೆಟ್ಟಿ ಉಪಸ್ಥಿತರಿದ್ದರು.