ಸಾರಾಂಶ
ಕನ್ನಡಪ್ರಭ ವಾರ್ತೆ ಸರಗೂರುಸರಗೂರು ತಾಲೂಕು ತ್ರಿಮತಸ್ಥ ಬ್ರಾಹ್ಮಣ ಸಂಘದ ವತಿಯಿಂದ ನಡೆದ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ 2024ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಭಾನುಪ್ರಕಾಶ್ ಶರ್ಮ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಬಳಿಕ ಮಾತನಾಡಿದ ಅವರು, ಬ್ರಾಹ್ಮರು ಸಂಘಟಿತರಾಗಬೇಕು, ಬ್ರಾಹ್ಮಣರು ಯಾರಿಗೂ ತೊಂದರೆ ಕೊಟ್ಟಿಲ್ಲ. ಹಳೆ ಕಾಲದಲ್ಲಿ ಎಲ್ಲಾ ಹಳ್ಳಿಗಳಲ್ಲೂ ಬ್ರಾಹ್ಮಣರು ಇದ್ದಿದ್ದು ಬರೀ 8 ರಿಂದ 10 ಮನೆಗಳು, ಅಗ್ರಹಾರಗಳು ಇರುತ್ತಿದ್ದವು. ಅಲ್ಲಿ ನಾವು ಎಲ್ಲರಿಗೂ ಮಾರ್ಗದರ್ಶನ ಮಾಡುತ್ತಾ ಶಾನುಭೋಗತನವನ್ನು ಮಾಡುತ್ತಿದ್ದೆವು ಎಂದು ನೆನೆಪಿಸಿಕೊಂಡರು.ಬ್ರಾಹ್ಮಣ ಅನ್ನುವುದು ಜಾತಿಯಲ್ಲ, ಸಂಸ್ಕಾರದ ನಿಯಮವನ್ನು ಯಾರು ಉಳ್ಳವನಾಗಿರುತ್ತಾನೋ ಅವನನ್ನು ಬ್ರಾಹ್ಮಣ ಅಂತ ಕರೆಯಬೇಕು. ಹೆಸರಿಗೆ ಬ್ರಾಹ್ಮಣನಾಗಿದ್ದು ಅದಕ್ಕೆ ಬೇಕಾದಂತಹ ಅನುಷ್ಠಾನಗಳು, ಸಂಧ್ಯಾವಂದನೆಗಳು, ಯಜ್ಞಯಾಗಾದಿಗಳು ಮತ್ತು ಬೇರೆಯವರಿಗೂ ಹಿತವಚನ ನೀಡುವವನೇ ನಿಜವಾದ ಬ್ರಾಹ್ಮಣ ಅಂತ ತಿಳಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾವು ಮಾಸ್ಟರ್ ಹಿರಣ್ಣಯ್ಯ ಅವರ ಕಾಲದಲ್ಲಿ ನಿರ್ಮಾಣಗೊಂಡು ಬಿ.ಎನ್.ವಿ ಸುಬ್ರಮಣ್ಯ, ಪ್ರಸಾದ್, ಸಿ.ಎಲ್.ವಿ ಶಾಸ್ತ್ರಿ ಹಾಗೆ ಈಗ ಅಶೋಕ ಆರನಹಳ್ಳಿ ಅವರು ಸೇವೆ ನಡೆಸಿಕೊಂಡು ಬರುತ್ತಿದ್ದಾರೆ. ಸ್ಥಳೀಯರಿಗಾಗಿ ಜಿಲ್ಲೆ ಹಾಗೂ ತಾಲೂಕು ಬ್ರಾಹ್ಮಣ ಸಂಘ ಹುಟ್ಟಿಕೊಂಡಿತು ಎಂದು ತಿಳಿಸಿದರು.ಕಾಂತರಾಜು ಆಯೋಗದಿಂದ ಹಿಂದಿನ ಕಾಲದಲ್ಲಿ 42 ಬ್ರಾಹ್ಮಣರ ಪಂಗಡಗಳನ್ನು ಮಾಡಿದ್ದಾರೆ. ಹಾಗಾಗಿ ತಾವೆಲ್ಲರೂ ಚುನಾವೆ ವೇಳೆ ಅಪ್ಲಿಕೇಷನ್ ತುಂಬಬೇಕಾದರೆ ಯಾವುದೇ ಉಪ ಪಂಗಡಗಳನ್ನು ನಮೂದಿಸದೆ ಬ್ರಾಹ್ಮಣ ಎಂಬ ಒಂದೇ ಒಂದು ಜಾತಿಯನ್ನು ನಮೂದಿಸಬೇಕು ಎಂದರು.
ಬಳಿಕ ಕೃಪಾ ಮಂಜುನಾಥ್ ಮಾತನಾಡಿ, ದಿಗ್ಬಲಂ ಕ್ಷತ್ರಿಯ ಬಲಮ್, ಬ್ರಹ್ಮತೇಜೋ ಬಲಂಬಲಂ ಎಂಬಂತೆ ಕೌಶಿಕ ಮಹರ್ಷಿ ಬ್ರಾಹ್ಮಣರ ಬಲದ ಬಗ್ಗೆ ಅವತ್ತೇ ತಿಳಿಸಿದ್ದಾರೆ. ಅದಕ್ಕೆ ಅನುಗುಣವಾಗಿ ನಾವು ದಿನನಿತ್ಯ ಗಾಯತ್ರಿ ಮಂತ್ರ ಜಪ ಮಾಡಿ ಸರ್ವೇ ಜನಾಃ ಸುಖಿನೋ ಭವಂತು ಎಂಬಂತೆ ಪ್ರಪಂಚದಲ್ಲಿನ ಒಂದು ಬಚ್ಚಲು ಹುಳವೂ ಕೂಡ ಚೆನ್ನಾಗಿ ಬದುಕಲಿ ಎಂದು ದಿನನಿತ್ಯ ಸಂಧ್ಯಾವಂದನೆ ಮಾಡುವ ಮೂಲಕ ಪ್ರಾರ್ಥಿಸಬೇಕು ಎಂದು ಕರೆ ನೀಡಿದರು.ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಮುಳ್ಳೂರು ಗುರುಪ್ರಸಾದ್ ಮಾತನಾಡಿ, ನಮ್ಮ ಸರಗೂರು ತಾಲೂಕನ್ನು ಉನ್ನತ ರೀತಿಯಲ್ಲಿ ಅಭಿವೃದ್ಧಿಪಡಿಸಿ ಕುಗ್ರಾಮದಲ್ಲಿ ಇರುವ ಎಲ್ಲಾ ಬ್ರಾಹ್ಮಣರನ್ನು ಒಂದು ವೇದಿಕೆಗೆ ಕರೆ ತರೋಣ ಎಂದು ಕರೆಕೊಟ್ಟರು.
ಹಳ್ಳಿಗಳಲ್ಲಿ ಈಗಲೂ ಬ್ರಾಹ್ಮಣರ ಮನೆ ಕಡಿಮೆ ಇದ್ದು ಸತ್ತಂತಹ ಬ್ರಾಹ್ಮಣರ ಅಂತ್ಯ ಸಂಸ್ಕಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಅಂತ್ಯಕ್ರಿಯೆ, ಅಪರ ಕರ್ಮ ಮಾಡಿಸಲು ಆಂಬುಲೆನ್ಸ್ ಅನ್ನು ಕೊಡುತ್ತೇನೆ ಎಂದು ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಕೃಪಾ ಮಂಜುನಾಥ್, ನೂತನ ಪದಾಧಿಕಾರಿಗಳು ಇದ್ದರು.