ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯ ಮಕ್ಕಳ ಹೊರ ರೋಗಿ ವಿಭಾಗದಲ್ಲಿ ಗುರುವಾರ ನಡೆಯಿತು.
ಡೀನ್ ಮತ್ತು ಡೈರೆಕ್ಟರ್ ಡಾ .ಲೋಕೇಶ್ ಮತ್ತು ಗಣ್ಯರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ. ರಾಮಚಂದ್ರ ಕಾಮತ್ ಮಾತನಾಡಿ, ತಾಯಿಯ ಹಾಲು ಅತ್ಯುತ್ತಮ ಸಂಪೂರ್ಣ ಪೌಷ್ಟಿಕ ಆಹಾರ ಜೀವನದ ಸುಸ್ಥಿರ ಆರಂಭವೂ ಆಗಿದೆ. ಅತಿಸಾರ, ನ್ಯುಮೋನಿಯಾ, ಕಿವಿಯ ಸೋಂಕು ಮತ್ತು ಅಲರ್ಜಿಗಳನ್ನು ತಡೆಗಟ್ಟುವ ಶಕ್ತಿ ತಾಯಿಯ ಹಾಲಿನಲ್ಲಿದೆ ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಂಜುಂಡಯ್ಯ ಅವರು ಸ್ತನ್ಯಪಾನ ಮಗುವಿನ ಮೆದುಳಿನ ಬೆಳವಣಿಗೆಗೆ ಸಹಕಾರಿ ಯಾಗಿದೆ ಎಂದು ಮಾಹಿತಿ ನೀಡಿದರು.ಸ್ಥಾನೀಯ ವೈದ್ಯಾಧಿಕಾರಿ ಡಾ. ಧನಂಜಯ ಅವರು ತಾಯಿಯ ಎದೆ ಹಾಲು ತಾಯಿ ಮಗುವಿನ ಬಾಂಧವ್ಯ ಹೆಚ್ಚಿಸುತ್ತದೆ. ತಾಯಿ ಹಾಲಿನ ಕೊರತೆ ಆದಲ್ಲಿ ಮಕ್ಕಳ ಬೆಳವಣಿಗೆಯ ಸಾಧ್ಯತೆ ಉಂಟಾಗುತ್ತದೆ ಎಂಬ ಮಾಹಿತಿ ನೀಡಿದರು.
ಮಕ್ಕಳ ತಜ್ಞ ಡಾ. ದಿವ್ಯರಾಣಿ ಎದೆ ಹಾಲಿನ ಮಹತ್ವದ ಬಗ್ಗೆ, ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಡೀನ್ ಮತ್ತು ಡೈರೆಕ್ಟರ್ ಡಾ. ಲೋಕೇಶ್ ಅವರು ತಾಯಿ ಹಾಲು ಮಗುವಿನ ಮೊದಲ ಹಕ್ಕು, ಮೊದಲ ಲಸಿಕೆ ಮತ್ತು ಮೊದಲ ಆಹಾರ, ಹೆರಿಗೆಯ ತಕ್ಷಣ ಪ್ರತಿ ತಾಯಿಯು ಸ್ತನ್ಯ ಪಾನ ಮಾಡಿಸಲು, ಕುಟುಂಬ ಸಮಾಜ ಮತ್ತು ಕೆಲಸದ ಸ್ಥಳದಲ್ಲಿ ಅಗತ್ಯ ಬೆಂಬಲ ನೀಡಬೇಕು. ಇದಕ್ಕೆ ಎಲ್ಲರೂ ಬೆಂಬಲಿಸೋಣ ಎಂದರು. ಸ್ತನ್ಯಪಾನ ಸಪ್ತಾಹದ ಅಂಗವಾಗಿ ವೈದ್ಯಕೀಯ ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ರೇಖಾಚಿತ್ರ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತ ವಿದ್ಯಾರ್ಥಿಗಳು ವೇದಿಕೆಯ ಗಣ್ಯರಿಂದ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಪುರುಷೋತ್ತಮ, ಮಕ್ಕಳ ತಜ್ಞ ವೈದ್ಯರಾದ ಡಾ. ರವಿಚಂದ್ರ, ಡಾ. ಕುಮಾರ್, ಡಾ. ಸಲ್ಮಾ ಮತ್ತಿತರರಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ. ಶಾಂತಿ ನಿರೂಪಿಸಿದರು.
