ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನಇನ್ನೇನು ವರ ತಾಳಿ ಕಟ್ಟಬೇಕು ಎನ್ನುವ ಕೊನೆ ಕ್ಷಣದಲ್ಲಿ ವಧು ನನಗೆ ಮದುವೆ ಬೇಡ ಎಂದು ಹಠ ಹಿಡಿದಿದ್ದರಿಂದ ಮದುವೆ ನಿಂತು ಹೋದ ಘಟನೆ ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದಿದೆ. ತಾಲೂಕಿನ ಬೂವನಹಳ್ಳಿ ಗ್ರಾಮದ ಪಲ್ಲವಿ ಮತ್ತು ಆಲೂರು ತಾಲೂಕಿನ ಈಶ್ವರಹಳ್ಳಿ ಕೂಡಿಗೆಯ ಸರ್ಕಾರಿ ಶಾಲಾ ಶಿಕ್ಷಕ ಜಿ. ವೇಣುಗೋಪಾಲ್ ಮದುವೆ ನಿಗದಿಯಾಗಿತ್ತು. ಮುಹೂರ್ತದ ವೇಳೆಯಲ್ಲಿ ಪಲ್ಲವಿಗೆ ಬಂದ ಒಂದು ಕರೆ ಬಂದ ನಂತರ ಮನಸ್ಸು ಬದಲಾವಣೆಯಾಗಿ ತಾಳಿ ಕಟ್ಟುವ ಸಮಯದಲ್ಲಿ ವಧು ಪಲ್ಲವಿ ನಾನು ಬೇರೊಬ್ಬ ಹುಡುಗನನ್ನು ಪ್ರೀತಿಸುತ್ತಿದ್ದು, ಈ ಮದುವೆ ಬೇಡ ಎಂದು ಹಠ ಹಿಡಿದಿದ್ದು, ಈ ವೇಳೆ ಮದುವೆ ಗಂಡು ವೇಣುಗೋಪಾಲ್ ಕೊನೆಯ ಕ್ಷಣದವರೆಗೂ ಆಕೆಗೆ ಮನವರಿಕೆ ಮಾಡಿ ನನಗೆ ಬಲವಂತದ ಮದುವೆ ಬೇಡ ಒಪ್ಪಿದರೇ ತಾಳಿ ಕಟ್ಟುತ್ತೇನೆ ಎಂದು ಮನವಿ ಮಾಡಿದರೂ ವಧು ಒಪ್ಪದ ಕಾರಣ ಮದುವೆಯನ್ನು ನಿಲ್ಲಿಸಲಾಯಿತು.ಪಲ್ಲವಿಯ ಈ ನಿರ್ಧಾರ ಬದಲಿಸುವಂತೆ ಆಕೆಯ ಪೋಷಕರು ಶತಾಯಗತಾಯ ಮನವೊಲಿಸಲು ಪ್ರಯತ್ನಿಸಿದರೂ ಆಕೆ ಮದುವೆ ಬೇಡವೇ ಬೇಡ ಎಂದು ದೃಢವಾಗಿ ಹೇಳಿದ್ದಾರೆ. ಈ ವಿಷಯ ತಿಳಿದ ವರನ ಕಡೆಯವರಾದ ವೇಣುಗೋಪಾಲ್ ಕೂಡ, ಯುವತಿ ಹಠ ಮಾಡಿದ್ದರಿಂದ ಈ ಮದುವೆಗೆ ಒಪ್ಪಿಗೆಯಿಲ್ಲ ಎಂದು ಹೇಳಿದ್ದಾರೆ. ವಿಷಯ ತಿಳಿದ ಬಡಾವಣೆ ಮತ್ತು ನಗರ ಠಾಣೆ ಪೊಲೀಸರು ಆಗಮಿಸಿ ಮಧ್ಯೆ ಪ್ರವೇಶಿಸಿ ವಿಷಯ ತಿಳಿದು ನಂತರ ಹುಡುಗಿದೆ ಮನವರಿಕೆ ಮಾಡಲು ಮುಂದಾದರು. ಪಲ್ಲವಿಯ ನಿರ್ಧಾರ ಬದಲಾಗಲಿಲ್ಲ. ಈ ಘಟನೆಯಿಂದ ಪಲ್ಲವಿಯ ಪೋಷಕರು ಕಣ್ಣೀರಿಟ್ಟಿದ್ದಾರೆ. ಕೊನೆಗೆ, ಮದುವೆಯ ಎಲ್ಲ ಸಿದ್ಧತೆಗಳು ವ್ಯರ್ಥವಾಗಿ, ಕಡೆಗೆ ಮದುವೆ ನಿಂತುಹೋಗಿದೆ. ಘಟನೆ ವಿವರ:
ಹಾಸನ ತಾಲೂಕಿನ ಬೂವನಹಳ್ಳಿ ಗ್ರಾಮದ ಪಲ್ಲವಿಗೆ ಆಲೂರು ತಾಲೂಕಿನ ಈಶ್ವರಹಳ್ಳಿ ಕೂಡಿಗೆಯ ಸರ್ಕಾರಿ ಶಾಲಾ ಶಿಕ್ಷಕ ಜಿ. ವೇಣುಗೋಪಾಲ್ ಇಬ್ಬರ ಒಪ್ಪಿಗೆಯಲ್ಲೇ ಕಳೆದ ಮೂರುವರೆ ತಿಂಗಳ ಹಿಂದೆಯೇ ಮದುವೆ ನಿಶ್ಚಿತಾರ್ಥವಾಗಿತ್ತು. ಈ ವೇಳೆ ಪ್ರೀ ವೆಡ್ಡಿಂಗ್ ಫೋಟೋಶೂಟ್ ಕೂಡ ಸುಗಮವಾಗಿ ನಡೆದಿತ್ತು. ಈ ಮಧ್ಯೆ ಮದುವೆ ಆಗುವ ಹುಡುಗಿಗೆ ಹುಡುಗ ಕಾಲ್ ಮಾಡಿದಾಗ ರಿಸಿವ್ ಮಾಡುತ್ತಿರಲಿಲ್ಲ ಎಂದು ಸಂಬಂಧಿಕರು ಹೇಳಿದರು. ಹಾಗೆ ಮದುವೆ ದಿನವೂ ಕೂಡ ಬಂದೇಬಿಟ್ಟಿತು. ಮದುವೆ ಶಾಸ್ತ್ರ ಎಲ್ಲಾ ನಡೆಯಿತು. ಬೆಳಿಗ್ಗೆ ಮದುವೆಗೆ ಬರುವ ಬಂಧು ಬಳಗದವರಿಗೆ ಹಾಗೂ ಸ್ನೇಹಿತರಿಗೆ ರುಚಿಕರವಾದ ಊಟ ಕೂಡ ತಯಾರು ಮಾಡಲಾಗಿತ್ತು. ಇನ್ನೇನು ಜೋಯಿಸರು ಮಂತ್ರ ಹೇಳಿ ತಾಳಿ ಕಟ್ಟಿಸಲು ಗಂಡು ಮುಂದಾಗುತ್ತಿದ್ದಂತೆ ಹುಡುಗಿ ನಾನು ಮದುವೆ ಆಗುವುದಿಲ್ಲ. ನಾನು ಬೇರೆಯವನನ್ನು ಪ್ರೀತಿ ಮಾಡುತ್ತಿರುವುದಾಗಿ ಹೇಳಿದ್ದಾಳೆ. ಈ ವಿಚಾರ ಹರಡುತ್ತಿದ್ದಂತೆ ಸಂಬಂಧಿಕರು ಗಾಬರಿಯಾದರು. ಗುಸು ಗುಸು ಮಾತುಗಳು ಕೇಳಿಬಂದಿತು. ಹುಡುಗನು ಕೂಡ ಈ ವೇಳೆ ಬೇಸರದಲ್ಲಿ ಕಣ್ಣೀರು ಇಡಬೇಕಾಯಿತು. ಸುಮಾರು ಒಂದೂವರೆ ಸಾವಿರದಿಂದ ಎರಡು ಸಾವಿರ ಜನರಿಗೆ ಅಡುಗೆ ಮಾಡಲಾಗಿತ್ತು. ಇಷ್ಟೆಲ್ಲಾ ಘಟನೆ ನಡೆದರೂ ಕೆಲವರು ಅವರ ಪಾಡಿಗೆ ತಿಂಡಿ ಊಟ ಮಾಡಿದರು. ಇಷ್ಟೆಲ್ಲಾ ಆಗುವುದಕ್ಕೂ ಮೊದಲೇ ವಧು ತನ್ನ ಪ್ರೀತಿ ಪ್ರೇಮದ ವಿಚಾರವನ್ನು ಕುಟುಂಬದವರಿಗೆ ತಿಳಿಸಿದ್ದರೇ ಇಷ್ಟೊಂದು ನಷ್ಟವಾಗುತ್ತಿರಲಿಲ್ಲ ಎಂದು ಮದುವೆ ಮನೆಯಲ್ಲಿದ್ದವರು ಗುಸುಗುಸು ಮಾತನಾಡುತ್ತಿದ್ದರು.