ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ನೇರವಾಗಿ ಗ್ರಾಮೀಣ ಜನತೆಗೆ ತಲುಪಿಸುವ ನಿಟ್ಟಿನಲ್ಲಿ ತಾಲೂಕಿನ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಜನ ಸಂಪರ್ಕ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಚ್.ವಿ. ವೆಂಕಟೇಶ್ ಹೇಳಿದರು.ತಾಲೂಕು ಆಡಳಿತ ವತಿಯಿಂದ ಶನಿವಾರ ವಿರಪಸಮುದ್ರ ಹಾಗೂ ದೊಮ್ಮತಮರಿ ಗ್ರಾಪಂ ಕೇಂದ್ರ ಸ್ಥಾನಗಳಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ, ಸಾರ್ವಜನಿಕರ ಕುಂದು ಕೊರತೆ ಆಲಿಸುವ ಮೂಲಕ ಸಾರ್ವಜನಿಕರಿಂದ ಸಮಸ್ಯೆಯ ಅಹವಾಲು ಸ್ವೀಕರಿಸಿದರು.
ಬಳಿಕ ವಿರಪಸಮುದ್ರ ಗ್ರಾಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಸಿಗಬೇಕು. ಈ ನಿಟ್ಟಿನಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ತಾಲೂಕಿನ ಎಲ್ಲಾ ಗ್ರಾಪಂ ವ್ಯಾಪ್ತಿಯ ಕೇಂದ್ರ ಸ್ಥಾನಗಳಲ್ಲಿ ವಾರಕ್ಕೆ ಎರಡು ದಿನ ಜನ ಸಂಪರ್ಕ ಸಭೆ ಹಮ್ಮಿಕೊಳ್ಳಲಾಗಿದೆ. ವಿವಿಧ ಇಲಾಖೆಯ ಯೋಜನೆ ಬಗ್ಗೆ ಜನರಿಗೆ ಮಾಹಿತಿ ನೀಡುವ ಮೂಲಕ ಅರ್ಹರಿಗೆ ಸರ್ಕಾರದ ಯೋಜನೆಯ ಸೌಲಭ್ಯ ಕಲ್ಪಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿದೆ ಎಂದರು.ವಿರುಪಸಮುದ್ರ ವ್ಯಾಪ್ತಿಯಲ್ಲಿ ನಾಲ್ಕು ಎಕರೆ ಆಟದ ಮೈದಾನಕ್ಕೆ ಜಾಗ ಮೀಸಲಿಟಿದ್ದು, ಅದೇ ರೀತಿ 16 ಎಕರೆಯಲ್ಲಿ ಬಡವರಿಗೆ ಹಾಗೂ ನಿರ್ಗತಿಕರಿಗೆ ಮನೆ ನಿರ್ಮಾಣಕ್ಕಾಗಿ ತಹಸೀಲ್ದಾರ್ ಕಚೇರಿಯಿಂದ ಹಕ್ಕು ಪತ್ರ ನೀಡಲಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಪಂಚಾಯಿತಿಯಿಂದ ಅರ್ಜಿ ಕರೆಯುತ್ತಿದ್ದು, ಈ ಭಾಗದ ಆರ್ಹತೆಯ ಎಲ್ಲಾ ಬಡವರಿಗೆ ವಸತಿ ಹಾಗೂ ಇತರೆ ಯೋಜನೆಯ ಸೌಲಭ್ಯ ನೀಡಲಾಗುವುದು ಎಂದರು.
ತಹಸೀಲ್ದಾರ್ ಡಿ.ಎನ್. ವರದರಾಜು ಮಾತನಾಡಿ, ವಿವಿಧ ಇಲಾಖೆಯ ಸರ್ಕಾರಿ ಸೌಲಭ್ಯ ಹಾಗೂ ಆರ್ಹರಿಗೆ ಮಾಶಾಸನ ಮಂಜೂರಾತಿ ಪತ್ರ ವಿತರಣೆ ಸೇರಿ ತೋಟಗಾರಿಕೆ ಕೃಷಿ ಹಾಗೂ ರೇಷ್ಮೆ ಇಲಾಖೆಯ ಸೌಲಭ್ಯ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದ ಹಿನ್ನೆಲೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ತಾ. ವಿರಪಸಮುದ್ರ ಹಾಗೂ ದೊಮ್ಮತಮರಿ ಗ್ರಾಪಂಗಳಿಂದ 300ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದು, ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಯಿತು.
ಈ ಭಾಗದ ಗಡಿಯ ನಾಗಲಪುರ ಮತ್ತು ಬೀರೆನಹಳ್ಳಿ ಸರ್ವೇ ನಂ 20ರಲ್ಲಿ ಸಾರ್ವಜನಿಕರಿಗೆ ಮತ್ತು ಜಮೀನಿಗೆ ಒಡಾಡಲು ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ದೂರು ಸಲ್ಲಿಸಿದ್ದು, ತಾ. ವಿರುಪ ಸಮುದ್ರ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಕಾಮಗಾರಿ ಪಟ್ಟಿ ಸೇರ್ಪಡೆಗೆ ರಾಜಕೀಯ ತಾರತಮ್ಯ ಮಾಡುತ್ತಿದ್ದು, ಈ ಹಿನ್ನೆಲೆ ಸ್ಥಳೀಯ ಆನೇಕ ಜನರು ಮೌಖಿಕವಾಗಿ ಶಾಸಕರು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು.ತಾಪಂ ಇಒ ಜಾನಕಿ ರಾಮ್, ತಾಲೂಕು ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ರಾಮಾಂಜಿನಪ್ಪ, ತಾ. ಕಾಂಗ್ರೆಸ್ ಗ್ರಾಮಾಂತರ ಮಹಿಳಾ ಅಧ್ಯಕ್ಷೆ ಉಷರಾಣಿ, ಮುಖಂಡ ಮಾಜಿ ಎಪಿಎಂಸಿ ಅಧ್ಯಕ್ಷ ವಿಶೇಶ್ವರಯ್ಯ, ಮಾಜಿ ತಾಪಂ ಅಧ್ಯಕ್ಷ ಅದಿನಾರಾಯಣಪ್ಪ, ಜಿಪಂ ಆಕಾಂಕ್ಷಿ, ಗುಮ್ಮಘಟ್ಟ ಶ್ರೀನಿವಾಸ್, ಭಾಸ್ಕರ್ ರೆಡ್ಡಿ ಗುಮ್ಮಘಟ್ಟ ಈಶ್ವರ್, ಅಶ್ವಥಪ್ಪ, ಸಂಜೀವರಾಯಪ್ಪ ಹಾಗೂ ಇತರೆ ಸ್ಥಳೀಯ ಮುಖಂಡರು ಸೇರಿ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.