ಕುಕನೂರು: ಪಟ್ಟಣದಲ್ಲಿ ಗಣ್ಯರ ಮೂರ್ತಿ ಪ್ರತಿಷ್ಠಾಪನೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ಸದಸ್ಯರು ಒಪ್ಪಿಗೆ ಸೂಚಿಸಿದರು.
ಸ್ಥಳೀಯ ಪಪಂ ಕಾರ್ಯಾಲಯದಲ್ಲಿ ಜರುಗಿದ ವಿಶೇಷ ಸಭೆಯಲ್ಲಿ ಸರ್ವ ಸದಸ್ಯರು ಪಟ್ಟಣದ ವ್ಯಾಪ್ತಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್, ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ, ಜಗಜ್ಯೋತಿ ಬಸವೇಶ್ವರ ಮೂರ್ತಿ ಸ್ಥಾಪನೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಕ್ಕೆ ಘಟನೋತ್ತರ ಮಂಜೂರಾತಿ ನೀಡಲು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು. ಅಲ್ಲದೆ ಮೇ. 4 ರಂದು ಪಟ್ಟಣದಲ್ಲಿ ಜರುಗುವ ಡಾ.ಬಿ.ಆರ್ ಅಂಬೇಡ್ಕರ್, ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ, ಜಗಜ್ಯೋತಿ ಬಸವೇಶ್ವರ ಮೂರ್ತಿ ಸ್ಥಾಪನೆಯ ಕಟ್ಟಡ ಅಡಿಗಲ್ಲು ಸಮಾರಂಭದ ಕುರಿತು ಚರ್ಚಿಸಿದರು.ಪಪಂ ಸದಸ್ಯ ಸಿದ್ದಲಿಂಗಯ್ಯ ಉಳ್ಳಾಗಡ್ಡಿ ಮಾತನಾಡಿ, ಪಪಂದಿಂದ ಕೈಗೊಂಡಿರುವ ಹಲವಾರು ಕಾರ್ಯ ಬಗ್ಗೆ ಯಾವುದೇ ಸದಸ್ಯರ ಗಮನಕ್ಕೆ ವಿಷಯಗಳು ಬಂದಿಲ್ಲ. ಸದಸ್ಯರನ್ನು ಮುಖ್ಯಾಧಿಕಾರಿಗಳು ಪರಿಗಣಿಸುವುದಿಲ್ಲ ಎಂದು ಆರೋಪಿಸಿದರು. ಕೆಲವು ವಾರ್ಡ್ಗಳಲ್ಲಿ ಕುಡಿವ ನೀರಿನ ಸಮಸ್ಯೆ ಇದ್ದು, ಅದನ್ನು ಬಗೆಹರಿಸಬೇಕು ಎಂದು ಹೇಳಿದರು.
ಪಪಂ ಸದಸ್ಯ ಮಲ್ಲಿಕಾರ್ಜುನ ಚೌದರಿ ಮಾತನಾಡಿ, ನಮ್ಮ ವಾರ್ಡ್ಗಳಲ್ಲಿನ ಬೀದಿ ದೀಪದ ಕಂಬಗಳಿಗೆ ಬಲ್ಪ್ ಕೇಳಿದರೆ ಪಪಂ ಸಿಬ್ಬಂದಿ ಬಲ್ಪ್ ಇಲ್ಲ ಎನ್ನುತ್ತಾರೆ. ಹಾಗಾಗಿ ನಾನೇ ನನ್ನ ಸ್ವಂತ ಖರ್ಚಿನಲ್ಲಿ ಬಲ್ಪ್ ಹಾಕಿಸಿದ್ದೇನೆ. ಪಪಂನಲ್ಲಿ ಬಲ್ಪ್ ಇಲ್ವಾ ಎಂದು ಪ್ರಶ್ನಿಸಿದರು. ಬಲ್ಪ್ ಕೊರತೆ ಇಲ್ಲ ಎಂದು ಮುಖ್ಯಾಧಿಕಾರಿ ಉತ್ತರಿಸಿದರು.ಪಪಂ ಸದಸ್ಯ ರಾಮಣ್ಣ ಬಂಕದಮನಿ ಗಣ್ಯರ ಮೂರ್ತಿ ಪ್ರತಿಷ್ಠಾಪನೆಯ ವಿಷಯ ಪ್ರಸ್ತಾಪಿಸಿದರು. ಎಲ್ಲ ಸದಸ್ಯರು ಅದಕ್ಕೆ ಪೂರಕವಾದ ಕಾರ್ಯ ಮಾಡಲು ಒಪ್ಪಿಗೆ ಸೂಚಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಸಿರಾಜ್ ಕರಮುಡಿ ಮಾತನಾಡಿ, ಪಟ್ಟಣದಲ್ಲಿ ರಸ್ತೆ ಅಗಲೀಕರಣ ಮಾಡುವಾಗ ರಸ್ತೆ ಬದಿಯ ಎರಡು ಬದಿಯಲ್ಲಿ ಅಗಲೀಕರಣ ಮಾಡಿರ, ಒಂದೇ ಬದಿಯಲ್ಲಿ ಅಂಗಡಿಗಳ ತೆರವು ಮಾಡುವುದು ತಪ್ಪು. ಸರ್ವೇ ಇಲಾಖೆಯ ಅಧಿಕೃತ ನಕ್ಷೆಯೊಂದಿಗೆ ಅಗಲೀಕರಣ ಕಾರ್ಯ ಆಗಲಿ ಎಂದರು.
ಪಪಂ ಸದಸ್ಯ ಗಗನ ನೋಟಗಾರ ಮಾತನಾಡಿ, ಬಸವೇಶ್ವರ ಮೂರ್ತಿ ಸ್ಥಾಪನೆ ನಿಮಿತ್ತ ಅಲ್ಲಿದ್ದ ಕೆಲವು ಅಂಗಡಿ ತೆರವು ಕಾರ್ಯ ಆಗಿದ್ದು, ಅವರ ಜೀವನ ನಿರ್ವಹಣೆ ಕಷ್ಟಕರ ಆಗಿದೆ. ಅವರಿಗೆ ಪಟ್ಟಣದಲ್ಲಿ ಬೇರೆ ಕಡೆ ಸ್ಥಳವಕಾಶ ಮಾಡಿಕೊಡಬೇಕು ಎಂದರು.
ಪಪಂ ಸದಸ್ಯ ಶಿವರಾಜಗೌಡ ಯಲ್ಲಪ್ಪಗೌಡ್ರು ಮಾತನಾಡಿ, ಪಪಂನ ಕಾರ್ಯಾಲಯದಲ್ಲಿ ಸಿಬ್ಬಂದಿಗಳ ಹಾಜರಾತಿಗೆ ಇರುವ ಬಯೋ ಮೇಟ್ರೀಕ್ ಎಲ್ಲಿದೆ. ಅದು ಕಾರ್ಯ ಮಾಡುತ್ತಿದೇಯಾ ಎಂದು ಪ್ರಶ್ನಿಸಿದರು. ಅದರ ಬಗ್ಗೆ ಮಾಹಿತಿ ಕೊಡಲಾಗುವುದು ಎಂದು ಮುಖ್ಯಾಧಿಕಾರಿ ಉತ್ತರಿಸಿದರು.ಕೆಆರ್.ಐ,ಡಿ,ಎಲ್ ಇಂಜಿನಿಯರ್ ಅನಿಲ್ ಪಾಟೀಲ್ ಗಣ್ಯರ ಮೂರ್ತಿ ಪ್ರತಿಷ್ಠಾಪನೆ ನೀಲನಕ್ಷೆ ಸಭೆಗೆ ತೋರಿಸಿದರು.
ಪಪಂ ಅಧ್ಯಕ್ಷೆ ಲೀಲಾವತಿ ಮೂಧೋಳ, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಿರಾಜ್ ಕರಮುಡಿ, ಮುಖ್ಯಾಧಿಕಾರಿ ನಾಗೇಶ, ಪಪಂ ಸದಸ್ಯ ಸಿದ್ಲಿಂಗಯ್ಯ ಉಳ್ಳಾಗಡ್ಡಿ, ಬಾಲರಾಜ ಗಾಳಿ, ರಾಧಾ ದೊಡ್ಮನಿ, ಕವಿತಾ ಹೂಗಾರ, ಶಿವರಾಜಗೌಡ ಯಲಪ್ಪ್ಪಗೌಡ್ರು, ರಾಮಣ್ಣ ಬಂಕದಮನಿ, ಗಗನ ನೋಟಗಾರ, ಮಂಜುನಾಥ ಕೋಳೂರು, ಮಲ್ಲಿಕಾರ್ಜುನ ಚೌದ್ರಿ, ಲಕ್ಷ್ಮೀ ವಿರೇಶ ಸಬರದ, ರಫಿ ಹಿರೇಹಾಳ ಸೇರಿದಂತೆ ಸಿಬ್ಬಂದಿಗಳಿದ್ದರು.