ಚಿಕ್ಕಮಗಳೂರು ಕರ್ನಾಟಕದ ಮಹಾನ್ ಕವಿಗಳ ಕಾವ್ಯಗಳನ್ನು ಜನಮಾನಸಕ್ಕೆ ತಲುಪಿಸುವಲ್ಲಿ ಗಮಕಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕರ್ನಾಟಕದ ಮಹಾನ್ ಕವಿಗಳ ಕಾವ್ಯಗಳನ್ನು ಜನಮಾನಸಕ್ಕೆ ತಲುಪಿಸುವಲ್ಲಿ ಗಮಕಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಹೇಳಿದರು.ಕಡೂರು ತಾಲೂಕಿನ ದೇವನೂರಿನ ಕವಿ ಲಕ್ಷ್ಮೀಶ ಕಾವ್ಯ ಮಂಟಪದಲ್ಲಿ ಜಿಲ್ಲಾ ಕಸಾಪ ಆಯೋಜಿಸಿದ್ದ ಪ್ರಥಮ ಜಿಲ್ಲಾ ಗಮಕ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಕುಮಾರವ್ಯಾಸನ ಗದುಗಿನ ಭಾರತ, ರಾಘವಾಂಕನ ಹರಿ ಶ್ಚಂದ್ರ ಕಾವ್ಯ, ಲಕ್ಷ್ಮೀಶನ ಜೈಮಿನಿ ಭಾರತ ಸೇರಿದಂತೆ ಪಂಪ, ರನ್ನ, ಜನ್ನರ ಮಹತ್ವದ ಕಾವ್ಯಗಳನ್ನು ನಾಲಿಗೆಯಿಂದ ನಾಲಿಗೆಗೆ, ಮನೆಯಿಂದ ಮನೆಗೆ ತಲುಪಿಸಿದ ಕೀರ್ತಿ ಗಮಕಿಗಳಿಗೆ ಸಲ್ಲುತ್ತದೆ ಎಂದರು.ಹಳಗನ್ನಡದ ಕಠಿಣ ಕಾವ್ಯಗಳನ್ನು ಸಾಮಾನ್ಯರಿಗೆ ಅರ್ಥವಾಗುವಂತೆ ತಲುಪಿಸುವ ಗಮಕಿಗಳು ವಿಮರ್ಶಕರಾಗಬೇಕು. ಸಾಹಿತ್ಯ ಪಂಡಿತರು ಹಾಗೂ ಗಮಕಿಗಳು ಒಟ್ಟಾಗಿ ಕಾರ್ಯನಿರ್ವಹಿಸಿದರೆ ಗಮಕ ಕಲೆ ಮತ್ತಷ್ಟು ಪ್ರಖರವಾಗಿ ಬೆಳೆಯಲಿದೆ ಎಂದು ಹೇಳಿದರು.ಸಮ್ಮೇಳನಾಧ್ಯಕ್ಷೆ ಶಶಿಕಲಾ ಶಿವಶಂಕರ್ ಮಾತನಾಡಿ ಯುವಜನರಲ್ಲಿ ಗಮಕ ಕಲೆಯ ಆಸಕ್ತಿ ಕಡಿಮೆಯಾಗುತ್ತಿರುವ ಬಗ್ಗೆ ಚಿಂತಿಸುವ ಬದಲು ಕಲೆ ಬೆಳೆಸಲು ರಚನಾತ್ಮಕ ಕಾರ್ಯಗಳಿಗೆ ಒತ್ತು ನೀಡಬೇಕು. ಬಾಲ್ಯದಲ್ಲಿಯೇ ಮಕ್ಕಳಿಗೆ ಕಾವ್ಯ ವಾಚನದ ಆಸಕ್ತಿ ಬೆಳೆಸುವ ವಾತಾವರಣ ನಿರ್ಮಿಸಬೇಕು. ಪ್ರತಿ ಮನೆಯಿಂದ ಒಬ್ಬ ಗಮಕಿಯನ್ನು ರೂಪಿಸುವ ಗುರಿ ಹೊಂದಬೇಕು ಎಂದರು.ಶಾಲೆಗಳಲ್ಲಿ ಸಂಗೀತ ಮತ್ತು ಸಾಹಿತ್ಯಾಸಕ್ತ ವಿದ್ಯಾರ್ಥಿಗಳನ್ನು ಗುರುತಿಸಿ ಗಮಕ ಕಲೆ ಪರಿಚಯಿಸಬೇಕು. ಗಮಕ ರೂಪಕ, ನೃತ್ಯ ರೂಪಕಗಳಿಗೆ ಅವಕಾಶ ಕಲ್ಪಿಸುವ ಜತೆಗೆ ಸಮೂಹ ಮಾಧ್ಯಮದ ಮೂಲಕ ಕಲೆಯನ್ನು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಬೇಕು ಎಂದು ಸಲಹೆ ನೀಡಿದರು.ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಗ್ರಾಮಸ್ಥರಾದ ಸಂಪತ್ ಕುಮಾರ್, ಕುಮಾರೇಗೌಡ, ಲೋಕೇಶಪ್ಪ ಮತ್ತಿತರರು ಉಪಸ್ಥಿತರಿದ್ದರು. ಸಮಾರೋಪದಲ್ಲಿ ಖ್ಯಾತ ಗಮಕಿ ರಾಮಸುಬ್ರಾಯ ಸೇಟ್, ಶಾರದಾ ಮಂಜುನಾಥ್ ಹಾಗೂ ಕೆ.ವಿ. ಚಂದ್ರಮೌಳಿ ಅವರಿಗೆ ಗಮಕ ಕಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಿಲ್ಲೆಯ ಒಂಬತ್ತು ಗಮಕಿಗಳಿಗೆ ಗಮಕ ಸಿರಿ ಹಾಗೂ 10 ಸಂಗೀತಗಾರರಿಗೆ ಕನ್ನಡ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.