ಕೇವಲ ಇಂಜಿನಿಯರ್, ವೈದ್ಯರಾಗಬೇಕೆಂಬ ಪರಿಮಿತಿ ವಿಸ್ತರಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕೇವಲ ಇಂಜಿನಿಯರ್, ವೈದ್ಯರಾಗಬೇಕೆಂಬ ಪರಿಮಿತಿ ವಿಸ್ತರಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಜೇವರ್ಗಿ ರಸ್ತೆ ಕೋಟನೂರ ಮಠದ ಹತ್ತಿರದ ಗುರುಪಾದೇಶ್ವರ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ವಿಧ್ಯಾರ್ಥಿಗಳ ಬೀಳ್ಕೊಡುಗೆ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂಜಿನಿಯರಿಂಗ್, ಮೆಡಿಕಲ್ ಕೋರ್ಸ್‌ ಹೊರತುಪಡಿಸಿ ಹತ್ತು ಹಲವು ಮಾರ್ಗಗಳಿವೆ. ವಿದ್ಯಾರ್ಥಿಗಳ ಆಯ್ಕೆ ಸರಿಯಾಗಿರಬೇಕು. ಬೇರೆಯವರನ್ನು ಅನುಸರಿಸಬಾರದು. ಈ ವಿಷಯದಲ್ಲಿ ಪಾಲಕರು ಕೂಡ ಮಕ್ಕಳ ಮೇಲೆ ಒತ್ತಡ ಹೇರಬಾರದು ಎಂದು ಸಲಹೆ ನೀಡಿದರು.

ಮೂಲ ವಿಜ್ಞಾನದತ್ತ ಚಿತ್ತ ಹರಿಸಬೇಕು. ಕೇವಲ ನೌಕರಿಗಾಗಿ ಓದು ಅಲ್ಲ. ದೇಶಸೇವೆ, ಸಮಾಜ ಸೇವೆಯತ್ತ ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಭಾರತೀಯ ಪ್ರಾಚೀನ ಜ್ಞಾನ ಪರಂಪರೆ ಅದ್ಭುತವಾಗಿದೆ. ಜೋತಿಷ್ಯ ಶಾಸ್ತ್ರ ಬಳಸಿ ವಿಜ್ಞಾನಿಗಳು ಸೆಟ್ ಲೈಟ್ ಹಾರಿಸಲು ಸಿದ್ಧತೆ ನಡೆಸಿದ್ದಾರೆ. ಪುರುಷ ಸೂಕ್ತದಲ್ಲಿ ವಿದ್ಯುತ್ ತಯಾರಿಸುವ ವಿಧಾನದ ಬಗ್ಗೆ ಉಲ್ಲೇಖವಿದೆ. ಪುರುಷ ಸೂಕ್ತ ಅಧ್ಯಯನ ಮಾಡಿ ಅದರಲ್ಲಿ ಉಲ್ಲೇಖಿಸಿದ ಮಾದರಿಯಲ್ಲಿ ಗುಜರಾತ ರಾಜ್ಯದಲ್ಲಿ ವಿದ್ಯುತ್ ತಯಾರಿಸಲು ಚಿಂತನೆ ನಡೆದಿದೆ. ವಿಜ್ಞಾನಿಗಳು ಇಂದು ಸಂಶೋಧನೆ ಮಾಡಿದ ಅಂಶಗಳು ಸಹಸ್ರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಬರೆದಿಟ್ಟಿದ್ದಾರೆ ಎಂದು ಹೇಳಿದರು.

ಸಂಸ್ಥೆ ಅಧ್ಯಕ್ಷ ವಾದಿರಾಜ ವ್ಯಾಸಮುದ್ರ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ ಮಾತನಾಡಿದರು. ಕಾಲೇಜಿನ ಉಪಾಧ್ಯಕ್ಷ ದೇವಿಂದ್ರಪ್ಪ ಆವಂಟಿ, ಕಾರ್ಯ ದರ್ಶಿ ಗುರುಪ್ರಸಾದ್ ಅಂಬಲಗಿ, ನಿರ್ದೆಶಕರಾದ ಸಿದ್ರಾಮಯ್ಯ ಹಿರೇಮಠ, ಚನ್ನಬಸಯ್ಯ ಗುರುವಿನ್, ಮೋಹಿನಿ ಬೂದುರ, ಅನಘಾ ವ್ಯಾಸ ಮುದ್ರ್ , ಉಪನ್ಯಾಸಕರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.