ಕಲಾದಗಿ: ಯಡಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಯುವ ಮುಖಂಡ ಸಂಗಣ್ಣ ನಲವತ್ತವಾಡ (45) ಅವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ ಘಟನೆ ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ.
ಕನ್ನಡಪ್ರಭ ವಾರ್ತೆ ಕಲಾದಗಿ
ಯಡಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಯುವ ಮುಖಂಡ ಸಂಗಣ್ಣ ನಲವತ್ತವಾಡ (45) ಅವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ ಘಟನೆ ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ.ಬೀಳಗಿ ಶಾಸಕ ಜೆ.ಟಿ. ಪಾಟೀಲರ ಪರಮಾಪ್ತ ಹಾಗೂ ಗದ್ದನಕೇರಿ ಭಾಗದಲ್ಲಿ ಕಾಂಗ್ರೆಸ್ ಮುಖಂಡನಾಗಿದ್ದ ಸಂಗಣ್ಣ ನಲವತ್ತವಾಡ ಅವರು ರಾತ್ರಿ ಅಂಗಡಿಯಿಂದ ಮನೆಗೆ ಕಡಗೆ ಹೋಗುವಾಗ ದುಷ್ಕರ್ಮಿಗಳು ಕಾರಿನಿಂದ ಗುದ್ದಿ ಕೆಳಕ್ಕೆ ಬೀಳಿಸಿ ಮಾರಕಾಸ್ತ್ರಗಳಿಂದ ಮುಖದ ಮೇಲೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಎಸ್ಪಿ ಭೇಟಿ: ಕೊಲೆಯಾದ ಘಟನಾ ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್, ಡಿವೈಎಸ್ಪಿ ಗಜಾನನ ಸುತಾರ, ಸಿಪಿಐ ರಾಮಣ್ಣ ಬಿರಾದಾರ, ಪಿಎಸೈ ಪ್ರವೀಣ ಬೀಳಗಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ, ಕೊಲೆ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಕೊಲೆಗೆ ಸ್ಪಷ್ಟ ಕಾರಣ ಇನ್ನೂ ತಿಳಿದಿಲ್ಲ, ಆಸ್ತಿ ವೈಷಮ್ಯ ಎಂದು ಹೇಳಲಾಗುತ್ತಿದೆ, ಈ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಜ್ಜನ ಸಂಗಣ್ಣ ಹಿನ್ನೆಲೆ: ಗದ್ದನಕೇರಿ ಸುತ್ತ ಮುತ್ತ ಪ್ರದೇಶದಲ್ಲಿ ಸಂಗಣ್ಣ ನಲವತ್ತವಾಡ ಅವರು ಜನಪ್ರೀಯರಾಗಿದ್ದರು. ಯಡಹಳ್ಳಿ ಗ್ರಾಪಂ ಅಧ್ಯಕ್ಷರಾಗಿ, ನಂತರ ಸದಸ್ಯರಾಗಿದ್ದರು. ಅವರ ಪತ್ನಿ ಮಾಲಾ ನಲವತ್ತವಾಡ ಗ್ರಾಪಂ ಅಧ್ಯಕ್ಷೆಯಾಗಿದ್ದರು. ಗದ್ದನಕೇರಿ ಕ್ರಾಸ್ ನಲ್ಲಿನ ಪುಷ್ಪಕ್ ಲಾಡ್ಜ್ ಹಾಗೂ ನಿಸರ್ಗ ಬಾರ್ ಲೀಸ್ಗೆ ಪಡೆದು ನಡೆಸುತ್ತಿದ್ದರು. ಸಂತಾಪ: ಶಾಸಕ ಜೆ.ಟಿ.ಪಾಟೀಲ ಸೇರಿದಂತೆ ಅನೇಕ ಮುಖಂಡರು ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ.