ಸಾರಾಂಶ
ಬೌದ್ಧ ಧರ್ಮದಲ್ಲಿ ದ್ವೇಷ, ಅಸೂಯೆ, ರಾಗ- ದ್ವೇಷಗಳು ಇರಬಾರದು. ಎಲ್ಲರನ್ನೂ ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು. ಬೌದ್ಧ ಧರ್ಮವನ್ನು ಅಪ್ಪಿಕೊಳ್ಳುವ ಮೂಲಕ ಮನುಷ್ಯ ಅನಿಷ್ಠ ಚಟಗಳಿಂದ ದೂರ ಸರಿಯಬೇಕು. ಆಗ ಮಾತ್ರ ಬೌದ್ಧ ಧರ್ಮಕ್ಕೆ ನಿಜವಾದ ಅರ್ಥ ಸಾಧ್ಯವಾಗುತ್ತದೆ .
ಕನ್ನಡಪ್ರಭ ವಾರ್ತೆ ಮದ್ದೂರು
ಭಾರತದಲ್ಲಿ ಜನ್ಮತಾಳಿದ ಬುದ್ಧ ತನ್ನ ತತ್ವ ಮತ್ತು ಆದರ್ಶಗಳ ಮೂಲಕ ಇಡೀ ಪ್ರಪಂಚಕ್ಕೆ ಬೆಳಕು ಚೆಲ್ಲಿದ್ದಾನೆ ಎಂದು ಪೂಜ್ಯ ನಾಗರತ್ನ ಬಂತೆಜಿ ಭಾನುವಾರ ಹೇಳಿದರು.ತಾಲೂಕಿನ ಮಾಲಗಾರನಹಳ್ಳಿಯಲ್ಲಿ ರಾಜ್ಯ ಶೋಷಿತ ಸಮುದಾಯದ ವೇದಿಕೆ ರಾಜ್ಯಾಧ್ಯಕ್ಷ ಸುರೇಶ್ ಕಂಠಿ ಅವರ ಡಾ. ಜಿ. ಪರಮೇಶ್ವರ್ ಸದನದಲ್ಲಿ ನಡೆದ ದಮ್ಮಚಕ್ಕ ಕಾರ್ಯಕ್ರಮದಲ್ಲಿ ಬುದ್ಧ ಮತ್ತು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉಪನ್ಯಾಸ ನೀಡಿದರು.
ಪ್ರಪಂಚದಲ್ಲಿ ಸರ್ವರಿಗೂ ಸಮಪಾಲು ಮತ್ತು ಸಮಬಾಳು ಎನ್ನುವ ಸಮಾನತೆ ಸಾರಿದ ಧರ್ಮ ಇದ್ದರೆ ಅದು ಬೌದ್ಧ ಧರ್ಮ. ಯಾರನ್ನು ದ್ವೇಷಿಸದೆ ಎಲ್ಲರನ್ನೂ ಪ್ರೀತಿಸುವ ಬೌದ್ಧ ಧರ್ಮದಲ್ಲಿ ಯಾವುದೇ ಮೇಲು- ಕೀಳು ಎಂಬ ಭಾವನೆ ಇಲ್ಲ. ಧರ್ಮವನ್ನು ಅನುಸರಿಸುವ ಪ್ರತಿಯೊಬ್ಬ ವ್ಯಕ್ತಿಯೂ ಪ್ರಾಣಿ- ಪಕ್ಷಿಗಳಿಗೆ ಹಿಂಸೆಮಾಡಬಾರದು ಎಂದು ಕಿವಿಮಾತು ಹೇಳಿದರು.ಬೌದ್ಧ ಧರ್ಮದಲ್ಲಿ ದ್ವೇಷ, ಅಸೂಯೆ, ರಾಗ- ದ್ವೇಷಗಳು ಇರಬಾರದು. ಎಲ್ಲರನ್ನೂ ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು. ಬೌದ್ಧ ಧರ್ಮವನ್ನು ಅಪ್ಪಿಕೊಳ್ಳುವ ಮೂಲಕ ಮನುಷ್ಯ ಅನಿಷ್ಠ ಚಟಗಳಿಂದ ದೂರ ಸರಿಯಬೇಕು. ಆಗ ಮಾತ್ರ ಬೌದ್ಧ ಧರ್ಮಕ್ಕೆ ನಿಜವಾದ ಅರ್ಥ ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವೇದಿಕೆ ರಾಜ್ಯಾಧ್ಯಕ್ಷ ಸುರೇಶ್ ಕಂಠಿ, ಬೌದ್ಧ ಉಪಾಸಕ ಸುದರ್ಶನ ಬೀದರ್, ಸಿದ್ದರಾಮಯ್ಯ, ಡಾ.ಸಿದ್ದರಾಜು, ಜಿಲ್ಲಾ ಕಾಂಗ್ರೆಸ ವಕ್ತಾರ ಸಿ.ಎಂ. ದ್ಯಾವಪ್ಪ, ಜಿಲ್ಲಾ ಮುಖಂಡ ಶಂಕರಲಿಂಗೇಗೌಡ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ .ಉಮಾಶಂಕರ್, ಗ್ರಾಪಂ ಅಧ್ಯಕ್ಷ ಈಶ್ವರ್, ಮಾಜಿ ಅಧ್ಯಕ್ಷರಾದ ಮಹಾದೇವ್, ರವಿಕುಮಾರ್, ಚಂದ್ರಹಾಸ್ ಮತ್ತಿತರರು ಪಾಲ್ಗೊಂಡಿದ್ದರು.