ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಬುದ್ಧ ಎಂದರೇ ದೇವರಲ್ಲ, ಬುದ್ಧ ಎಂದರೇ ಅರಿವಿನ, ಜ್ಞಾನದ ಬೆಳಕು. ಮೂಢ ನಂಬಿಕೆಗಳಿಂದ ಹೊರಬಂದು ಅರಿವಿನ ಭಾರತ ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.ನಗರದ ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರದಲ್ಲಿ ಬುದ್ಧವಿಹಾರ ನಿರ್ಮಾಣ ಸಮಿತಿಯ ಆಶ್ರಯದಲ್ಲಿ ೬೮ನೇ ಧಮ್ಮಚಕ್ರ ಪರಿವರ್ತನ ದಿನಾಚರಣೆ ಹಾಗೂ ವರ್ಷವಾಸ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ೨೫೦೦ ವರ್ಷಗಳ ಹಿಂದೆ ಜೂಜಾಟ, ಸುರಾಪಾನ, ಪ್ರಾಣಿಬಲಿ ಮುಂತಾದ ಅನಿಷ್ಠಗಳ ಮೂಲಕ ಸಮಾಜವು ನೈತಿಕವಾಗಿ ಅಧಃಪತನಗೊಂಡಿದ್ದ ಮತ್ತು ದೇವರನ್ನು ಒಲಿಸಿಕೊಳ್ಳಲು ಮೌಢ್ಯವೆಂಬ ಅಂಧಃಕಾರದಲ್ಲಿ ಮುಳುಗಿದ್ದ ಸಮಯದಲ್ಲಿ ಬುದ್ಧನೆಂಬ ಹೊಸ ಬೆಳಕೊಂದು ಮೂಡಿಬಂತು. ಭಗವಾನ ಬುದ್ಧರು ದೇವರು, ಆತ್ಮ, ಪುನರ್ಜನ್ಮಗಳನ್ನು ನಿರಾಕರಿಸಿದರು. ಕರ್ಮಸಿದ್ಧಾಂತ ಒಪ್ಪಿಕೊಳ್ಳಲಿಲ್ಲ. ಬುದ್ಧನ ಧಮ್ಮದಲ್ಲಿ ದೇವರಿಗೆ ಸ್ಥಾನವಿಲ್ಲ, ನೈತಿಕತೆಗೆ ಸ್ಥಾನವಿದೆ ಎಂದು ತಿಳಿಸಿದರು.ಭಂತೆ ಡಾ.ಶಾಕು ಬೋಧಿಧಮ್ಮ ಸಾನ್ನಿಧ್ಯ ವಹಿಸಿ ಮಾತನಾಡಿ, ಶತಮಾನಗಳಿಂದ ಶೋಷಣೆಗೊಳಗಾಗಿರುವ ದಲಿತ ಮತ್ತು ಶೋಷಿತ ಸಮುದಾಯಗಳು ಭಾರತದ ನಿಜವಾದ ಚರಿತ್ರೆ ಓದಬೇಕು. ಶೋಷಣೆಮುಕ್ತ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ನಮ್ಮ ಮಹಾಪುರುಷರ ಚರಿತ್ರೆ ತಿಳಿದುಕೊಳ್ಳಬೇಕು. ಇತಿಹಾಸದ ಅರಿವಿಲ್ಲದ ಈ ಸಮುದಾಯಗಳು ಬುದ್ಧ, ಬಸವ, ಫುಲೆ, ಶಾಹು, ಅಂಬೇಡ್ಕರ್ ಕಂಡ ಸಮಸಮಾಜದ ಕನಸನ್ನು ಸಾಕಾರಗೊಳಿಸಬೇಕು. ಬುದ್ಧ ಭಾರತವನ್ನು ಕಟ್ಟಬೇಕು ಎಂದರು.ಬುದ್ಧವಿಹಾರ ನಿರ್ಮಾಣ ಸಮಿತಿಯ ಅಧ್ಯಕ್ಷ ರಾಜಶೇಖರ ಯಡಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬುದ್ಧವಿಹಾರದಲ್ಲಿ ಧಾರ್ಮಿಕ ಚಟುವಟಿಕೆಗಳು ಮಾತ್ರವಲ್ಲದೆ ಬಡಮಕ್ಕಳ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅವುಗಳನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲು ಯೋಜಿಸಲಾಗಿದೆ. ಬುದ್ಧವಿಹಾರವು ಯಾರದೂ ಸ್ವಂತ ಆಸ್ತಿಯಲ್ಲ. ಇದು ಸಮಾಜದ ಆಸ್ತಿಯಾಗಿದ್ದು, ವಿಹಾರದ ಎಲ್ಲ ಚಟುವಟಿಕೆಗಳಿಗೆ ಪ್ರತಿಯೊಬ್ಬರ ಸಹಕಾರವೂ ಅಗತ್ಯ ಎಂದು ತಿಳಿಸಿದರು.
ಬುದ್ಧವಿಹಾರ ನಿರ್ಮಾಣ ಸಮಿತಿಯ ಉಪಾಧ್ಯಕ್ಷ ಶಶಿಕಾಂತ ಹೊನವಾಡಕರ ಮಾತನಾಡಿದರು. ಇದೇ ಸಂದರ್ಭದಲ್ಲಿ ಬುದ್ಧವಿಹಾರ ನಿರ್ಮಾಣ ಮತ್ತು ಅಭಿವೃದ್ಧಿಗೆ ಶ್ರಮಿಸಿದ ಪೀರಪ್ಪ ನಡುವಿನಮನಿ ದಂಪತಿಗಳು, ಚಿದಾನಂದ ನಿಂಬಾಳ, ಅಯ್ಯಪ್ಪ ಸಿಂಧೂರ, ಕೃಷ್ಣಪ್ಪ ಬಡಳ್ಳಿ, ಮಲ್ಲಪ್ಪ ಸವನಳ್ಳಿ, ಜಿ.ಬಿ. ಹೆಗಡ್ಯಾಳ ಅವರ ಕುಟುಂಬಸ್ಥರಿಗೆ ಬುದ್ಧವಿಹಾರ ನಿರ್ಮಾಣ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.ಇದಕ್ಕೂ ಮುನ್ನ ಮನಗೂಳಿ ರಸ್ತೆಯ ಡಾ.ಅಂಬೇಡ್ಕರ್ ಭವನದಿಂದ ಬುದ್ಧವಿಹಾರದ ವರೆಗೆ ನಡೆದ ಭಗವಾನ ಬುದ್ಧ ಮತ್ತು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗಳ ಭವ್ಯ ರಥಯಾತ್ರೆಗೆ ಮಾಜಿ ಶಾಸಕರಾದ ಪ್ರೊ.ರಾಜು ಆಲಗೂರ, ಮಹಾನಗರ ಪಾಲಿಕೆ ಸದಸ್ಯರಾದ ಆರತಿ ಶಹಾಪುರ, ಪರಶುರಾಮ ಹೊಸಮನಿ ಅವರು ಚಾಲನೆ ನೀಡಿದರು. ಉಪಾಸಕಿಯರಿಂದ ಧಮ್ಮಧ್ವಜಾರೋಹಣ ನೆರವೇರಿತು. ನಿರ್ಮಾಣ ಸಮಿತಿಯ ನಾಗರಾಜ ಲಂಬು, ರಾಜೇಶ ತೊರವಿ, ದಶವಂತ ಗುನ್ನಾಪುರ, ಅಪ್ಪು ನಾಗಠಾಣ, ಆನಂದ ಔದಿ, ಅಡಿವೆಪ್ಪ ಸಾಲಗಲ್ಲ, ಆನಂದ, ಭಂತೆ ಬೋಧಿಚಕ್ಷು, ಭಂತೆ ಬೋಧಿದರ್ಪಣ, ಪ್ರಭುಗೌಡ ಪಾಟೀಲ, ಆರ್.ಡಿ.ಸೂಳಿಕೇರಿ, ವಿ.ಎ.ಪಾಟೀಲ, ಸುಧಾಕರ ಕನಮಡಿ, ಭೀಮಶಿ ಹಿಪ್ಪರಗಿ, ಅನಿಲ ಹೊಸಮನಿ, ಎಂ.ಬಿ.ಹಳ್ಳದಮನಿ, ರಮೇಶ ಹಳ್ಳಿ, ಕೆ.ಎಂ. ಶಿವಶರಣ, ಬಿ.ಎಸ್. ಬ್ಯಾಳಿ, ಚಿದಾನಂದ ಹೊನವಾಡಕರ, ಸಿ.ಆರ್. ತೊರವಿ, ಎಸ್.ಎಲ್. ಇಂಗಳೇಶ್ವರ, ಮಡಿವಾಳ ಯಾಳವಾರ, ಸಂಜು ಕಂಬಾಗಿ, ಚೆನ್ನು ಕಟ್ಟಿಮನಿ, ಸೋಮು ರಣದೇವಿ, ಮತಿನಕುಮಾರ ದೇವಧರ, ಸಂತೋಷ ಕಾಂಬಳೆ, ಲೋಹಿತ ಪಾರಣ್ಣವರ, ಉಮೇಶ ಹೆಂಡೆಗಾರ, ಮಣಿಕಂಠ ಸಾಗರ, ಸುಭಾಸ ಜುಮನಾಳ, ನಾಗರಾಜ ಲಿಂಗದಳ್ಳಿ, ದಯಾನಂದ ಹಾಲ್ಯಾಳ, ಶ್ರೀಧರ ಹಾಲ್ಯಾಳ, ಗಣೇಶ ಘಟಕಾಂಬಳೆ, ಸುರೇಶ ಬಬಲೇಶ್ವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.ಸಾಬು ಚಲವಾದಿ ವಂದಿಸಿದರು. ಪ್ರತಾಪ ಚಿಕ್ಕಲಕಿ ನಿರೂಪಿಸಿದರು.ಯುದ್ಧ ಬೇಡವೆಂದು ಸಾಮ್ರಾಜ್ಯವನ್ನೇ ತೊರೆದವರು ಬುದ್ಧ. ಯುದ್ಧದಿಂದಾಗುವ ಸಾವು ನೋವುಗಳಿಂದ ನೊಂದ ಸಾಮ್ರಾಟ ಅಶೋಕ ಎಂದಿಗೂ ಯುದ್ಧ ಮಾಡುವುದಿಲ್ಲವೆಂದು ಶಸ್ತ್ರತ್ಯಾಗ ಮಾಡಿದ. ಆತನ ಸಮಯದಲ್ಲಿ ೧೫ ದೇಶಗಳು ಭಾರತದಲಿದ್ದು, ಪ್ರಬುದ್ಧ ಭಾರತವಾಗಿತ್ತು. ಮಹಿಳೆಯರ ಹಕ್ಕುಗಳಿಗಾಗಿ ಮಂತ್ರಿಪದವಿಯನ್ನು ಧಿಕ್ಕರಿಸಿ ಬಂದವರು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧಮ್ಮವನ್ನು ಸ್ವೀಕರಿಸುವ ಮೂಲಕ ಪ್ರಬುದ್ಧ ಭಾರತ ನಿರ್ಮಾಣದ ಕನಸು ಕಂಡಿದ್ದರು. ಬುದ್ಧ-ಅಂಬೇಡ್ಕರ್ ಕನಸಿನ ಪ್ರಬುದ್ಧ ಭಾರತವನ್ನು ನಿರ್ಮಿಸಬೇಕಿದೆ.
-ಸೋಮಲಿಂಗ ಗೆಣ್ಣೂರ, ಅಪರ ಜಿಲ್ಲಾಧಿಕಾರಿ.