ಸಂಪೂರ್ಣ ಸಾಕ್ಷರ ಸಮಾಜ ನಿರ್ಮಾಣ ಮಾಡಿ: ಎನ್. ಸುರೇಶಕುಮಾರ

| Published : Jun 13 2025, 06:33 AM IST

ಸಾರಾಂಶ

ಪ್ರತಿಯೊಬ್ಬರಿಗೂ ಅಕ್ಷರ ಜ್ಞಾನ ಹೊಂದಿದಾಗ ಉತ್ತಮ ಸಮಾಜ ನಿರ್ಮಾಣ ಮಾಡುವ ಜತೆಗೆ ಸಮಾಜದಲ್ಲಿ ನಡೆಯುತ್ತಿರುವ ಮೂಢನಂಬಿಕೆ, ಬಾಲ್ಯವಿವಾಹದಂತಹ ಪದ್ಧತಿಗಳನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ.

ಹಿರೇಕೆರೂರು: ಪ್ರತಿಯೊಬ್ಬರಿಗೂ ಅಕ್ಷರ ಜ್ಞಾನದ ಅವಶ್ಯಕತೆ ಇದ್ದು, ಸಂಪೂರ್ಣ ಸಾಕ್ಷರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಜವಾಬ್ದಾರಿ ಹೊಂದಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎನ್. ಸುರೇಶಕುಮಾರ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಸಾಕ್ಷರತಾ ಸ್ವಯಂಸೇವಕರಿಗೆ ಆಯೋಜಿಸಿರುವ ಸಾಕ್ಷರತಾ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬರಿಗೂ ಅಕ್ಷರ ಜ್ಞಾನ ಹೊಂದಿದಾಗ ಉತ್ತಮ ಸಮಾಜ ನಿರ್ಮಾಣ ಮಾಡುವ ಜತೆಗೆ ಸಮಾಜದಲ್ಲಿ ನಡೆಯುತ್ತಿರುವ ಮೂಢನಂಬಿಕೆ, ಬಾಲ್ಯವಿವಾಹದಂತಹ ಪದ್ಧತಿಗಳನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮಕರಿ, ಕುಂಚೂರು, ಕೋಡ, ಮಾಸೂರು ಗ್ರಾಪಂ ವ್ಯಾಪ್ತಿಯ 59 ಗ್ರಾಮಗಳಲ್ಲಿ ಸಾಕ್ಷರತಾ ಕಲಿಕಾ ಕೇಂದ್ರಗಳ ಸ್ವಯಂಸೇವಕರಿಗೆ ಎರಡು ದಿನಗಳ ಸಾಕ್ಷರತಾ ತರಬೇತಿ ನೀಡಲಾಗುತ್ತಿದೆ. ಸ್ವಯಂಸೇವಕರು ತಮ್ಮ ಗ್ರಾಮಗಳಲ್ಲಿ ಹದಿನೆಂಟು ವರ್ಷಕ್ಕೂ ಮೇಲ್ಪಟ್ಟ ಅನಕ್ಷರಸ್ಥರಿಗೆ ಪ್ರತಿದಿವಸ ಒಂದು ಗಂಟೆ ಸಾಯಂಕಾಲದ ವೇಳೆ ಅಕ್ಷರ ಕಲಿಸುವ ಕಾರ್ಯ ಇದಾಗಿದೆ. ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಸಮರ್ಪಕ ಮಾಹಿತಿ ಹಾಗೂ ತರಬೇತಿ ಪಡೆದುಕೊಂಡು, ಅನಕ್ಷರಸ್ಥ ಸಾಮಾನ್ಯ ಜನರಿಗೆ ಪ್ರತಿನಿತ್ಯ ಜೀವನಕ್ಕೆ ಸಂಬಂಧಿಸಿದ ವ್ಯವಹಾರ ಮಾಡಲು, ಸಹಿ ಮಾಡಲು, ಓದಲು ಬರೆಯಲು ಕಲಿಸಿದರೆ ಅವರ ಜೀವನ ಸುಖಕರವಾಗಿರುತ್ತದೆ. ಆದ್ದರಿಂದ ಸ್ವಯಂ ಸೇವಕರು ನಿಷ್ಠೆಯಿಂದ, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಮಕರಿ, ಕುಂಚೂರು, ಕೋಡ, ಮಾಸೂರು ಗ್ರಾಪಂ ವ್ಯಾಪ್ತಿಯ 59 ಸ್ವಯಂಸೇವಕರು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೇಘರಾಜ ಮಾಳಗಿಮನಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕುಮಾರ ಪುಟ್ಟಪ್ಪಗೌಡ್ರ, ಕಾರ್ಯದರ್ಶಿ ರಮೇಶ್ ಪೂಜಾರ, ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿ ಜೆ.ಬಿ. ಜೋಗಿಹಳ್ಳಿ, ಬಿಆರ್‌ಪಿ ರವಿಕುಮಾರ್, ಮಾಸೂರು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಜು, ಸಂಪನ್ಮೂಲ ವ್ಯಕ್ತಿಗಳಾದ ಆರ್.ಎನ್. ದೊಣ್ಣೇರ, ರಾಜು ಅಡಿವೆಪ್ಪನವರ, ವಿ.ಬಿ. ಆಲದಕಟ್ಟಿ ಇತರರಿದ್ದರು.ಇಂದು ಹಲವೆಡೆ ವಿದ್ಯುತ್ ವ್ಯತ್ಯಯ

ರಾಣಿಬೆನ್ನೂರು: ತಾಲೂಕಿನ ಬೇಲೂರು/ಹೀಲದಹಳ್ಳಿ ವಿದ್ಯುತ್ ಕೇಂದ್ರದ ನಿರ್ವಹಣಾ ಕಾಮಗಾರಿ ಪ್ರಯುಕ್ತ ಜೂ. 13ರಂದು ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಹಲವೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ.ಶುಕ್ರವಾರ ಬೇಲೂರು, ಹೀಲದಹಳ್ಳಿ, ಅಂಕಸಾಪುರ, ಉದಗಟ್ಟಿ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಆದರೆ ಎಲ್ಲ ಕೃಷಿ/ನೀರಾವರಿ ಪಂಪಸೆಟ್‌ಗಳ 11 ಕೆವಿ ಮಾರ್ಗಗಳಿಗೆ ವೇಳೆ ಬದಲಾವಣೆ ಮಾಡಿ ಹಿಂದಿನ ದಿನದ ರಾತ್ರಿ ಪಾಳಿಯಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಹೆಸ್ಕಾಂ ಉಪವಿಭಾಗ- 2ರ ಕಚೇರಿ ಪ್ರಕಟಣೆ ತಿಳಿಸಿದೆ.ತ್ರೈಮಾಸಿಕ ನಿರ್ವಹಣೆ: ತಾಲೂಕಿನ ಹೊಸಹೊನ್ನತ್ತಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕೆಲಸದ ಪ್ರಯುಕ್ತ ಜೂ. 13ರಂದು ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಕುದರಿಹಾಳ, ಹರನಗಿರಿ, ಚಿಕ್ಕಹರಳಹಳ್ಳಿ, ನೂಕಾಪುರ, ಯಲ್ಲಾಪುರ, ಚೌಡಯ್ಯದಾನಪುರ, ಹನುಮಾಪುರ, ಹೊನ್ನತ್ತಿ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಗ್ರಾಹಕರು ಸಹಕರಿಸಬೇಕು ಎಂದು ಹೆಸ್ಕಾಂ ಉಪ ವಿಭಾಗ-1ರ ಕಚೇರಿ ಪ್ರಕಟಣೆ ತಿಳಿಸಿದೆ.