ಸಾರಾಂಶ
ರಾಮನಗರ: ಮಹಾತ್ಮ ಗಾಂಧೀಜಿ ಅವರ ಪುಣ್ಯಸ್ಮರಣೆ ಅಂಗವಾಗಿ ಸೌಹಾರ್ದ ಕರ್ನಾಟಕ ವಿಶ್ವ ಮಾನವ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ನಗರದ ಐಜೂರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮಹಾತ್ಮನನ್ನು ಸ್ಮರಿಸಿ ಗೌರವ ಸಲ್ಲಿಸಿದರು.
ವೃತ್ತದಲ್ಲಿ ಜಮಾಯಿಸಿದ ಅವ್ವೇರಹಳ್ಳಿ ದಾಸೋಹ ಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಗಾಂಧೀಜಿ ಹಾಗೂ ಸೌಹಾರ್ದದ ಪರವಾಗಿ ಘೋಷಣೆಗಳನ್ನು ಕೂಗಿದರು. ಅಲ್ಲದೆ,ನಾಡಿನ ಸೌಹಾರ್ದ ಕದಡುತ್ತಿರುವ ಘಟನೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಸಂಘಟನೆಗಳ ಮುಖಂಡರು, ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಪಠಿಸಿದರು.
ಈ ವೇಳೆ ಮಾತನಾಡಿದ ಅವೇರಹಳ್ಳಿ ದಾಸೋಹ ಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಸಮಾಜದಲ್ಲಿ ಸೌಹಾರ್ದ ಜೀವಂತವಾಗಿದ್ದಾಗ ಮಾತ್ರ ಜನ ಶಾಂತಿ-ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು.ವಿಶ್ವ ಮಾನವ ವೇದಿಕೆ ಸಮನ್ವಯ ಸಮಿತಿ ವೇದಿಕೆ ಜಿಲ್ಲಾ ಸಂಚಾಲಕ ಬಿ.ಬಿ. ರಾಘವೇಂದ್ರ ಮಾತನಾಡಿ, ಪ್ರಪಂಚದಲ್ಲಿ ಮನುಷ್ಯಕ್ಕಿಂತ ದೊಡ್ಡ ಧರ್ಮ ಮತ್ತೊಂದಿಲ್ಲ. ಈ ನಿಟ್ಟಿನಲ್ಲಿ ಗಾಂಧೀಜಿ ಅವರು ಸಾರಿದ ಸೌಹಾರ್ದದ ಮೌಲ್ಯಗಳನ್ನು ಸಮಾಜ ಅಳವಡಿಸಿಕೊಳ್ಳಬೇಕು. ಯಾವುದೇ ತಾರತಮ್ಯವಿಲ್ಲದೆ ಎಲ್ಲರೂ ಸಹೋದರರಂತೆ ಬದುಕ ಬೇಕು ಎಂದರು.
ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ, ಕೋಮು ರಾಜಕಾರಣವನ್ನು ಮುನ್ನೆಲೆಗೆ ತಂದು ಅಭಿವೃದ್ಧಿ ವಿಷಯಗಳ ಕುರಿತ ಚರ್ಚೆಯನ್ನು ನಗಣ್ಯಗೊಳಿಸಲಾಗುತ್ತಿದೆ. ಇದು ಬಹುತ್ವ ಹಾಗೂ ಸೌಹಾರ್ದ ಭಾರತೀಯತ್ವಕ್ಕೆ ಅಪಾಯಕಾರಿ. ಇದಕ್ಕೆ ಗಾಂಧೀಜಿ ಹಾಗೂ ಕುವೆಂಪು ಅವರ ವಿಚಾರಗಳಲ್ಲಿ ಪರಿಹಾರವಿದೆ ಎಂದರು.ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಸಿ.ಆರ್.ನಾಗೇಶ್, ಸಿಐಟಿಯು ಯೋಗೇಶ್, ದಸಂಸ ಸಂಚಾಲಕ ಪುನೀತ್ರಾಜ್, ಮುಖಂಡರಾದ ಮೈಕೊ ಮಂಜುನಾಥ್, ರಹಮತ್, ಅಶೋಕ್, ಪುಷ್ಪಲತಾ, ಇಬ್ರಾಹಿಂ, ಭಾಗ್ಯಮ್ಮ, ಸಾವಿತ್ರಮ್ಮ ಮತ್ತಿತರರು ಹಾಜರಿದ್ದರು.31ಕೆಆರ್ ಎಂಎನ್ 8.ಜೆಪಿಜಿ
ರಾಮನಗರದ ಐಜೂರು ವೃತ್ತದಲ್ಲಿ ಸೌಹಾರ್ದ ಕರ್ನಾಟಕ ವಿಶ್ವ ಮಾನವ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಮಾನವ ಸರಪಳಿ ನಿರ್ಮಿಸಿ ಮಹಾತ್ಮನನ್ನು ಸ್ಮರಿಸಿ ಗೌರವ ಸಲ್ಲಿಸಿದರು.