ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಯ ಅನುದಾನ ತಂದು ವಾರ್ಡ್‌ಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು

ನವಲಗುಂದ: ಗ್ರಾಮದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ. ನಿಗದಿತ ಸಮಯದಲ್ಲಿ ಗುಣಮಟ್ಟದ ಸಿಸಿ ರಸ್ತೆ ನಿರ್ಮಾಣ ಮಾಡಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಗ್ರಾಪಂ ಅಧ್ಯಕ್ಷೆ ನಿರ್ಮಲಾ ದ್ಯಾವನಗೌಡ್ರ ಹೇಳಿದರು.

ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಪಂನ 4ನೇ ವಾರ್ಡ್‌ನಲ್ಲಿ 15ನೇ ಹಣಕಾಸಿನ ಅಡಿಯಲ್ಲಿ ಸಿಸಿ ರಸ್ತೆ ಕಾಮಗಾರಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಗ್ರಾಮದಲ್ಲಿಯ ವಾರ್ಡ್‌ಗಳಿಗೆ ಅಗತ್ಯವಿರುವ ಮೂಲ ಸೌಕರ್ಯ ಹಂತ ಹಂತವಾಗಿ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಯ ಅನುದಾನ ತಂದು ವಾರ್ಡ್‌ಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದರು.

ಗ್ರಾಪಂ ಉಪಾಧ್ಯಕ್ಷೆ ಗಂಗಮ್ಮ ರೋಗಿ, ಸದಸ್ಯರಾದ ಮಹಾದೇವಿ ಹಂಗರಕಿ, ಮಧು ಹುಬ್ಬಳ್ಳಿ, ರೋಹಿತ್ ಮತ್ತಿಹಳ್ಳಿ, ಅಶೋಕ ಸ್ವಾದಿ, ಪಿಡಿಒ ರೇಣುಕಾ ಚಿತ್ತಾಪುರ ಹಾಗೂ ಗ್ರಾಮಸ್ಥರು, ಪಂಚಾಯಿತಿ ಸಿಬ್ಬಂದಿಗಳು ಇದ್ದರು.