ನರಗುಂದ: ವಿದ್ಯಾರ್ಥಿಗಳು ಕಲಿಕೆ ಸಮಯದಲ್ಲಿ ಹೆಚ್ಚಿನ ಸಮಯ ಅಧ್ಯಯನಕ್ಕೆ ಮೀಸಲಿಟ್ಟರೆ ಉತ್ತಮ ಸಂಸ್ಕಾರದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಪ್ರಭಕ್ಕ ಹೇಳಿದರು.

ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ವಿದ್ಯಾಪೀಠದ ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆ, ಗುರುಬಸವ ಪ್ರೌಢಶಾಲೆ ಮತ್ತು ಗುರುಬಸವ ಜನ ಕಲ್ಯಾಣ ಸಂಸ್ಥೆಯ ಆಶ್ರಯದಲ್ಲಿ ವ್ಯಕ್ತಿತ್ವ ವಿಕಸನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿ ವ್ಯಕ್ತಿಗೆ ಸಂಸ್ಕಾರ ನೀಡಿದರೆ ಸುಸಂಸ್ಕೃತ ಮತ್ತು ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

ಯುವ ಪೀಳಿಗೆಗೆ ವ್ಯಕ್ತಿತ್ವ ವಿಕಸನದ ಅರಿವು ಅವಶ್ಯಕವಾಗಿದೆ. ಯುವಕರು ದುಶ್ಚಟಗಳಿಂದ ದೂರವಾಗಿ, ತಮ್ಮ ವ್ಯಕ್ತಿತ್ವವನ್ನು ಪ್ರಜ್ವಲಿಸುವ ಸೂರ್ಯನ ಕಿರಣದಂತೆ ಸದಾಕಾಲ ಸಮಾಜದಲ್ಲಿ ಪ್ರಕಾಶಿಸಬೇಕು. ಪ್ರತಿದಿನ ದಿನಪತ್ರಿಕೆ, ದೂರದರ್ಶನದಲ್ಲಿ, ಒಂದಿಲ್ಲೊಂದು ಆಘಾತಕಾರಿ ಘಟನೆಗಳು ಬೆಳಕಿಗೆ ಬರುತ್ತಿವೆ. ದುಷ್ಟಕೃತ್ಯದಲ್ಲಿ ಪಾಲ್ಗೊಳ್ಳುವವರು ವಿದ್ಯಾವಂತರೆ ಹೆಚ್ಚಾಗಿದ್ದಾರೆ ಎಂಬುದು ಗಂಭೀರ ವಿಷಯವಾಗಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ ಯುವಕರಿಗೆ ಸಂಸ್ಕಾರ, ಸಂಸ್ಕೃತಿ, ಗುರುವಿನಲ್ಲಿ ಭಕ್ತಿ, ಶ್ರದ್ಧೆ, ಹಿರಿಯರಲ್ಲಿ ಗೌರವ, ದೇಶಪ್ರೇಮ ಪ್ರವೃತ್ತಿ, ಸಾಮಾಜಿಕ ಕಳಕಳಿ, ಸಮಾನತೆ ಪ್ರಜ್ಞೆಯನ್ನು ಜಾಗೃತಗೊಳಿಸುವ ಕಾರ್ಯವಾಗಬೇಕೆಂದರು.

ಶಾಂತಲಿಂಗ ಶ್ರೀಗಳು ಮಾತನಾಡಿ, ಸಾಮಾಜಿಕ ಜಾಲತಾಣಗಳು ನಮ್ಮ ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ತಂದೆ- ತಾಯಿಗಳು ಗುರುಗಳ ಮಾದರಿಯಲ್ಲಿ ಮಕ್ಕಳ ಮನಸ್ಸನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಕೈಜೊಡಿಸುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ವೇಗ ನೀಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಾಣಿ ಇಂಗಳಹಳ್ಳಿ, ಗಾಯಿತ್ರಿ ಬೇವಿನಕಟ್ಟಿ, ಐಟಿಐ ಪ್ರಾಚಾರ್ಯ ಬಸವರಾಜ ಸಾಲಿಮಠ, ಶ್ರೀಕಾಂತ ದೊಡಮನಿ, ಶ್ರೀಧರ ಬೇವಿನಕಟ್ಟಿ, ಪ್ರಭುಲಿಂಗ ಶಿರಿಯಣ್ಣವರ, ಸೋಮಶೇಖರಪ್ಪ ಗೊರವರ, ಭೂಪತಿ ಧೋತರದ, ಪ್ರೀತಿ ಚಿಕ್ಕಮಠ, ಕಾಳಮ್ಮ ಕಮ್ಮಾರ, ಮಲ್ಲಪ್ಪ ಸಂಗಳದ, ಚಂದ್ರಕಾಂತ ಕಾಡದೇವರಮಠ, ಶಿವಾನಂದ ಪೂಜಾರ, ಮುಖ್ಯೋಪಾಧ್ಯಾಯರಾದ ಎಸ್.ವಿ. ವಸ್ತ್ರದ, ಎಸ್.ಎಂ. ಗಿರಿಯಪ್ಪಗೌಡ್ರ, ಸರಸ್ವತಿ ಗಾಣಗೇರ, ಎಫ್.ಎಚ್. ಮುಡಿಯಣ್ಣವರ, ಲಕ್ಷ್ಮಿ ಜಂಗೀನ, ಎಸ್.ಎಚ್. ಇಟಗಿ, ಮಂಜುಳಾ ದಿಂಡಿ, ಈಶ್ವರಪ್ಪ ಬಡಿಗೇರ, ಗಂಗಾಧರ ಫಾರಗೆ, ಶಂಕರಪ್ಪ ಕುಪ್ಪಸ್ತ ಇದ್ದರು.