ಸಾರಾಂಶ
- ನಗರಸಭೆ ವ್ಯಾಪ್ತಿಯಲ್ಲಿ 15 ನೇ ಹಣಕಾಸು ಯೋಜನೆ ಮತ್ತು ನಗರೋತ್ಥಾನ ಹಂತ-4 ರ ಕಾಮಗಾರಿಗಳಿಗೆ ಶಂಕುಸ್ಥಾಪನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಸ್ವಚ್ಛ ಹಾಗೂ ಸುಂದರ ನಗರ ನಿರ್ಮಿಸುವುದು ನಮ್ಮ ಗುರಿ ಎಂದು ರಾಜ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಭಾನುವಾರ ನಗರಸಭೆ ಆವರಣದಲ್ಲಿ ಆಯೋಜಿಸಿದ್ದ ನಗರಸಭೆ ವ್ಯಾಪ್ತಿಯಲ್ಲಿ 15 ನೇ ಹಣಕಾಸು ಯೋಜನೆ ಮತ್ತು ನಗರೋತ್ಥಾನ ಹಂತ-4 ರ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜಿಲ್ಲೆಯಾದ್ಯಂತ ಮಳೆಯಿಂದಾಗಿ ಅನೇಕ ರಸ್ತೆಗಳು ಹದಗೆಟ್ಟಿವೆ. ಇವುಗಳ ದುರಸ್ತಿಗೆ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಗೊಳಿಸಿ ಶೀಘ್ರವಾಗಿ ರಸ್ತೆ ದುರಸ್ತಿ ಕಾರ್ಯ ಹಾಗೂ ಹೊಸ ರಸ್ತೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸ ಲಾಗುವುದು ಎಂದರು.ಜಿಲ್ಲೆ ಪ್ರವಾಸಿ ಸ್ಥಳಗಳಿಗೆ ಪ್ರಸಿದ್ಧವಾಗಿದ್ದು ಜಿಲ್ಲೆಯಲ್ಲಿರುವ ಪ್ರತಿ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರಿಗೆ ಅನುಕೂಲ ವಾಗುವಂತೆ ಉತ್ತಮ ವ್ಯವಸ್ಥೆ ಕಲ್ಪಿಸಿ ಜಿಲ್ಲೆಯನ್ನು ಇನ್ನಷ್ಟು ಸುಂದರಗೊಳಿಸಲು ಕ್ರಮವಹಿಸಲಾಗಿದೆ ಎಂದ ಅವರು, ಸಾರ್ವಜನಿಕರ ಅಗತ್ಯತೆಗಳನ್ನು ಅರಿತು ಜಿಲ್ಲೆಯನ್ನು ಅಭಿವೃದ್ಧಿಗೊಳಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ ನಗರದ ಕತ್ರಿಮಾರಮ್ಮ ದೇವಸ್ಥಾನದಿಂದ ಬೋಳರಾಮೇಶ್ವರ ದೇವಸ್ಥಾನ ದವರೆಗೆ ₹50 ಲಕ್ಷ ವೆಚ್ಚದಲ್ಲಿ (ಐಜಿ ರಸ್ತೆ) ರಸ್ತೆ ವಿಭಜಕದಲ್ಲಿ 54 ಪೋಲ್ಗಳು, ಒಂದು ಹೈಮಾಸ್ಟ್ ಲೈಟ್ 120 ಲೈಟ್ ಗಳು ಬೀದಿ ದೀಪಗಳನ್ನು ಅಳವಡಿಸುವುದು. ₹45 ಲಕ್ಷ ವೆಚ್ಚದಲ್ಲಿ ಬೋಳರಾಮೇಶ್ವರ ದೇವಸ್ಥಾನದಿಂದ ರಾಂಪುರದ ವರೆಗೆ ಡಿವೈಡರ್ಗೆ ಅಕ್ಟಾಗನಲ್ ಪೋಲ್, 64 ಪೋಲ್ಗಳು, 124 ಲೈಟ್ಗಳು ಅಳವಡಿಸಲು. ಕಣಿವೆ ರುದ್ರೇಶ್ವರ ದೇವಸ್ಥಾನದಿಂದ ಕತ್ರಿಮಾರಮ್ಮ ದೇವಸ್ಥಾನ, ಶೃಂಗಾರ್ ಸರ್ಕಲ್, ತೊಗರಿಹಂಕಲ್ ಸರ್ಕಲ್, ನೆಲ್ಲೂರು ಗೇಟ್, ರಾಂಪುರ ಸರ್ಕಲ್ ವರೆಗೆ ₹2.93 ಕೋಟಿ ವೆಚ್ಚದಲ್ಲಿ ಟ್ಯೂಬಲರ್ ಪೋಲ್ ಮತ್ತು ಎಲ್.ಇ.ಡಿ ಬೀದಿ ದೀಪ ಅಳವಡಿಸಲಾಗುವುದು ಎಂದು ಹೇಳಿದರು.
ಚಿಕ್ಕಮಗಳೂರು ನಗರದ ವಿವಿಧೆಡೆ ಹೈಮಾಸ್ಟ್ ಮತ್ತು ಮಿನಿ ಮಾಸ್ಟ್ ಲೈಟ್, 80 ಡೆಕೋರೇಟಿವ್ ಪೋಲ್ ಗಳು, 32 ಹೈಮಾಸ್ಟ್ ಲೈಟ್, 346 ಲೈಟ್ಗಳು ಅಳವಡಿಸುವ ಕಾಮಗಾರಿಗಳಿಗೆ ಇಂದು ಶಂಕು ಸ್ಥಾಪನೆ ಮಾಡಲಾಗಿದೆ. ಈ ಕಾಮಗಾರಿಗಳನ್ನು ಗುಣಮಟ್ಟದಿಂದ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದರು. ನಗರಸಭಾ ಆವರಣದಲ್ಲಿನ ಉದ್ಯಾನವನದ ಸಮಗ್ರ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ₹ 2.80 ಕೋಟಿ ವೆಚ್ಚದಲ್ಲಿ ಮ್ಯೂಸಿಕಲ್ ಫೌಂಟೆನ್ ನಿರ್ಮಾಣ, ಪಾರ್ಕ್ ಅಭಿವೃದ್ಧಿ, ಪಾತ್ ವೇ ನಿರ್ಮಾಣ, ಗ್ಯಾಜಿಬೋ ನಿರ್ಮಾಣ, ಸ್ವಾಗತ ಕಮಾನು, ಆಸನ ವ್ಯವಸ್ಥೆ, ಓಪನ್ ಏರ್ ಥಿಯೇಟರ್ ಮತ್ತು ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.₹38.75 ಲಕ್ಷ ವೆಚ್ಚದಲ್ಲಿ ಚಿಕ್ಕಮಗಳೂರು ನಗರಸಭಾ ಕಚೇರಿ ಆವರಣದಲ್ಲಿ ಆಸ್ಪಿರೇಷನಲ್ ಶೌಚಾಲಯ ನಿರ್ಮಿಸ ಲಾಗಿದ್ದು, ಮಹಿಳೆಯರಿಗೆ 3 ಶೌಚಾಲಯಗಳು, ಮಹಿಳಾ ವಿಶೇಷ ಚೇತನರಿಗೆ ಒಂದು ಶೌಚಾಲಯ, ಪುರುಷರಿಗೆ 5 ಶೌಚಾಲಯಗಳು ಮತ್ತು 3 ಯುರಿನಲ್ಗಳು, ಪುರುಷ ವಿಶೇಷ ಚೇತನರಿಗೆ ಒಂದು ಶೌಚಾಲಯ ವಿಂಗಡಿಸಿ ನಿರ್ಮಿಸ ಲಾಗಿದೆ ಹಾಗೂ ₹14 ಲಕ್ಷ ವೆಚ್ಚದಲ್ಲಿ ನಗರಸಭಾ ಆವರಣದ ಶ್ರೀ ಗಣಪತಿ ದೇವಸ್ಥಾನವನ್ನು ಅಭಿವೃದ್ಧಿಪಡಿಸುವ ಕಾಮಗಾರಿ ಗಳನ್ನು 15ನೇ ಹಣಕಾಸು ಮತ್ತು ನಗರಸಭಾ ನಿಧಿಯಲ್ಲಿ ಪೂರ್ಣಗೊಳಿಸಲಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಹಂತ ಹಂತವಾಗಿ ನೆರವೇರಿಸಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗಾಗಿ ಶಂಕು ಸ್ಥಾಪನೆ ಮಾಡುವ ಪ್ರತಿಯೊಂದು ಕಾಮಗಾರಿಗಳ ಅನುಷ್ಠಾನ ಕಾರ್ಯ ವಿಳಂಬಗೊಳಿಸದೆ ಹಂತ ಹಂತವಾಗಿ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಹೇಳಿದರು.ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಮಾತನಾಡಿದರು. ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜು, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎಸ್. ಕೀರ್ತನಾ, ಉಪ ವಿಭಾಗಾಧಿಕಾರಿ ಎಸ್.ಆರ್. ರಶ್ಮಿ, ಭದ್ರಾ ಕಾಡಾ ಅಧ್ಯಕ್ಷ ಡಾ. ಅಂಶುಮಂತ್, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ಅಧ್ಯಕ್ಷ ಬಿ.ಎಚ್. ಹರೀಶ್, ನಗರಸಭೆ ಉಪಾಧ್ಯಕ್ಷೆ ಅನು ಮಧುಕರ್ ಉಪಸ್ಥಿತರಿದ್ದರು. 26 ಕೆಸಿಕೆಎಂ 3ಚಿಕ್ಕಮಗಳೂರು ನಗರಸಭೆ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಎಚ್.ಡಿ. ತಮ್ಮಯ್ಯ, ಸಿ.ಟಿ. ರವಿ, ಸುಜಾತಾ ಶಿವಕುಮಾರ್, ಬಿ.ಎಚ್. ಹರೀಶ್ ಇದ್ದರು.