ಶಿಗ್ಗಾಂವಿ: ಆರೋಗ್ಯವಂತ ಶರೀರವನ್ನು ಹೊಂದಿದವನು ಅರಮನೆ ಕಟ್ಟಬಲ್ಲ. ಅನಾರೋಗ್ಯವಂತ ಶರೀರ ಹೊಂದಿದವನು ಆತ್ಮದ ಸೆರೆಮನೆ ಕಟ್ಟಬಲ್ಲ ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಶಿವಾನಂದ ಮ್ಯಾಗೇರಿ ತಿಳಿಸಿದರು.ಪಟ್ಟಣದ ನಳಂದ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಂಸ್ಥೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾವಿರಾರು ಮದ್ಯವರ್ಜನೆ ಶಿಬಿರದ ಮೂಲಕ ಲಕ್ಷಾಂತರ ಮದ್ಯವ್ಯಸನಿಗಳನ್ನು ವ್ಯಸನಮುಕ್ತರನ್ನಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಮಾಡಿದೆ ಎಂದರು. ಇಂದಿನ ವಿದ್ಯಾರ್ಥಿಗಳು ನಾಳಿನ ನಾಡಿನ ಭವ್ಯ ಭಾರತ ನಿರ್ಮಾಪಕರು. ಸದೃಢ ದೇಹವುಳ್ಳವರು ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಆರೋಗ್ಯವೇ ಭಾಗ್ಯ ಎಂದು ಅರಿವು ಮೂಡಿಸುವ ಮೂಲಕ ಯುವಕರು ಹಾಗೂ ವಿದ್ಯಾರ್ಥಿಗಳು ಡ್ರಗ್ಸ್, ಬೀಡಿ, ಸಿಗರೇಟ್, ಗುಟ್ಕಾ, ತಂಬಾಕು, ಗಾಂಜಾ, ಮದ್ಯದಂತಹ ಚಟಗಳಿಗೆ ಮಾರುಹೋಗುತ್ತಿದ್ದಾರೆ.

ಪ್ರತಿವರ್ಷ ನಮ್ಮ ದೇಶದಲ್ಲಿ ೫ ಲಕ್ಷ ಜನರು ಮದ್ಯಪಾನದಿಂದ ಸಾಯುತ್ತಿದ್ದಾರೆ. ೧೪ರಿಂದ ೧೫ ಲಕ್ಷ ಜನ ಮಾದಕ ದ್ರವ್ಯ ಮಾರಕ ವ್ಯಸನ ಇನ್ನಿತರ ಚಟಗಳಿಗೆ ಬಲಿಯಾಗುತ್ತಾರೆ. ಅತಿಯಾದ ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳ ಮನಸ್ಥಿತಿಯೂ ಹಾಳಾಗುತ್ತಿದೆ ಎಂದರು.ವಿದ್ಯಾರ್ಥಿಗಳೆಲ್ಲರೂ ಹೆತ್ತವರನ್ನು ಗೌರವದಿಂದ ಕಾಣಬೇಕು. ಗುರು ಹಿರಿಯರಿಗೆ ತಲೆಬಾಗಬೇಕು. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಆರೋಗ್ಯಕರ ಸಮಾಜಮುಖಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು.

ಸಂಸ್ಥೆಯ ಮೇಲ್ವಿಚಾರಕರಾದ ರಾಘವೇಂದ್ರ ಮಾತನಾಡಿದರು. ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ಎಂ.ಬಿ. ಹಳೆಮನಿ ವಹಿಸಿದ್ದರು. ಅತಿಥಿಗಳಾಗಿ ಮಾದೇವಪ್ಪ ಹಡಪದ, ಶಾಲೆಯ ಗುರುಮಾತೆಯರು, ಸಿಬ್ಬಂದಿ ಉಪಸ್ಥಿತರಿದ್ದರು.


ಶುಶ್ರೂಷಾಧಿಕಾರಿಗಳ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

ಹಾವೇರಿ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಖಾಲಿ ಇರುವ ಒಂಬತ್ತು ಮಹಿಳಾ ಶುಶ್ರೂಷಾಧಿಕಾರಿಗಳ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಹಾವೇರಿ ಜಿಲ್ಲಾ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಂಪರ್ಕಿಸಬಹದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.